ಸಾರಾಂಶ
- ಇಂದಿನಿಂದ ಪರಿಶಿಷ್ಟ ಜಾತಿ ಸಮೀಕ್ಷೆ ಹಿನ್ನೆಲೆ ಜಿಲ್ಲಾಡಳಿತಕ್ಕೆ ಒತ್ತಾಯ
- - - - ನೈಜ ಬೇಡ ಜಂಗಮರು ಅಲೆಮಾರಿಗಳು, ಅರಣ್ಯ ವಾಸಿಗಳು, ಮಾಂಸಹಾರಿಗಳಾಗಿರುತ್ತಾರೆ- ಜಿಲ್ಲೆಯಲ್ಲಿ ವೀರಶೈವ ಜಂಗಮರು ಮಕ್ಕಳ ಶಾಲೆ ದಾಖಲಾತಿಗಳಲ್ಲಿ ಬೇಡ ಜಂಗಮ ಎಂದು ಬರೆಸಿದ್ದಾರೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ ಮೊದಲ ಹಂತದ ಸಮೀಕ್ಷೆಯು ಮೇ 5ರಿಂದ 17ರವರೆಗೆ ನಡೆಯಲಿದೆ. ಸಮೀಕ್ಷೆ ವೇಳೆ ವೀರಶೈವ ಜಂಗಮರು ಬೇಡ ಜಂಗಮ ಎಂಬುದಾಗಿ ಬರೆಸಿ, ಪರಿಶಿಷ್ಟ ಜಾತಿಯಲ್ಲಿ ಸೇರುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿವೆ.ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ಜಾತಿಯಲ್ಲಿ ದಾಖಲಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಅದಕ್ಕೆ ನ್ಯಾಯಮೂರ್ತಿ ನಾಗಮೋಹನ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಅವಕಾಶ ನೀಡಬಾರದು. ಪರಿಶಿಷ್ಟ ಜಾತಿಗಳ ಸಮೀಕ್ಷೆ ವೇಳೆ ವೀರಶೈವ ಲಿಂಗಾಯತ ಜಂಗಮರ ಪೈಕಿ ಕೆಲವರು ಬೇಡ ಜಂಗಮ ಎಂಬುದಾಗಿ ಬರೆಸಿ, ಅಕ್ರಮವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಅದನ್ನು ತಡೆಯಬೇಕು ಎಂದು ಸಂಘಟನೆ ಮುಖಂಡರು ಭಾನುವಾರ ಜಿಲ್ಲಾಡಳಿತ ಮೂಲಕ ಆಯೋಗಕ್ಕೆ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ವೀರಶೈವ ಜಂಗಮರು ಈಗಾಗಲೇ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಬೇಡ ಜಂಗಮ ಎಂಬುದಾಗಿ ಬರೆಸಿರುವ ಸಾವಿರಾರು ಉದಾಹರಣೆಗಳಿವೆ. ಅದೇ ರೀತಿ ಅನೇಕರು ಬೇಡ ಜಂಗಮ ಎಂಬುದಾಗಿ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರುವ ಪ್ರಕರಣಗಳೂ ಜಗಜ್ಜಾಹೀರಾಗಿವೆ. ನೈಜವಾದ ಬೇಡ ಜಂಗಮರು ಅಲೆಮಾರಿಗಳಾಗಿದ್ದು, ಅರಣ್ಯ ವಾಸಿಗಳಾಗಿರುತ್ತಾರೆ. ಅಂತಹ ಬೇಡ ಜಂಗಮರು ಮಾಂಸಾಹಾರಿಗಳಾಗಿರುತ್ತಾರೆ ಎಂದು ಸಂಘಟನೆಗಳ ಮುಖಂಡರು ವಿವರಿಸಿದರು.ವೀರಶೈವ ಜಂಗಮರು ವೀರಶೈವರಿಗೆ ಗುರುಗಳಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಜನವಸತಿ ಪ್ರದೇಶಗಳ ನಿವಾಸಿಗಳಾಗಿರುತ್ತಾರೆ. ಒಂದೊಮ್ಮೆ ವೀರಶೈವ ಜಂಗಮರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿದರೆ ಪುನಾ ಅಸ್ಪೃಶ್ಯ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಲಿದೆ. ಆದ್ದರಿಂದ ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸಬಾರದು. ಈ ಬಗ್ಗೆ ಆಯೋಗವೂ ಜಿಲ್ಲಾಡಳಿತ, ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದಲಿತ ಹೋರಾಟಗಾರರ ನಿಯೋಗ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿದೆ. ಆದರೂ ಗಣತಿದಾರರಿಗೆ ಸೂಕ್ತ ಸೂಚನೆ, ಮಾರ್ಗದರ್ಶನ ನೀಡಲು ಮನವಿ ಮಾಡಿದೆ. ಹಾಗೆಯೇ ಆದಿ ಕರ್ನಾಟಕ ಹಾಗೂ ಆದಿ ಆಂಧ್ರ ಸಮುದಾಯದವರು ತಮ್ಮ ಮೂಲ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 61ರಲ್ಲಿರುವ ಮಾದಿಗ ಎಂದೇ ಸಾಮೂಹಿಕವಾಗಿ ನಮೂದಿಸಬೇಕು. ಗಣತಿದಾರರು ಅದನ್ನೇ ಪರಿಗಣಿಸಬೇಕು. ಅಲ್ಲದೇ, ಸಮೀಕ್ಷೆ ವೇಳೆ ಕಾರಣಾಂತರದಿಂದ ಮನೆಯಿಂದ ಹೊರಗಿರುವ ಕುಟುಂಬದ ಸದಸ್ಯರ ವಿವರಗಳನ್ನು ಆಯಾ ಕುಟುಂಬದ ಯಜಮಾನರು ಕಡ್ಡಾಯವಾಗಿ ತಮ್ಮ ಹೇಳಿಕೆ ಮೂಲಕ ದಾಖಲಿಸಬೇಕು ಎಂದು ನಿಯೋಗ ಮನವಿ ಮಾಡಿದೆ.ಪರಿಶಿಷ್ಟ ಜಾತಿಗಣತಿಗೆ ಮನೆ ಮನೆ ಬಾಗಿಲಿಗೆ ಬರುವ ಗಣತಿದಾರರು ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬವರಾಜ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಜಿಗಳಿ ಹಾಲೇಶ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಸಿದ್ದೇಶ ಬಾತಿ, ತಾಲೂಕು ಅಧ್ಯಕ್ಷ ಎನ್.ಮಲ್ಲೇಶ ಚಿಕ್ಕನಹಳ್ಳಿ, ಉಪಾಧ್ಯಕ್ಷ ಎಚ್.ಕೃಷ್ಣಪ್ಪ ಹಳೆ ಚಿಕ್ಕನಹಳ್ಳಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಚ್.ಚಿಕ್ಕನಹಳ್ಳಿ, ಕಲಾ ಮಂಡಳಿ ಜಿಲ್ಲಾಧ್ಯಕ್ಷ ದೊಡ್ಡಪ್ಪ ಆವರಗೊಳ್ಳ ಸೇರಿದಂತೆ ದಲಿತಪರ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
- - --(ಸಾಂದರ್ಭಿಕ ಚಿತ್ರ)