ಕೊಟ್ಟೂರು: ಪಟ್ಟಣದಲ್ಲಿನ ರಸಗೊಬ್ಬರ ಮಳಿಗೆಗಳು ರೈತರಿಗೆ ಸೂಕ್ತ ರೀತಿಯಲ್ಲಿ ಬೇಡಿಕೆಗಳ ಅನುಸಾರವಾಗಿ ತಡ ಮಾಡದೇ ವಿತರಿಸಬೇಕು. ಅನಗತ್ಯವಾಗಿ ಕೃತಕ ಅಭಾವ ಉಂಟು ಮಾಡಿದರೇ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಆರ್.ವಿ.ತೇಜವರ್ಧನ್ ಮಾಲೀಕರುಗಳಿಗೆ ಎಚ್ಚರಿಕೆ ನೀಡಿದರು.

ಗುರುವಾರ ಪಟ್ಟಣದಲ್ಲಿನ ರಸಗೊಬ್ಬರ ಮಳಿಗೆಗಳು ಮತ್ತು ಗೋದಾಮುಗಳಿಗೆ ಭೇಟಿ ನೀಡಿ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನನ್ನು ಪರಿಶೀಲಿಸಿ ಡಿಎಪಿ, ಕಾಂಪ್ಲೆಕ್ಸ್ ರಸಗೊಬ್ಬರ ಸೇರಿ 2500 ಮೆಟ್ರಿಕ್ ದಾಸ್ತಾನು ಲಭ್ಯವಿರುವುದು ಖಚಿತವಾಗಿದೆ. ಯಾವುದೇ ಅನಧಿಕೃತ ರಸಗೊಬ್ಬರ ಇಲ್ಲದಿರುವುದು ಸಹ ಗೊತ್ತಾಗಿದೆ. ಪರಿಶೀಲನೆ ವೇಳೆಯಲ್ಲಿ ಯಾವುದೇ ಬಗೆಯ ಕೊರತೆ ಇಲ್ಲದೇ ಇರುವುದು ಕಂಡಬಂದಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಹೇಳಿದರು.

ರೈತರು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿ ಮಾಡಿದಾಗ ಕಡ್ಡಾಯವಾಗಿ ಮಾರಾಟಗಾರರು ಬಿಲ್ ನೀಡಲೇಬೇಕು ಎಂದು ತಿಳಿಸಿದರು.

ರೈತರು ಭೂಮಿಯಲ್ಲಿ ಸಂಪೂರ್ಣ ತೇವಾಂಶವಿದ್ದಾಗ ಮಾತ್ರ ರೈತರು ಬಿತ್ತನೆ ಮಾಡುವಂತೆ ಮಾರಾಟಗಾರರು ಸೂಚಿಸಬೇಕು. ಮಳೆ ಅಭಾವದ ಕಾರಣದಿಂದಾಗಿ ರೈತರು ರಸಗೊಬ್ಬರವನ್ನು ವೈಜ್ಞಾನಿಕ ಶಿಫಾರಸಿನಂತೆಯೇ ಬಳಕೆ ಮಾಡಬೇಕು. ನ್ಯಾನೋ ಯೂರಿಯಾ, ನ್ಯಾನೋ ಡಿಎಪಿಯನ್ನು ರೈತರು ಬಳಸಲು ಮುಂದಾಗಬೇಕು ಎಂದರು.

ಕೃಷಿ ಸಹಾಯಕ ಉಪನಿರ್ದೇಶಕರ ಭೇಟಿಯ ಸಮಯದಲ್ಲಿ ಸಹಾಯಕ ಕೃಷಿ ಅಧಿಕಾರಿ ಶ್ಯಾಮ್ ಸುಂದರ್, ರಸಗೊಬ್ಬರ ಮಳಿಗೆಗಳ ಮಾಲೀಕರಾದ ಪಿ.ಶ್ರೀಧರ ಶೆಟ್ಟಿ, ಕೊಟ್ರೇಶ ಬಿ., ಕೊಟ್ರೇಶ ನಾಯ್ಕ, ಪಂಪಾಪತಿ, ಜಗದೀಶ, ಪ್ರವೀಣಕುಮಾರ್, ನಾರಾಯಣ, ಶಿವಕುಮಾರ ಇದ್ದರು.