ಬೆಂಗ್ಳೂರಲ್ಲಿ ಕುಡಿವ ನೀರಿನ ದರ ಏರಿಕೆ: ಡಿಕೆಶಿ ಸುಳಿವು

| Published : Jun 19 2024, 01:31 AM IST / Updated: Jun 20 2024, 10:33 AM IST

DK Shivakumar

ಸಾರಾಂಶ

ಜಲ ಮಂಡಳಿ ನಷ್ಟದಲ್ಲಿದ್ದು ನೌಕರರ ಸಂಬಳಕ್ಕೂ ತತ್ವಾರವಿರುವ ಕಾರಣ ನೀರಿನ ದರ ಹೆಚ್ಚಳ ಅನಿವಾರ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ನುಡಿದಿದ್ದಾರೆ.

 ಬೆಂಗಳೂರು : ಬೆಂಗಳೂರಿನಲ್ಲಿ ಕುಡಿಯುವ ನೀರಿನ ಶುಲ್ಕ 14 ವರ್ಷದಿಂದ ಏರಿಕೆಯಾಗಿಲ್ಲ. ಹಾಗಾಗಿ ನೀರಿನ ದರ ಹೆಚ್ಚಳ ಅನಿವಾರ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಜಲ ಮಂಡಳಿಯು ಹಣ ಇಲ್ಲದೆ ವಿದ್ಯುತ್‌ ಬಿಲ್ ಕಟ್ಟಲು ಆಗುತ್ತಿಲ್ಲ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ. ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಆದರೆ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕಾ ಬೇಡವಾ ನೀವೇ ಹೇಳಿ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯವರು ಇದ್ದಾಗ ವಿದ್ಯುತ್‌ ಬೆಲೆ ಜಾಸ್ತಿ ಮಾಡಿದರು. ನಾವು ಬಂದು ಕಡಿಮೆ ಮಾಡಿದೆವು. ಕಡಿಮೆ ಮಾಡಿದರೆ ಮಾತೇ ಆಡುವುದಿಲ್ಲ. ದರ ಹೆಚ್ಚಿಸಿದರೆ ಮಾತನಾಡುತ್ತೀರಿ. ₹400 ಇದ್ದ ಗ್ಯಾಸ್ ಸಿಲಿಂಡರ್ ₹1 ಸಾವಿರ ಆಯಿತು. ₹75 ಇದ್ದ ಪೆಟ್ರೋಲ್ ₹100 ಆಯಿತು. ₹3 ಜಾಸ್ತಿನಾ ಅಥವಾ ₹30 ಜಾಸ್ತಿನಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.