ವಿಜಯನಗರಕ್ಕೆ ಡಿಎಂಎಫ್‌ ಅನುದಾನ ಅಬಾಧಿತ: ಸಿಎಂ ಸಿದ್ದರಾಮಯ್ಯ

| Published : Jun 22 2024, 12:49 AM IST

ಸಾರಾಂಶ

ನ್ಯಾಯಯುತವಾಗಿ ಜಿಲ್ಲೆಗೆ ಡಿಎಂಎಫ್‌ ಅನುದಾನ ದೊರೆಯಬೇಕು. ಕೂಡಲೇ ಮುಖ್ಯಮಂತ್ರಿ ಕ್ರಮ ವಹಿಸಬೇಕು.

ಹೊಸಪೇಟೆ: ವಿಜಯನಗರ ಜಿಲ್ಲೆಗೆ ಖನಿಜ ನಿಧಿ ಅನುದಾನ ನೀಡಿಕೆ ಬಗ್ಗೆ ಸಂಡೂರಿನ ಶಾಸಕರಾಗಿದ್ದ ಈ.ತುಕಾರಾಂ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಕೆಡಿಪಿ ಸಭೆಯಲ್ಲಿ ಶಾಸಕರಾದ ಕೆ. ನೇಮರಾಜ್‌ ನಾಯ್ಕ, ಡಾ.ಎನ್‌.ಟಿ. ಶ್ರೀನಿವಾಸ್‌ ಪ್ರಶ್ನಿಸಿದರು.

ಈ ಕುರಿತು ಕನ್ನಡಪ್ರಭ ದಿನಪತ್ರಿಕೆಯು ವಿಜಯನಗರ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಅನುದಾನಕ್ಕೆ ಕತ್ತರಿ? ಎಂಬ ಶೀರ್ಷಿಕೆಯಡಿ ಜೂ.21ರಂದು ವಿಶೇಷ ವರದಿ ಪ್ರಕಟಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡ ಕೆಡಿಪಿ ಸಭೆಯಲ್ಲಿ ಶಾಸಕ ಕೆ.ನೇಮರಾಜ್‌ ನಾಯ್ಕ ಈ ವಿಷಯ ಪ್ರಸ್ತಾಪಿಸಿ, ತುಕಾರಾಂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಎಂಎಫ್‌ ಅನುದಾನ ದೊರೆಯದಿದ್ದರೆ, ಜಿಲ್ಲೆ ಅಭಿವೃದ್ಧಿ ಕುಂಠಿತವಾಗಲಿದೆ. ಜಿಲ್ಲೆಯ ಆರು ತಾಲೂಕುಗಳ ಅಭಿವೃದ್ಧಿಗಾಗಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಡಾ.ಎನ್‌.ಟಿ. ಶ್ರೀನಿವಾಸ್‌, ಕೃಷ್ಣ ನಾಯ್ಕ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು. ನ್ಯಾಯಯುತವಾಗಿ ಜಿಲ್ಲೆಗೆ ಡಿಎಂಎಫ್‌ ಅನುದಾನ ದೊರೆಯಬೇಕು. ಕೂಡಲೇ ಮುಖ್ಯಮಂತ್ರಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಸದ ತುಕಾರಾಂ ಜೊತೆಗೆ ನಾನೇ ಚರ್ಚಿಸುವೆ. ಡಿಎಂಎಫ್‌ ಅನುದಾನ ದೊರೆಯಲು ಕ್ರಮ ವಹಿಸುವೆ ಎಂದು ಸಭೆಯಲ್ಲೇ ಖನಿಜ ಇಲಾಖೆಯ ಕಾರ್ಯದರ್ಶಿಗೆ ಫೋನಾಯಿಸಿ, ಕೂಡಲೇ ಬಾಕಿ ಇರುವ ₹218 ಕೋಟಿ ಡಿಎಂಎಫ್ ಅನುದಾನ ಬಿಡುಗಡೆ ಮಾಡಬೇಕು. ಪ್ರತಿ ವರ್ಷ ಈ ಅನುದಾನ ಹಂಚಿಕೆಯಾಗಬೇಕು. ವಿಜಯನಗರಕ್ಕೆ ಶೇ.28 ಡಿಎಂಎಫ್‌ ಪಾಲಿದೆ. ಶೇ.72 ಬಳ್ಳಾರಿಗೆ ಪಾಲಿದೆ. ಈ ಅನುದಾನದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕೆರೆ ತುಂಬಿಸುವ ಯೋಜನೆ, ಎಸ್ಸೆಸ್ಸೆಲ್ಸಿ ಫಲಿತಾಂಶ ಕುಂಠಿತ, ಹಾಸ್ಟೆಲ್‌ಗಳ ಸಮಸ್ಯೆ ಕುರಿತು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ಆಧಾರದ ಮೇಲೆ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.