ಸಾರಾಂಶ
ಜಗಳೂರು: ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯಲು ಮೇಲು, ಕೀಳು ಭಾವನೆಗಳನ್ನು ಬಿಟ್ಟು ಪ್ರಾಮಾಣಿಕವಾಗಿ ಅಂತರಂಗ ಶುದ್ಧಿಯಿಂದ ಕೆಲಸ ಮಾಡಬೇಕು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಜನವರಿ ೧೧ ಮತ್ತು ೧೨ರಂದು ಎರಡು ದಿನಗಳ ಕಾಲ ನಡೆಯಲಿರುವ ೧೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.ಈ ಬಾರಿ ನಮ್ಮ ತಾಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿದ್ದೇವೆ. ಯಾವುದೇ ಚ್ಯುತಿ ಬಾರದಂತೆ ಮಾಡಲು ನಮಗೆ ಸಹಾಕಾರ ನೀಡಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಬದಿಗೊತ್ತಿ ಸಮ್ಮೇಳನದ ಯಶಸ್ವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಮ್ಮೇಳನದ ಪೂರ್ವ ಸಿದ್ಧತೆ, ಅತಿಥಿಗಳಿಗೆ ಸನ್ಮಾನ, ವೇದಿಕೆ ನಿರ್ಮಾಣ, ಆರ್ಥಿಕ ವೆಚ್ಚದ ಬಗ್ಗೆ ಮತ್ತು ಅಗತ್ಯ ವಸ್ತುಗಳ ಖರೀದಿ ಬಗ್ಗೆ ಶಾಸಕರಿಗೆ ಮತ್ತು ಸಭೆಗೆ ಮನವರಿಕೆ ಮಾಡಿಕೊಟ್ಟರು.
ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿ ಜ.೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಧ್ವಜಾರೋಹಣ, ಸಮ್ಮೇಳನದ ಮೆರವಣಿಗೆ, ಉದ್ಘಾಟನಾ ಸಮಾರಂಭ, ಸಾಹಿತ್ಯ ಗೋಷ್ಠಿಗಳ ಬಗ್ಗೆ ಮತ್ತು ಅತಿಥಿಗಳ ಬಗ್ಗೆ ಮಾಹಿತಿ ನೀಡಿದರು.ಜ.೨ ರಂದು ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಕುವೆಂಪು ಪುತ್ಥಳಿಗೆ ಪೂಜೆ ಸಲ್ಲಿಸಿದ ನಂತರ ರಥ ಜಾಗೃತಿ ಯಾತ್ರೆ ೨೨ ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳಿಗೂ ಸಂಚರಿಸಲಿದೆ. ಶಾಸಕ ಬಿ.ದೇವೇಂದ್ರಪ್ಪ ಮತ್ತು ಕಾರ್ಯಾಧ್ಯಕ್ಷ ಡಾ.ಎ.ಬಿ.ರಾಮಚಂದ್ರ, ಬಿ.ವಾಮದೇವಪ್ಪ ಚಾಲನೆ ನೀಡಲಿದ್ದಾರೆ. ಅದ್ಧೂರಿಯಾಗಿ ರಥ ನಿರ್ಮಾಣವಾಗಿದ್ದು ಅದರ ಉಸ್ತುವಾರಿಯನ್ನು ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಧನ್ಯಕುಮಾರ್, ಬಿ.ಬಸವರಾಜ್ ಅವರಿಗೆ ವಹಿಸಲಾಯಿತು.
ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಕೆ.ಸುಜಾತಮ್ಮ ರಾಜು, ಗೌರವ ಕಾರ್ಯದರ್ಶಿ ಗೀತಾಮಂಜು, ಬಿ.ಮಾರನಾಯಕ, ಕೆ.ಕೃಷ್ಣಮೂರ್ತಿ, ಹಿರಿಯ ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್, ಬಿ.ಮಹೇಶ್ವರಪ್ಪ, ಡಾ.ನಾಗಲಿಂಗಪ್ಪ, ಹಟ್ಟಿತಿಪ್ಪೇಸ್ವಾಮಿ,ಪ.ಪಂ. ಮಾಜಿ ಅಧ್ಯಕ್ಷ ಮಂಜುನಾಥ, ಎನ್ಜಿಒ ಅಧ್ಯಕ್ಷ ತಿಪ್ಪೇಸ್ವಾಮಿ, ಹಿರಿಯ ಪತ್ರಕರ್ತ ಶ್ರೀನಿವಾಸ್, ಜಗದೀಶ್ ಕೂಲಂಬಿ, ಟಿ.ಸ್ವಾಮಿ ಸೇರಿದಂತೆ ಮತ್ತಿತರರಿದ್ದರು.
ಜನವರಿ ೧೩ ರಂದು ಜಗಳೂರು ಜಲೋತ್ಸವ ಕಾರ್ಯಕ್ರಮಜನವರಿ ೧೩ ರಂದು ''''''''ಜಗಳೂರು ಜಲೋತ್ಸವ'''''''' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.೫೦ ವರ್ಷಗಳ ಬಳಿಕ ಎಲ್ಲ ಕೆರೆಗಳಿಗೂ ನೀರು ಹರಿದು ಬಂದಿದೆ. ಕೆರೆಗಳು ತುಂಬಿ ತುಳುಕುತ್ತಿವೆ. ತಾಲೂಕನ್ನು ಪ್ರಾಕೃತಿಕವಾಗಿ, ಧಾರ್ಮಿಕವಾಗಿ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು. ಹೀಗಾಗಿ ನಮ್ಮ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಸಾಕ್ಷಾಚಿತ್ರ ತಯಾರಾಗಿದೆ. ಹಗಲು ರಾತ್ರಿ ಕೆಲಸ ಮಾಡಿ. ದುಂದುವೆಚ್ಚಕ್ಕೆ ಅವಕಾಶ ಕೊಡದೇ ಸರಳವಾಗಿ ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.