ದೀಪಾವಳಿ ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿಯ ಪ್ರತೀಕ: ದತ್ತಾತ್ರೇಯ ಪಾಟ್ಕರ್

| Published : Nov 09 2024, 01:06 AM IST

ದೀಪಾವಳಿ ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿಯ ಪ್ರತೀಕ: ದತ್ತಾತ್ರೇಯ ಪಾಟ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ದೀಪಾವಳಿ ಸಂಭ್ರಮ-೨೦೨೪ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಪ್ರತೀವರ್ಷ ಕಾರ್ತಿಕ ಮಾಸದಲ್ಲಿ ಬರುವ ಬೆಳಕಿನ ಹಬ್ಬ ದೀಪಾವಳಿ, ಪ್ರಾಚೀನ ಭಾರತೀಯ ಪರಂಪರೆ, ಜೀವನ ಪದ್ಧತಿ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಆಚರಣೆ - ನಂಬಿಕೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ. ಹಬ್ಬಗಳ ರಾಜ ‘ದೀಪಾವಳಿ’ ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕ ಎಂದು ಅನಿವಾಸಿ ಭಾರತೀಯ, ಬಂಟಕಲ್ಲು ಹೇರೂರಿನ ದತ್ತಾತ್ರೇಯ ಪಾಟ್ಕರ್ ಹೇಳಿದರು.

ಅವರು ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ಏರ್ಪಡಿಸಿದ ದೀಪಾವಳಿ ಸಂಭ್ರಮ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡುವ ಪ್ರತಿಯೊಂದು ಆಚರಣೆಗಳ ಹಿಂದೆ ಅನಾದಿ ಕಾಲದಿಂದಲೂ ಬಂದ ವಿವಿಧ ಘಟನೆಗಳನ್ನು ವಿವರಿಸಿ, ದುಷ್ಟ ಶಕ್ತಿಗಳ ನಿಗ್ರಹ, ಶಿಷ್ಟ ಪರಂಪರೆಯ ರಕ್ಷಣೆಗೆ ಭಗವಂತ ವಿವಿಧ ಅವತಾರಗಳನ್ನು ತಾಳಿ ಲೋಕೋದ್ಧಾರ ಮಾಡಿದ ನಂಬಿಕೆಗಳು ಅಡಗಿವೆ. ಕೃಷಿ ಸಂಸ್ಕೃತಿ ಭೂಮಿ ಪೂಜೆ, ಗೋಪೂಜೆ, ಅಷ್ಟಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ, ತುಳಸೀ ಪೂಜೆ, ಆಯುಧ ಪೂಜೆಗಳ ಹಿಂದೆ ಜೀವನ ಪದ್ಧತಿಯ ಮೌಲ್ಯಗಳು ಅಡಗಿವೆ ಎಂದರು.ಕಾರ್ಯಕ್ರಮ ಸಂಯೋಜಕ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹಬ್ಬಗಳು ಪ್ರೀತಿ ಸೌಹಾರ್ದತೆ, ಸಂತೋಷ, ಸಂಭ್ರಮದ ಸಂಕೇತವಾಗಿದ್ದು, ಬದುಕಿಗೆ ಕಾರಣೀಭೂತರಾದ ಎಲ್ಲವನ್ನೂ ಕೃತಜ್ಞತೆಯಿಂದ ಸ್ಮರಿಸಿ ಬಾಂಧವ್ಯವನ್ನು ಧನಾತ್ಮಕವಾಗಿ ಬೆಸೆಯುವ ಸಂಕೇತವಾಗಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿ ಹಬ್ಬದ ಶುಭಾಶಯ ಕೋರಿದರು.

ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ ಶುಭಾಶಂಸನೆಗೈದರು. ಸಹ ಸಂಯೋಜಕ ಡಾ.ವಿಠಲ್ ನಾಯಕ್ ಪರಿಚಯಿಸಿದರು. ಶ್ರೀನಿಧಿ, ಉಷಾ ಮರಾಠೆ ಪ್ರಾರ್ಥಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜೂಡ್ ಡಿಸೋಜ ವಂದಿಸಿದರು. ವಿಷ್ಣುಮೂರ್ತಿ ಸರಳಾಯ ನಿರೂಪಿಸಿದರು. ಮೈಕಲ್ ಮತಾಯಸ್ ಸಹಕರಿಸಿದರು. ಸಾಮೂಹಿಕವಾಗಿ ದೀಪ ಪ್ರಜ್ವಲನ, ರಘುಪತಿ ಐತಾಳ್ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.