ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಪಂ ಮತ್ತು ತೋಟಗಾರಿಕೆ ಇಲಾಖೆಯಿಂದ ನಗರದ ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ಹೂಗಳಿಂದ ಅಲಂಕರಿಸಿದ ಇಂಡಿಯಾ ಗೇಟ್, ಗಣರಾಜ್ಯೋತ್ಸವದ ಶುಭಾಷಯ ಕೋರುವ ಮಾದರಿ, ಹೂವುಗಳಿಂದ ಅಲಂಕರಿಸಿದ ವೀಣೆ, ಗೃಹೋಪಯೋಗಿ ದಿನಬಳಕೆ, ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆಯಲ್ಲಿ ತೋಟಗಾರಿಕೆ, ಮಾದರಿ ಕೈತೋಟ, ಸೆಲ್ಫೀ ಪಾಯಿಂಟ್ ಗಳು, ಹೂವು ಕುಂಡಗಳ ಜೋಡಣೆ, ವಿವಿಧ ತರಕಾರಿಗಳ ಕೆತ್ತನೆ, ಹೈಡ್ರೋಪೋನಿಕ್ಸ್ ತಾಂತ್ರಿಕತೆಯು ಬಹಳ ಆಕರ್ಷಕವಾಗಿ ಮೂಡಿಬಂದಿವೆ. ನಾಳೆ ಮತ್ತು ನಾಡಿದ್ದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಇಲ್ಲಿ ಪ್ರದರ್ಶನ ಇರಲಿದೆ.ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ರೈತರಿಗೆ ಉಚಿತ ಪ್ರವೇಶ ಇರುತ್ತದೆ. ವಿವಿಧ ರೀತಿಯ ದೇಶಿಯ ಹಾಗೂ ವಿದೇಶಿಯ ಹೂ, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ ಮತ್ತು ಇಲಾಖಾ ಯೋಜನೆಗಳ ಮಾಹಿತಿ ಪ್ರದರ್ಶನ ಇರಲಿದೆ. ಈ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುವಂತೆ ಮನವಿ ಮಾಡಿದರು.
ವಿವಿಧ ತರಕಾರಿಗಳ ಕೆತ್ತನೆಗಳು ಆಕರ್ಷಣೆಯ ಕೇಂದ್ರ ಬಿಂದುವಿವಿಧ ತರಕಾರಿಗಳನ್ನು ಬಳಸಿ ಕೆತ್ತಿದ ಭಗವಾನ್ ಬುದ್ಧ, ಡಾ.ಬಿ ಆರ್ ಅಂಬೇಡ್ಕರ್ ,ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ, ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲನಚಿತ್ರ ನಟ ಶಂಕರ್ ನಾಗ್, ಗಣಪತಿ, ನವಿಲು, ಕಳಶ, ಮಿಕ್ಕಿ ಮೌಸ್, ಈಶ್ವರ ಲಿಂಗ, ಹಂಸ, ಮೀನು, ಮೊಸಳೆ, ಕುದುರೆ ಡೈನೋಸಾರಸ್, ರಾಷ್ಟ್ರೀಯ ತಿರಂಗ ಬಾವುಟ ಇನ್ನೂ ಮುಂತಾದ ಕಲಾಕೃತಿಗಳು ಪ್ರದರ್ಶನದಲ್ಲಿ ಜನಮನಸೂರೆಗೊಂಡವು.