ಲಕ್ಷ್ಮೇಶ್ವರ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಸಮೀಪದ ಮುಕ್ತಿಮಂದಿರದ ಗಂಗಾಧರ ಅಜ್ಜನ ಗದ್ದುಗೆಗೆ ಪೂಜೆ ಸಲ್ಲಿಸಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದು ಕಂಡುಬಂದಿತು.

ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಅವರು ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಈ ಭಾಗದ ಮಾಜಿ ಶಾಸಕನಾಗಿರುವ ನನಗೆ ಹೆಚ್ಚು ಸಂತಸ ತಂದಿದೆ. ಡಿ.ಕೆ. ಶಿವಕುಮಾರ ಅವರು ಗಂಗಾಧರ ಅಜ್ಜನವರ ಪರಮ ಭಕ್ತರಾಗಿದ್ದಾರೆ. ಗಂಗಾಧರ ಅಜ್ಜನ ಆಶೀರ್ವಾದ ಪಡೆದುಕೊಂಡು ರಾಜ್ಯವನ್ನು ಇನ್ನೂ ಹೆಚ್ಚು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಿ. ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ಪರಿಹರಿಸುವ ಶಕ್ತಿಯನ್ನು ಲಿಂ. ವೀರಗಂಗಾಧರ ಸ್ವಾಮಿಗಳು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ವೇಳೆ ಮಾಜಿ ಶಾಸಕ ರಾಮಣ್ಣ ಲಮಾಣಿ, ಪರಮೇಶ್ವರ ಲಮಾಣಿ, ಸುಭಾಷ ಓದುನವರ, ಶಂಕರಗೌಡ ಪಾಟೀಲ, ಶರಣು ಗೋಡಿ, ಮೌನೇಶ ಬಾಲೆಹೊಸೂರ, ಮುತ್ತಣ್ಣ ಗಡೇದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ ಮೊದಲಾದವರು ಇದ್ದರು.

ರೈತರು ಮೊಗದಲ್ಲಿ ಹರ್ಷ ಮೂಡಿಸಿದ ರೋಹಿಣಿ


ಲಕ್ಷ್ಮೇಶ್ವರ: ಕಳೆದ ಹಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಾ ರೈತರಲ್ಲಿ ಆತಂಕ ಮೂಡಿಸಿದ್ದ ರೋಹಿಣಿ ಮಳೆಯು ತಾಲೂಕಿನಾದ್ಯಂತ ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮವಾಗಿ ಸುರಿಯುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರು ತಮ್ಮ ಹೊಲಗಳನ್ನು ಹಸನು ಮಾಡಿ ಮಳೆಗಾಗಿ ಕಾಯುತ್ತ ಆಗಸದ ಕಡೆಗೆ ಕಣ್ಣು ನೆಟ್ಟಿದ್ದರು. ಕಳೆದ ಹಲವು ದಿನಗಳಿಂದ ಮಳೆಯು ಕಣ್ಣಾಮುಚ್ಚಾಲೆ ಆಡುತ್ತ ಸಮರ್ಪಕವಾಗಿ ಬರದೆ ಇರುವುದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕುವಂತಾಗಿತ್ತು.ಆದರೆ ಕಳೆದ ಎರಡ್ಮೂರು ದಿನಗಳಲ್ಲಿ ತಾಲೂಕಿನ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯು ರೈತರಿಗೆ ಬಿತ್ತನೆ ಮಾಡುವುದೋ ಅಥವಾ ಬಿಡುವುದೋ ಎನ್ನುವ ಗೊಂದಲದಲ್ಲಿ ಮುಳುಗುವಂತೆ ಮಾಡಿತ್ತು. ಆದರೆ ಬುಧವಾರ ಮಧ್ಯಾಹ್ನ ಆರಂಭವಾದ ರೋಹಿಣಿ ಮಳೆಯು ಉತ್ತಮವಾಗಿ ಸುರಿಯುವ ಮೂಲಕ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.ತಾಲೂಕಿನ ಹಲವು ಭಾಗಗಳಲ್ಲಿ ರೈತರು ಈಗಾಗಲೇ ಹೆಸರು, ಗೆಜ್ಜೆ ಶೇಂಗಾ, ಬಿಟಿ ಹತ್ತಿ. ಗೋವಿನ ಜೋಳವನ್ನು ಬಿತ್ತನೆ ಮಾಡಿ ಮಳೆಗಾಗಿ ಮುಗಿಲು ನೋಡುವಂತಾಗಿತ್ತು. ಬುಧವಾರ ರೋಹಿಣಿ ಮಳೆಯ ಆಗಮನದಿಂದ ಈಗಾಗಲೇ ಬಿತ್ತನೆ ಮಾಡಿರುವ ರೈತರ ಸಂತಸಕ್ಕೂ ಕಾರಣವಾಗಿದೆ.

ತಾಲೂಕಿನ ಲಕ್ಷ್ಮೇಶ್ವರ, ಗೊಜನೂರ, ಶಿಗ್ಲಿ, ಅಕ್ಕಿಗುಂದ, ಬಟ್ಟೂರ, ಯಳವತ್ತಿ, ಮಾಡಳ್ಳಿ, ಗೋವನಾಳ, ರಾಮಗೇರಿ, ಸೂರಣಗಿ, ಪು.ಬಡ್ನಿ, ಆದರಳ್ಳಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಈ ಮಳೆ ಇಂಬು ನೀಡಿದೆ ಎಂದು ಗೊಜನೂರ ಗ್ರಾಮದ ರೈತ ಚನ್ನಪ್ಪ ಷಣ್ಮುಖಿ ಹರ್ಷ ವ್ಯಕ್ತಪಡಿಸಿದರು.