ಕನ್ನಡಪ್ರಭ ವಾರ್ತೆ ಮೈಸೂರುಮಾಧ್ಯಮ ಸರ್ಕಾರಕ್ಕೆ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು. ಆಗ ಆಡಳಿತ ಪಕ್ಷ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024- 25ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಪತ್ರಕರ್ತರನ್ನು ಸೋಮವಾರ ಅವರು ಅಭಿನಂದಿಸಿ ಮಾತನಾಡಿದರು.ಪತ್ರಕರ್ತರು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಅಂತಹವರಿಗೆ ಪ್ರಶಸ್ತಿಗಳು ಬಂದಾಗ ಜವಾಬ್ದಾರಿ ಹೆಚ್ಚಳವಾಗುತ್ತದೆ, ಅದನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಇಂದು ಮಾಧ್ಯಮಗಳಲ್ಲಿ ಸಣ್ಣ ವಿಚಾರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.ಪತ್ರಕರ್ತರ ಭವನಕ್ಕೆ ಈ ವರ್ಷ 5 ಲಕ್ಷ ಹಾಗೂ ಮುಂದಿನ ವರ್ಷ 5 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.ಅಮೆರಿಕಾದ ವ್ಯಾಸ ಭಾರತೀ ತ್ರಿಯೋಗ ವಿವಿ ಕುಲಪತಿ ಡಾ.ಕೆ. ರಾಘವೇಂದ್ರ ಪೈ ಮಾತನಾಡಿ, ಇಂದು ಸಮಾಜದಲ್ಲಿ ಯಾವುದೇ ಸಮಸ್ಯೆ ಬಗ್ಗೆ ಯಾರೇ ಧ್ವನಿ ಎತ್ತಿದರೂ ಅದು ಬಗೆಹರಿಯುವುದಿಲ್ಲ. ಆದರೆ, ಮಾಧ್ಯಮಗಳು ಧ್ವನಿ ಎತ್ತಿದ್ದಾಗ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಆದರೆ, ಉತ್ತಮ ಕೆಲಸಗಳಿಗೆ ಒತ್ತು ಕಡಿಮೆ ಮಾಡಿ, ಋಣಾತ್ಮಕ ಚಿಂತನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅದರ ಬದಲು ಧನಾತ್ಮಕ ವಿಷಯಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತ ದಯಾಶಂಕರ ಮೈಲಿ, ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಪುರಸ್ಕೃತ ನಾಗರಾಜ್ ನವೀಮನೆ, ಗಿರಿಧರ್ ಪ್ರಶಸ್ತಿ ಪುರಸ್ಕೃತ ಪಿ.ಕೆ. ರವಿಕುಮಾರ್, ಅತ್ಯುತ್ತಮ ಪುಟ ವಿನ್ಯಾಸಗಾರ ಪ್ರಶಸ್ತಿ ಪುರಸ್ಕೃತ ಸಂದೇಶ್ ಮತ್ತು ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಪುರಸ್ಕೃತ ಶಂಕರ ಕಟ್ಟೆಮಳಲವಾಡಿ ಅವರನ್ನು ಅಭಿನಂದಿಸಲಾಯಿತು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಮಾಜಿ ಅಧ್ಯಕ್ಷ ಸಿ.ಕೆ. ಮಹೇಂದ್ರ, ಎಚ್.ಎಸ್. ವೆಂಕಟಪ್ಪ, ದಾ.ರಾ. ಮಹೇಶ್‌, ಬಿ. ರಾಘವೇಂದ್ರ, ಸಿ.ಕೆ. ಮಹೇಂದ್ರ ಮೊದಲಾದವರು ಇದ್ದರು.