ಬಿರ್ಸಾ ಮುಂಡಾ ನಾಯಕತ್ವ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದ ಜಿಲ್ಲಾಧಿಕಾರಿ ಪಿಎನ್‌ ರವೀಂದ್ರ

| Published : Nov 16 2024, 12:35 AM IST

ಬಿರ್ಸಾ ಮುಂಡಾ ನಾಯಕತ್ವ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದ ಜಿಲ್ಲಾಧಿಕಾರಿ ಪಿಎನ್‌ ರವೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರ ವಿರುದ್ಧ ಸಿಡಿದ್ದೆದ್ದು ಅತಿ ಚಿಕ್ಕ ವಯಸ್ಸಿನಲ್ಲೇ ಏಳು ಸಾವಿರ ಆದಿವಾಸಿಗಳನ್ನು ಸಂಘಟಿಸಿ ಹೋರಾಟ ಮಾಡಿದ ಅಪ್ರತಿಮ ದೇಶ ಭಕ್ತರಾಗಿದ್ದರು ಎಂದು ಡಿಸಿ ಹೇಳಿದರು

-ಬಿರ್ಸಾ ಮುಂಡಾ ಅವರ 150ನೇ ಜಯಂತಿ ಕಾರ್ಯಕ್ರಮ । 7 ಸಾವಿರ ಆದಿವಾಸಿಗಳೊಂದಿಗೆ ಹೋರಾಡಿದ್ದ ವೀರಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಬ್ರಿಟಿಷರ ವಸಹಾತುಶಾಹಿ ಶೋಷಣೆಯ ವಿರುದ್ಧ ಸಿಡಿದೆದ್ದು ಹೋರಾಡಿದರು. ಇಂದಿನ ಯುವ ಸಮೂಹಕ್ಕೆ ಇವರ ಧೈರ್ಯ, ನಾಯಕತ್ವ ಗುಣಗಳು ಸ್ಫೂರ್ತಿಯಾಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಿರ್ಸಾ ಮುಂಡಾ ಅವರ 150ನೇ ಜಯಂತಿ (ಜನ ಜಾತಿಯ ಗೌರವ ದಿವಸ್)ಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬ್ರಿಟಿಷರು ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಶೋಷಣೆಗೆ ಮುಂದಾದಾಗ ಅವರ ಭೂಮಿ, ಆಚಾರ, ವಿಚಾರಗಳ ಮೇಲೆ ದೌರ್ಜನ್ಯ ಎಸೆಗುತ್ತಿದ್ದಾಗ, ಅದರ ವಿರುದ್ಧ ಸಿಡಿದ್ದೆದ್ದು ಅತಿ ಚಿಕ್ಕ ವಯಸ್ಸಿನಲ್ಲೇ ಏಳು ಸಾವಿರ ಆದಿವಾಸಿಗಳನ್ನು ಸಂಘಟಿಸಿ ಹೋರಾಟ ಮಾಡಿದ ಅಪ್ರತಿಮ ದೇಶ ಭಕ್ತರಾಗಿದ್ದರು ಎಂದು ಹೇಳಿದರು.

ಎಷ್ಟು ವರ್ಷ ಬದುಕುತ್ತೇವೆ ಅನ್ನೋದು ಮಾತ್ರವಲ್ಲ ಜೀವನದಲ್ಲಿ ದೇಶಕ್ಕೆ, ಸಮಾಜಕ್ಕೆ ಏನು ಕೊಡುಗೆ, ಸೇವೆ ನೀಡಿದೆವು ಎನ್ನುವುದು ಮುಖ್ಯ. ಅತಿ ಕಡಿಮೆ ಜೀವತಾವಧಿಯಲ್ಲಿಯು ಮಹೋನ್ನತ ಸಾಧನೆ ಮಾಡಿ ಜನಮಾನಸದಲ್ಲಿ, ಇತಿಹಾಸದ ಪುಟಗಳಲ್ಲಿ ಸವಾರ್ಣಾಕ್ಷರಗಳಲ್ಲಿ ಕಂಗೊಳಿಸುತ್ತಿರುವ ಸ್ವಾಮಿ ವಿವೇಕಾನಂದರು, ಬಸವಣ್ಣ, ಸರ್ವಜ್ಞರು ನೀಡಿದ ಕೊಡುಗೆಗಳು ಈ ಭೂಮಿ ಮೇಲೆ ಚಿರಸ್ಥಾಯಿಯಾಗಿ ಇರಲಿವೆ.

ಅದೇ ಸಾಲಿನಲ್ಲಿ ಬಿರ್ಸಾ ಮುಂಡ ಅವರ ಕೊಡುಗೆಗಳು ನಿಲ್ಲಲಿವೆ. ನಮ್ಮ ದೇಶೀಯ ಸಂಸ್ಕೃತಿ, ಕಲೆ, ಸೊಗಡು, ಸಂಪ್ರದಾಯಗಳು ಏನಾದರು ಇಂದು ಕೂಡ ಪೀಳಿಗೆಯಿಂದ ಪೀಳಿಗೆ ಸಾಗುತ್ತಿವೆ. ಜೀವಂತವಾಗಿ ಇವೆ ಎಂದರೆ ಅದಕ್ಕೆ ತಳ ಸಮುದಾಯಗಳು, ಕೊಡುಗೆಗಳೇ ಅತಿ ಮುಖ್ಯ ಕಾರಣ ಎಂದರು.

ಅತಿ ಕಡಿಮೆ ಅವಧಿಯಲ್ಲಿ ಆದಿವಾಸಿಗಳ ಕಲ್ಯಾಣ ಕಾರ್ಯಗಳನ್ನು ಮಾಡಿದ ಬಿರ್ಸಾ ಅವರನ್ನು “ಭೂಮಿಯ ಪಿತಾಮಹ, ಭೂಮಿಯ ತಂದೆ, ಭೂಮಿಯ ರಕ್ಷಕ” ಎಂದು ಆ ಭಾಗದ ಜನರು ಕರೆದರು. ಇಂತಹ ಅಪ್ರತಿಮ ಹೋರಾಟಗಾರನ ನೆನಪಿಗಾಗಿ ಭಾರತ ಸರ್ಕಾರವು ಇವರ ಜಯಂತಿಯನ್ನು ಜನ ಜಾತಿಯ ಗೌರವ ದಿವಸ್ ಆಗಿ ಆಚರಣೆ ಮಾಡುತ್ತಿದೆ ಎಂದರು.

ಪರಿತ್ಯಕ್ತ, ಅನಾಥ ಹಾಗೂ ಕಟುಂಬವಿಲ್ಲದ ಮಕ್ಕಳ ದತ್ತು ಪಡೆಯಲು ಕುರಿತಂತೆ ಸಮುದಾಯವನ್ನು ಜಾಗೃತಿ ಮೂಡಿಸಲು ಮಕ್ಕಳ ರಕ್ಷಣಾಧಿಕಾರಿ ನವರ್ತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿನದ ವಸತಿ ಶಾಲೆ ಕಾಲೇಜುಗಳಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಆರ್.ಪ್ರವೀಣ್ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತೇಜಾನಂದ ರೆಡ್ಡಿ, ವಾಲ್ಮೀಕಿ ಸಂಘದ ಮುಖಂಡರಾದ ಗೌರವಾಯಪ್ಪ, ಮುನಿವೆಂಕಟಸ್ವಾಮಿ, ಮೇಲೂರು ಮಂಜುನಾಥ, ಅಧಿಕಾರಿಗಳು ಇದ್ದರು.ಸಿಕೆಬಿ-1 ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಿರ್ಸಾ ಮುಂಡಾ ಅವರ 150ನೇ ಜಯಂತಿ (ಜನ ಜಾತಿಯ ಗೌರವ ದಿವಸ್)ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಾಲನೆ ನೀಡಿದರು.