ಹೊಸಕೋಟೆ: ಸಾರ್ವಜನಿಕ ಉದ್ದಿಮೆಯಾಗಿರುವ ವಿದ್ಯುತ್ ಕ್ಷೇತ್ರ ಜನಸಾಮಾನ್ಯರಿಗೆ ನಿರಂತರ ಹಾಗೂ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಇಂತಹ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡಲು ಹೊರಟಿರುವ ಸರ್ಕಾರದ ನಡೆ ಸರಿಯಲ್ಲ ಎಂದು ಬೆಸ್ಕಾಂ ಇಇ ವೆಂಕಟೇಶಪ್ಪ ಆರೋಪಿಸಿದರು.

ನಗರದ ಬೆಸ್ಕಾಂ ಕಚೇರಿ ಎದುರು ವಿದ್ಯುತ್ ಖಾಸಗೀಕರಣದ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಒಂದು ಮಹತ್ವದ ಸಮಸ್ಯೆ ಎದುರಾಗಿದೆ. ಟಾಟಾ ಪವರ್ ಕಂಪನಿ ಲಿಮಿಟೆಡ್ ಸಂಸ್ಥೆ ಕೆಇಆರ್‌ಸಿ ಮುಂದೆ ಪ್ಯಾರಲೆಲ್ ಲೈಸೆನ್ಸಿಂಗ್‌ಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದೆ. ಈ ಪ್ಯಾರಲೆಲ್ ಲೈಸೆನ್ಸಿಂಗ್ ಜಾರಿಯಾದರೆ ಅದರ ಸಾಧಕ-ಬಾಧಕಗಳ ಜೊತೆಗೆ ಹಲವು ದುಷ್ಪರಿಣಾಮಗಳೂ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಗೃಹ ಬಳಕೆದಾರರು, ವಾಣಿಜ್ಯ ಗ್ರಾಹಕರು, ಕೈಗಾರಿಕಾ ವಲಯದ ಗ್ರಾಹಕರು ಹಾಗೂ ಕೃಷಿ ಪಂಪ್‌ಸೆಟ್ ಬಳಕೆದಾರರ ಮೇಲೂ ಬೀಳಬಹುದು. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ಆದ್ದರಿಂದ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಪ್ಯಾರಲೆಲ್ ಲೈಸೆನ್ಸಿಂಗ್ ಅರ್ಜಿಯನ್ನು ರದ್ದುಗೊಳಿಸುವಂತೆ ಸರ್ಕಾರ ಮತ್ತು ಕೆಇಆರ್‌ಸಿಗೆ ಮನವಿ ಸಲ್ಲಿಸುವ ಕುರಿತು ಅರಿವು ಮೂಡಿಸಲು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಈ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬೆಸ್ಕಾಂ ಎಇಇ ಪುಟ್ಟಸ್ವಾಮಿ, ಅನಿಲ್ ಕುಮಾರ್, ಪ್ರವೀಣ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ 659ನೇ ಕೇಂದ್ರ ಸಮಿತಿ ಸಹ ಕಾರ್ಯದರ್ಶಿ ಹರೀಶ್ ಕುಮಾರ್, ಸಮಿತಿ ಸದಸ್ಯ ಎಂ.ಎಸ್.ಶಿವಣ್ಣ, ಸ್ಥಳೀಯ ಸಮಿತಿ ಅಧ್ಯಕ್ಷ ಎಲ್‌ಎಸ್.ಪ್ರತಾಪ್, ಕಾರ್ಯದರ್ಶಿ ಹರೀಶ್ ಕುಮಾರ್ ಇತರರು ಹಾಜರಿದ್ದರು.

ಫೋಟೋ: 18 ಹೆಚ್‌ಎಸ್‌ಕೆ 1 ಮತ್ತು 2


ಹೊಸಕೋಟೆಯ ಬೆಸ್ಕಾಂ ಕಚೇರಿ ಎದುರು ವಿದ್ಯುತ್ ಖಾಸಗೀರಕರಣ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ಖಂಡಿಸಿ ಬೆಸ್ಕಾಂ ಅಧಿಕಾರಿಗಳು, ನೌಕರರು ಪ್ರತಿಭಟನೆ ಮಾಡಿದರು.