ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಂಬಿ ಬಂದ ರೋಗಿಗಳನ್ನು ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕ ಎಂದು ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ ತಿಳಿಸಿದರು.ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವೈದ್ಯರ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ವೈದ್ಯ ದಂಪತಿಗೆ ಪುರಸ್ಕಾರ ಹಾಗೂ ವೈದ್ಯ ನಮನ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೋಗಿಗಳಿಗೆ ಚಿಕಿತ್ಸೆ ನೀಡುವ ನಿಸ್ವಾರ್ಥ ಸೇವೆಯನ್ನು ನಿರ್ವಹಿಸುವ ವೈದ್ಯರನ್ನು ರೋಗಿಗಳು ಕಷ್ಟದಲ್ಲಿ ಕೈ ಹಿಡಿಯುವ ದೇವರಂತೆ ಕಾಣುತ್ತಾರೆ. ಯಾವುದೇ ಕಾಯಿಲೆ ಇದ್ದರೂ ರೋಗಿಗಳನ್ನು ನಿಕೃಷ್ಟವಾಗಿ ನೋಡದೆ ಸೂಕ್ತ ಚಿಕಿತ್ಸೆ ನೀಡುವುದು ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ ಎಂದು ಅವರು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ವೈದ್ಯ ವೃತ್ತಿ ಸೇವಾ ಮನೋಭಾವವನ್ನು ಬೇಡುತ್ತದೆ. ಹಗಲು- ರಾತ್ರಿ ಎನ್ನದೆ ವೈದ್ಯರು ರೋಗಿಗಳ ಚೇತರಿಕೆಗಾಗಿ ದುಡಿಯುತ್ತಾರೆ. ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಜನರ ಜೀವ ಉಳಿಸುತ್ತಾರೆ. ಎಲ್ಲಾ ಕಡೆ ದೇವರು ಇರಲು ಆಗುವುದಿಲ್ಲ ಎಂದು ವೈದ್ಯರನ್ನು ಸೃಷ್ಟಿಸಿದ್ದಾನೆ ಅನಿಸುತ್ತದೆ ಎಂದರು.
ವೈದ್ಯ ದಂಪತಿಗೆ ಸನ್ಮಾನವೈದ್ಯ ದಂಪತಿಗಳಾದ ಡಾ.ಸಿ.ಆರ್. ತಿರುಮಲಾಚಾರ್- ಡಾ.ಟಿ.ಎ. ವೀಣಾ, ಡಾ.ಪಿ.ಸಿ. ಕುಮಾರಸ್ವಾಮಿ, ಡಾ. ನಾಗರಾಜು- ಡಾ.ಆರ್. ಜಯಮಾಲ, ಡಾ.ವೈ.ಡಿ. ರಾಜಣ್ಣ- ಡಾ.ಎಚ್.ಎಂ. ಚಂದ್ರಕಲಾ, ಡಾ.ಪಿ. ಶಿವರಾಜು- ಡಾ.ಎಂ. ಭಾರತಿ, ಡಾ.ಎಲ್. ರವಿ- ಡಾ.ಎಚ್.ಕೆ. ಸೌಮ್ಯಶ್ರೀ, ಡಾ.ಕೆ.ಜಿ. ಗುರುರಾಜ್- ಡಾ. ಸೌಮ್ಯ ಗುರುರಾಜ್ ಹಾಗೂ ಡಾ.ಸಾ.ರಾ. ಧನುಷ್- ಡಾ. ಶೀತಲ್ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಕವಯತ್ರಿ ಡಾ. ಲತಾ ರಾಜಶೇಖರ್, ಸಮಾಜ ಸೇವಕಿ ಪುಷ್ಪಾ ಅಯ್ಯಂಗಾರ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಆಧ್ಯಾತ್ಮ ಚಿಂತಕಿ ಸುಮತಿ ಸುಬ್ರಹ್ಮಣ್ಯ ಮೊದಲಾದವರು ಇದ್ದರು.