ಡಿಕೆಶಿ ಅವರನ್ನು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ

| Published : Jun 29 2024, 12:35 AM IST

ಸಾರಾಂಶ

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಯಾರೂ ಸಹ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಟಾರ್ಗೆಟ್ ಮಾಡುತ್ತೇವೆ ಎಂದರೆ ಅದು ಅವರ ಭ್ರಮೆ ಆಗಲಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಯಾರೂ ಸಹ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಟಾರ್ಗೆಟ್ ಮಾಡುತ್ತೇವೆ ಎಂದರೆ ಅದು ಅವರ ಭ್ರಮೆ ಆಗಲಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಆದ ವ್ಯಕ್ತಿತ್ವ ಮತ್ತು ಹೋರಾಟದ ಮೂಲಕ 30 - 40 ವರ್ಷಗಳಿಂದ ಸುಧೀರ್ಘವಾಗಿ ರಾಜಕೀಯ ಮಾಡುತ್ತಿದ್ದಾರೆ. ಯಾರ ಮರ್ಜಿನಲ್ಲಿ ಬಂದವರಲ್ಲ, ಯಾರದ್ದೋ ಹೆಸರಿನಲ್ಲಿ, ಹಂಗಿನಲ್ಲಿ ಬೆಳೆದವರಲ್ಲ. ಹೋರಾಟ ಮತ್ತು ಜನ ಸೇವೆಯ ಮೂಲಕವೇ ಬಂದವರು. ಅವರನ್ನು ಟಾರ್ಗೆಟ್ ಮಾಡಿ ಲೀಡರ್ ಆಗುತ್ತೇವೆ ಎನ್ನುವುದು ಭ್ರಮೆ ಎಂದರು.

ಚಂದ್ರಶೇಖರ ಸ್ವಾಮೀಜಿಗಳು ವ್ಯಕ್ತಪಡಿಸಿರುವುದು ಅವರ ವೈಯಕ್ತಿಕ ಮತ್ತು ಸಮುದಾಯದ ಅಭಿಪ್ರಾಯ. ಎಲ್ಲವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಖಾಲಿ ಆದಾಗ ಚರ್ಚೆ ಮಾಡೋಣ. ಅವರವರ ಹೇಳಿಕೆಗಳು ಅವರವರ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತವೆ. ಸಮಾಜ ಎಲ್ಲವನ್ನು ಗಮನಿಸುತ್ತಿದೆ. ಪಕ್ಷಕ್ಕೆ ಅಧಿಕಾರ ನೀಡಿರುವುದು ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು.

ಅಧಿಕಾರ ಮತ್ತು ಹುದ್ದೆ ಯಾರಿಗೂ ಶಾಶ್ವತ ಅಲ್ಲ. ಒಳ್ಳೆಯದು ಬಿಟ್ಟು ಮಿಕ್ಕಿದ್ದೆಲ್ಲವೂ ಚರ್ಚೆ ಆಗುತ್ತಿದೆ. ಜನ ನಮಗೆ ಮ್ಯಾನ್‌ಡೇಟ್ ನೀಡಿರುವುದು ಒಳ್ಳೆಯ ಆಡಳಿತ ನೀಡಿ ಎಂದು ಅದಕ್ಕೆ ಯೋಗ್ಯತೆ ಇಲ್ಲ ಎಂದರೆ ಎಲ್ಲರೂ, ಎಲ್ಲವನ್ನು ಬಿಟ್ಟು ಚುನಾವಣೆಗೆ ಹೋಗುವುದು ಸೂಕ್ತ ಎಂದು ಡಿ.ಕೆ.ಸುರೇಶ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಬಾಕ್ಸ್‌................

ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ: ಇಕ್ಬಾಲ್ ಹುಸೇನ್

ರಾಮನಗರ : ರಾಜ್ಯದಲ್ಲಿ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಅವಕಾಶವಿದ್ದು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ತಮ್ಮ ವಯುಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಂತೆ ಕೆಲವರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಸಚಿವ ಕೆ.ಎನ್.ರಾಜಣ್ಣ ಅವರು ಸಹ ನಮ್ಮ ನಾಯಕರೇ ಅವರು ಪ್ರೀತಿ ಇರುವವರ ಪರ ಹೇಳಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಏನೇ ಆದರೂ ಅಂತಿಮ ತೀರ್ಮಾನವನ್ನು ಹೈ ಕಮಾಂಡ್ ತೆಗೆದುಕೊಳ್ಳಲಿದೆ ಎಂದರು.

ರಾಜ್ಯದಲ್ಲಿ ಮೂವರು ಡಿಸಿಎಂ ಸೃಷ್ಟಿಸುವ ಚರ್ಚೆಯನ್ನು ಕೆಲವರು ಮಾತ್ರ ಮಾತನಾಡುತ್ತಿದ್ದಾರೆ. ಆ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ನಾನು ಏನಿದ್ದರೂ ಕ್ಷೇತ್ರದ ಅಭಿವೃದ್ದಿ ಮಾಡುವುದೇ ನನ್ನ ಮೊದಲ ಆಧ್ಯತೆ ಎಂದು ಹೇಳಿದರು.

ಬಾಕ್ಸ್‌.......

ಡಿ.ಕೆ.ಸುರೇಶ್‌ರದ್ದು ಪ್ರಮುಖ ಪಾತ್ರ

ರಾಮನಗರ ಟೌನ್ ಗೆ ಕುಡಿಯುವ ನೀರು ತರುವ ನೆಟ್‌ಕಲ್ ಯೋಜನೆ ಅನುಷ್ಠಾನ ಕಾರ್ಯದಲ್ಲಿ ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರ ಪರಿಶ್ರಮವಿದ್ದು, ರಾಮನಗರಕ್ಕೆ ಕಾವೇರಿ ತಾಯಿ ಬಂದಿದ್ದು, ನನಗೆ ಬಹಳ ಸಂತಸವಾಗಿದೆ ಎಂದು ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ಈ ವಿಷಯವಾಗಿ ಕೆಲವರು ಟ್ವೀಟ್ ಮುಖಾಂತರ ಕ್ರೆಡಿಟ್ ಪಡೆಯಲು ಹೊರಟಿದ್ದಾರೆ. ಈ ಯಶಸ್ವಿ ಯೋಜನೆ 2017ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 650 ಕೋಟಿ ವೆಚ್ಚದ ಯೋಜನೆಗೆ ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರು ಡಿಪಿಆರ್ ಮಾಡಿಸಿದರು. ಇಷ್ಟೊಂದು ದೊಡ್ಡ ಮೊತ್ತದ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡದ ಪರಿಣಾಮ ಅದನ್ನು ಪರಿಷ್ಕರಣೆ ಮಾಡಿ 564 ಕೋಟಿ ರು. ಯೋಜನೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಕುಡಿಯುವ ನೀರಿನ ಯೋಜನೆಗೆ ಅಸ್ತು ನೀಡಿದರು. ಅದರ ಫಲವೇ ಇಂದು ರಾಮನಗರ ಪಟ್ಟಣಕ್ಕೆ ಕಾವೇರಿ ನೀರು ಬರಲು ಸಾಧ್ಯವಾಗಿದೆ ಎಂದರು.

ಕುಡಿಯುವ ನೀರಿನ ಯೋಜನೆ ಬಗ್ಗೆ ಯಾರು ಏನೇ ಹೇಳಿಕೊಳ್ಳಲಿ ನಾನು ಶಾಸಕನಾದ ಮೇಲೆ ಅಧಿಕಾರಿಗಳು, ಪತ್ರಕರ್ತರನ್ನು ತೊರೆಕಾಡನಹಳ್ಳಿ ಶುದ್ದೀಕರಣ ಘಟಕದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಾಧಕ ಭಾದಕಗಳ ಬಗ್ಗೆ ಚರ್ಚಿಸಿ ಪೈಪ್‌ಲೈನ್ ನಿರ್ಮಾಣ ಕಾರ್ಯದ 47 ಕಡೆಯಿದ್ದ ಸಮಸ್ಯೆಗಳನ್ನು ರೈತರನ್ನು ಮನವೊಲಿಸಿ ತೀರ್ಮಾನಿಸಿದೆವು. ಅದು ಇಂದು ಯಶಸ್ವಿ ಆಗಿದ್ದು ಸಾರ್ವಜನಿಕರ ಕೆಲಸ ಸಾಕಾರವಾಗಿದ್ದು, ಈ ಯೋಜನೆಯಲ್ಲಿ ಡಿ.ಕೆ.ಸುರೇಶ್ ಅವರ ಪರಿಶ್ರಮವಿದೆ ಎಂದು ಕುಮಾರಸ್ವಾಮಿ ಹೆಸರನ್ನೇಳದೆ ಕ್ರೆಡಿಟ್ ಪಡೆಯಲು ಹೊರಟಿರುವವರಿಗೆ ತಿರುಗೇಟು ನೀಡಿದರು.

ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾಂಗ್ರೆಸ್ ಮುಖಂಡರಾದ ಬೈರೇಗೌಡ, ದಾಸೇಗೌಡ, ಷಡಕ್ಷರಿ, ರವಿ, ರಮೇಶ್ ಮತ್ತಿತರರಿದ್ದರು.

28ಕೆಆರ್ ಎಂಎನ್ 7.ಜೆಪಿಜಿ

ಡಿ.ಕೆ.ಸುರೇಶ್.

28ಕೆಆರ್ ಎಂಎನ್ 8.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್.