ಸಾರಾಂಶ
ಡಿ.ಕೆ. ಶಿವಕುಮಾರ್ ಗೆ ಒಂದು ಅವಕಾಶ ಸಿಗಬೇಕು ಅನ್ನುವ ಕಾರಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಸ್ಪಷ್ಟಪಡಿಸಿದ್ದಾರೆ.
ಕುಣಿಗಲ್ : ಡಿ.ಕೆ. ಶಿವಕುಮಾರ್ ಗೆ ಒಂದು ಅವಕಾಶ ಸಿಗಬೇಕು ಅನ್ನುವ ಕಾರಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಸ್ಪಷ್ಟಪಡಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಕ್ಬಾಲ್ ಹುಸೇನ್ ಅವರ ಮಾತು ಗೊಂದಲ ಆಗಬಾರದು ಅನ್ನುವ ಕಾರಣಕ್ಕೆ ನೊಟೀಸ್ ಕೊಟ್ಟಿದ್ದಾರೆ. ಆದರೆ ಬೇರೆ ಮಂತ್ರಿಗಳು ನಮ್ಮ ಪಕ್ಷದ ಒಂದು ಶಿಸ್ತಿನ ವಿರುದ್ಧವಾಗಿ ಮಾತನಾಡೋದು ಎಷ್ಟು ಸರಿ ಅನ್ನುವ ನೋವು ನನಗೆ ಕಾಡುತ್ತಿದೆ. ಆ ವಿಚಾರದಲ್ಲಿ ಮಾನದಂಡ ಎಲ್ಲರಿಗೂ ಒಂದೇ ಇರಬೇಕು ಅನ್ನೋದನ್ನು ನಾನು ಕೇಳಿಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಅದರಲ್ಲೂ ಹೆಚ್ಚಿನದಾಗಿ ಡಿಕೆ ಶಿವಕುಮಾರ್ ಮೋಸ್ಟ್ ಕಾಂಗ್ರೆಸ್ ರಾಯಲಿಸ್ಟ್ ಎಂದ ಅವರು ಡಿಕೆ ಶಿವಕುಮಾರ್ ಅವತ್ತಿಂದಲೂ ನಾವು ಶಿಸ್ತಿನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ನೀವು ಹಗುರವಾದ ಹೇಳಿಕೆ ಕೊಟ್ಟು ಕಾರ್ಯಕರ್ತರಿಗೆ, ಪಕ್ಷಕ್ಕೆ ಮುಜುಗರ ಮಾಡಬಾರದು ಅನ್ನುವ ಆದೇಶವನ್ನು ಆವತ್ತಿನಿಂದಲೂ ಹೇಳಿದ್ದಾರೆ. ಹಾಗಾಗಿ ಇಲ್ಲಿ ತಲೆಬಾಗಿಸಿ ಶಿಸ್ತಿನಿಂದ ಇರಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಡಿಕೆ ಶಿವಕುಮಾರ್ ಅವರು ಮೇಕೆದಾಟು ಕಾರ್ಯಕ್ರಮ ಮಾಡಿದ್ದು ಹಾಗೂ ಕೋವಿಡ್ ಸಮಯದಲ್ಲಿ ತಮ್ಮ ಜೀವ ಲೆಕ್ಕಿಸದೆ ಬೀದಿಗಿಳಿದು ಹೋರಾಟ ಮಾಡಿದ್ದು ಹಾಗೂ ಭಾರತ್ ಜೋಡೋ ಮಾಡಿ ಕೊಟ್ಟಿದ್ದನ್ನು ನೋಡಿ ಅವರು ಮುಖ್ಯಮಂತ್ರಿಯಾಗಬೇಕೆಂಬ ಆಸೆಯನ್ನು ಸ್ನೇಹಿತರಾದ ಇಕ್ಬಾಲ್ ಹುಸೇನ್ ಹೇಳಿದ್ದಾರೆ ಎಂದರು.ಇದೆಲ್ಲ ಸಂಘಟನಾ ಶಕ್ತಿ ಇವತ್ತಿನಿಂದಲ್ಲ, 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಹೋರಾಟ ಮಾಡಿ 140 ಸೀಟ್ ತಂದುಕೊಟ್ಟಿರುವುದು ಸುಲಭದ ಮಾತಲ್ಲ ಎಂದರು.
ಡಿಕೆಶಿ ಉನ್ನತ ಸ್ಥಾನಕ್ಕೆ ಹೋಗಬೇಕು ಅಂತಾ ಆಸೆ:
ಡಿಕೆ ಶಿವಕುಮಾರ್ ಅವರು ಉನ್ನತ ಸ್ಥಾನಕ್ಕೆ ಹೋಗಬೇಕು ಅಂತ. ನನಗೂ ಆಸೆ ಇದೆ ಎಂದ ಅವರು ನಿಮ್ಮ ಮುಂದೆ ಹೇಳಿದರೆ ನಾಳೆ ನಾನು ನೋಟಿಸ್ ತಗೋಬೇಕಾಗುತ್ತೆ. ಸುರ್ಜೆವಾಲಾ ಅವರಿಗೆ ಸಮಯ ಕೊಡಿ ಅಂತ ಕೇಳಿದ್ದೇನೆ. ಬಹಳಷ್ಟು ಸಂಕಷ್ಟಗಳು ಇವೆ. ನಮ್ಮ ಮನೆಯಲ್ಲೂ ಹೋರಾಟದ ಮನೋಭಾವನೆ ಇರೋರಿಗೆ ಅವಕಾಶ ಮಾಡಿಕೊಡಿ ಅನ್ನೋದನ್ನ ಕೇಳುವಂತಹದ್ದು ಬಹಳಷ್ಟು ಇದೆ ಎಂದರು.
ಸುರ್ಜೆವಾಲಾ ಅವರ ಮುಂದೆ ನನ್ನಲ್ಲಿ ವೈಯಕ್ತಿಕವಾಗಿ ಕೆಳಹಂತದಲ್ಲಿ ಕಾರ್ಯಕರ್ತರ ಆಸೆಗಳನ್ನು ಮತ್ತು ಸರ್ಕಾರ ಯಾವ ರೀತಿ ಮುಂದೆ ಹೋಗಬೇಕು ಎಂಬ ಹಿರಿಕರ ಮಾತುಗಳನ್ನು ಹೇಳುವುದಾಗಿ ತಿಳಿಸಿದರು. ಸುರ್ಜೆವಾಲಾ ನನಗೆ ಸೋಮವಾರ ಬರಲಿಕ್ಕೆ ಹೇಳಿದ್ದಾರೆ ಎಂದರು.ಮಗು ಚಿವುಟೋದು ಇವರೆ, ತೊಟ್ಟಿಲು ತೂಗೋದು ಇವರೆ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ರಂಗನಾಥ್ ಡಿಕೆ ಶಿವಕುಮಾರ್ ಅವರನ್ನು ನಾನು ಹತ್ತಿರದಿಂದ ನೋಡಿದವನು. ಅವರು ಆ ತರದ ಮಾಡೋದಾಗಿದ್ರೆ ಯಾವತ್ತೋ ಮಾಡಬಹುದಿತ್ತು ಎಂದರು.
ಸೆಪ್ಟೆಂಬರ್ ಕ್ರಾಂತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬಹಳಷ್ಟು ಜನ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ನೋ ಕಾಮೆಂಟ್. ಈಗ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ನಿರ್ವಹಣಾ ವ್ಯವಸ್ಥೆ ಚೆನ್ನಾಗಿದೆ. ಇನ್ನು ಹೆಚ್ಚಿಗೆ ಮಾಡಬೇಕು ಅಂತ ಕೇಳುತ್ತೇವೆ. ನಮ್ಮಲ್ಲಿರುವ ಆಸೆಗಳನ್ನು ನಾನು ಪಕ್ಷದ ಪೋರಮ್ನಲ್ಲಿ ಹೇಳಲಿಕ್ಕೆ ಬಯಸುತ್ತೇನೆ. ನನಗೆ ಅನುದಾನ ಚೆನ್ನಾಗಿಯೆ ಸಿಕ್ಕಿದೆ. ನಾವೆಲ್ಲಾ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯ ನಿರ್ವಹಣಾ ವ್ಯವಸ್ಥೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಬಗ್ಗೆ ಹ್ಯಾಪಿಯಾಗಿರುವುದಾಗಿ ತಿಳಿಸಿದರು.