ಸಾರಾಂಶ
ಜಿಲ್ಲೆಯಲ್ಲಿ 9,11,000 ಜಮೀನು । 5.50 ಲಕ್ಷ ಪಹಣಿ ಪತ್ರಗಳು: ಡಿಸಿ ಮೀನಾ ನಾಗರಾಜ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ತಾಲೂಕು ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಫಲಾನುಭವಿಯೊಬ್ಬರಿಗೆ ದಾಖಲಾತಿ ನೀಡುವ ಮೂಲಕ ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಪೌತಿ ಖಾತೆ ಆಂದೋಲನಕ್ಕೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ , ಜಿಲ್ಲೆಯಲ್ಲಿ 9,11,000 ಜಮೀನು ಹೊಂದಿದ ವರಿದ್ದು, ಸುಮಾರು 5.50 ಲಕ್ಷ ಪಹಣಿ ಪತ್ರಗಳಿವೆ. ಅವುಗಳಿಗೆ ಆಧಾರ್ ಜೋಡಿಸುವ ಸಂದರ್ಭದಲ್ಲಿ 97 ಸಾವಿರ ಮಾಲೀಕರು ಪೌತಿಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಒಂದು ಖಾತೆಗೆ ಒಬ್ಬರು ಮಾಲೀಕರು ಇದ್ದು, ಅವರಿಗೆ ಅಗತ್ಯ ಸೌಲಭ್ಯ ಸಿಗುವಂತಾಗಬೇಕು. ಆದರೆ, ಅನೇಕ ಸೌಲಭ್ಯಗಳನ್ನು ಪೌತಿಯಾಗಿರುವವರ ಹೆಸರಿನಲ್ಲೇ ವಿತರಿಸುತ್ತಿ ದ್ದೇವೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಇದೀಗ ಆಂದೋಲನ ಆರಂಭಿಸಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಕೃಷಿಕರಿಗೆ ನೀಡುವ ಸೌಲಭ್ಯಗಳನ್ನು ಪೌತಿಯಾದವರ ಹೆಸರಿನಲ್ಲಿ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂದು ಸಚಿವರ ಮೂಲಕ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ಜಿಲ್ಲೆಯಲ್ಲಿ ಈ ಕಾರ್ಯ ನಡೆಯಲಿದೆ ಎಂದು ಹೇಳಿದರು. ಕಾರಣಾಂತರದಿಂದ ಪೌತಿ ಖಾತೆಗಳು ಹಲವಾರು ವರ್ಷಗಳಿಂದ ಹಾಗೆಯೇ ಉಳಿದು ಹೋಗಿವೆ. ಪೌತಿಯಾದವರ ಖಾತೆ ಗಳು ಬದಲಾವಣೆ ಆಗಬೇಕಾಗಿರುವುದರಿಂದ ರೈತರು ತಾಲೂಕು ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ 40 ವೃತ್ತಗಳಲ್ಲಿ ಈ ಪೌತಿ ಖಾತೆ ಆಂದೋಲನ ಪ್ರಾರಂಭಿಸಲಾಗುವುದು. ಯಾವುದೇ ಕಾರಣಕ್ಕೂ ರೈತರು ಪೌತಿ ಖಾತೆ ಬದಲಾವಣೆಗೆ ಹಣ ಪಾವತಿಸುವ ಅಗತ್ಯವಿಲ್ಲ. ಗ್ರಾಮಲೆಕ್ಕಿಗರೇ ಈ ಕಾರ್ಯ ಮಾಡಿಕೊಡುತ್ತಾರೆ ಎಂದು ತಿಳಿಸಿದರು.40 ವೃತ್ತಗಳಲ್ಲಿ ಪೌತಿ ಖಾತೆ ತಯಾರಿಸಿಕೊಡುವ ಜೊತೆಗೆ ದುರಸ್ತಿ, ಪೋಡಿ ಇತ್ಯಾದಿ ದಾಖಲಾತಿ ಕೂಡ ಮಾಡಿಕೊಡ ಲಾಗುವುದು. ಈಗಾಗಲೇ 300ಕ್ಕೂ ಕಂದಾಯ ಗ್ರಾಮಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು, ಈ ಎಲ್ಲಾ ಕಾರ್ಯಗಳಿಗೆ ಪೂರಕವಾಗಿ ಆಯ್ದ ಗ್ರಾಮ ಲೆಕ್ಕಿಗರನ್ನು ಪೌತಿ ಖಾತೆ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗಣಕೀಕರಣ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿ 2024 ರಲ್ಲಿ ಅತ್ಯುತ್ತಮ ಕಂದಾಯ ಅಧಿಕಾರಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಬೆಳವಾಡಿ ಗ್ರಾಮ ಆಡಳಿತಾಧಿಕಾರಿ (ವಿಎಒ) ಈರಮ್ಮ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಚ್.ಡಿ.ತಮ್ಮಯ್ಯ, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ ಇದ್ದರು.ಕಾರ್ಯಕ್ರಮಕ್ಕೆ ಮುನ್ನ ಅಭಿಲೇಖಾಲಯ (ರೆಕಾರ್ಡ್ ರೂಂ) ದ ಗಣಕೀಕರಣ ದಾಖಲಾತಿಗಳ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ, ಐವರು ಫಲಾನುಭವಿಗಳಿಗೆ ದಾಖಲಾತಿಗಳನ್ನು ವಿತರಿಸಿದರು. 6 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಫಲಾನುಭವಿಗಳಿಗೆ ದಾಖಲಾತಿ ವಿತರಿಸಿದರು. ಡಿಸಿ ಮೀನಾ ನಾಗರಾಜ್, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಉಪ ತಹಶೀಲ್ದಾರ್ ರಾಮ್ರಾವ್ ದೇಸಾಯಿ ಇದ್ದರು.