2026ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆ ಶೇ.95.42ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನಿಕೇರಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
2026ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆ ಶೇ.95.42ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನಿಕೇರಿ ತಿಳಿಸಿದ್ದಾರೆ.ಜಿಲ್ಲೆಯಲ್ಲಿ 14596 ಬಾಲಕರು ಮತ್ತು 15515 ಬಾಲಕಿಯರು ಸೇರಿ ಒಟ್ಟು 30111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 13589 ಬಾಲಕರು, 15142 ಬಾಲಕಿಯರು ಸೇರಿ ಒಟ್ಟು 28731 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ.93.10ರಷ್ಟು ತೇರ್ಗಡೆ ಹೊಂದಿದ್ದರೆ, ಬಾಲಕಿಯರು ಶೇ.97.60ರಷ್ಟು ತೇರ್ಗಡೆ ಹೊಂದಿದ್ದಾರೆ. ಬಾಲಕರು 1007 ಮತ್ತು ಬಾಲಕಿಯರು 373 ಸೇರಿ ಒಟ್ಟು 1380 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
2024-25ನೇ ಸಾಲಿನಲ್ಲಿ ಶೇ.82.3ರಷ್ಟು ಫಲಿತಾಂಶ ಪಡೆಯುವ ಮೂಲಕ 16ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಶೇ.13.12ರಷ್ಟು ಫಲಿತಾಂಶದಲ್ಲಿ ಹೆಚ್ಚಿಗೆ ಕಂಡುಬಂದಿದೆ. 625ಕ್ಕೆ 621 ಅಂಕ ಪಡೆದು 5 ಜನ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, 625ಕ್ಕೆ 620 ಅಂಕ ಪಡೆದ 5 ಜನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 619 ಅಂಕ ಪಡೆದ 4 ಜನ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 501 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದಿದ್ದಾರೆ.ಬಾದಾಮಿ ತಾಲೂಕಿನಲ್ಲಿ 4974 ಪೈಕಿ 4812 (ಶೇ.96.74) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ 4583 ಪೈಕಿ 4335 (ಶೇ.94.59), ಬೀಳಗಿ ತಾಲೂಕಿನಲ್ಲಿ 2742 ಪೈಕಿ 2449 (ಶೇ.89.31), ಹುನಗುಂದ ತಾಲೂಕಿನಲ್ಲಿ 5085 ಪೈಕಿ 4904 (ಶೇ.96.44), ಜಮಖಂಡಿ ತಾಲೂಕಿನಲ್ಲಿ 7707 ಪೈಕಿ 7387 (ಶೇ.95.85) ಹಾಗೂ ಮುಧೋಳ ತಾಲೂಕಿನಲ್ಲಿ 5188 ಪೈಕಿ 4844 (ಶೇ.93.37) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ ಫಲಿತಾಂಶದಲ್ಲಿ ಬಾದಾಮಿ ತಾಲೂಕು ಪ್ರಥಮ ಸ್ಥಾನ ಪಡೆದರೆ, ಹುನಗುಂದ ದ್ವಿತೀಯ ಹಾಗೂ ಜಮಖಂಡಿ ತಾಲೂಕು ತೃತೀಯ ಸ್ಥಾನ ಪಡೆದುಕೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
625ಕ್ಕೆ 621 ಅಂಕ ಪಡೆದ 4 ವಿದ್ಯಾರ್ಥಿಗಳು: ಬಾಗಲಕೋಟೆಯ ಸಮೃದ್ದಿ ಗುರುಕುಲ ಶಾಲೆಯ ಆದರ್ಶ ಶೀಪರಮಟ್ಟಿ, ಜಮಖಂಡಿ ತಾಲೂಕಿನ ಹಿಪ್ಪರಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನವೀನ ರುದ್ರಪ್ಪ ಕುಂಬಾರ, ಬಾದಾಮಿಯ ಗೌರಮ್ಮ ನಾಗಪ್ಪ ಕೋಟ ಆಂಗ್ಲ ಮಾಧ್ಯಮ ಶಾಲೆಯ ಈಶ್ವರಿ ಹಳ್ಳೂರ, ಜಮಖಂಡಿ ತಾಲೂಕಿನ ರಾಮಪೂರ ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಸುಶಾಂತ ಬುರ್ಲಿ 625ಕ್ಕೆ 621 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 625ಕ್ಕೆ 620 ಅಂಕ ಪಡೆದ 5 ವಿದ್ಯಾರ್ಥಿಗಳು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡರೆ, 625ಕ್ಕೆ 619 ಅಂಕ ಪಡೆದ 4 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನಿಕೇರಿ, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಎಸ್.ಹಾಲವರ ಅಭಿನಂದನೆ ಸಲ್ಲಿಸಿದ್ದಾರೆ.