ಸಾರಾಂಶ
ಚಿಕ್ಕಮಗಳೂರು, ವೈದ್ಯನಾಗಿದ್ದು ಪತ್ನಿಗೆ ಮಾನಸಿಕ ಕಿರುಕುಳ ನೀಡಿ ವರ್ಷಗಳಿಂದ ಗೃಹ ಬಂಧನದಲ್ಲಿರಿಸಿದ ಮನ ಕಲಕುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದು, ಅಸ್ವಸ್ಥ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಚಿಕ್ಕಮಗಳೂರು : ವೈದ್ಯನಾಗಿದ್ದು ಪತ್ನಿಗೆ ಮಾನಸಿಕ ಕಿರುಕುಳ ನೀಡಿ ವರ್ಷಗಳಿಂದ ಗೃಹ ಬಂಧನದಲ್ಲಿರಿಸಿದ ಮನ ಕಲಕುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದು, ಅಸ್ವಸ್ಥ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವೈದ್ಯ ಪತಿಯ ವಿರುದ್ಧ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್ ಐಆರ್ ದಾಖಲಾಗಿದೆ.
ವೃತ್ತಿಯಲ್ಲಿ ವೈದ್ಯನಾಗಿದ್ದರು ಪತ್ನಿಯನ್ನು ಮಾನವೀಯತೆ ಮರೆತು ಹೊರ ಪ್ರಪಂಚಕ್ಕೆ ಹೋಗದಂತೆ ಗೃಹಬಂಧನದಲ್ಲಿ ಇರಿಸಿ ತನ್ನ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡ ವೈದ್ಯ ರವಿಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ನಗರದ ದೋಣಿಕಣ ಸಮೀಪದ ಮನೆಯಲ್ಲಿ ವೈದ್ಯ ತನ್ನ ಪತ್ನಿ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿ ಕಿರುಕುಳ ಕೊಡುತ್ತಿದ್ದರೆಂದು, ಅದರಲ್ಲೂ ಹುಚ್ಚಿ ಎಂದು ಬಿಂಬಿಸಿ ಮಾನಸಿಕ ಜೊತೆಯಲ್ಲಿ ದೈಹಿಕ ಕಿರುಕುಳವನ್ನು ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಗನಿಗೂ ಕೂಡ ತಾಯಿ ಮೇಲೆ ಜಿಗುಪ್ಸೆ ಬರುವಂತೆ ಮಾಡಿ ತಾಯಿಯಿಂದ ಮಗನನ್ನು ದೂರ ಇರುವಂತೆ ಮಾಡಿರುವುದಾಗಿ ಆಕೆ ದೂರಿದ್ದಾರೆ. ಬುಧವಾರ ಬೆಳಗ್ಗೆ ವಿನುತಾ ರಾಣಿ ಸಹೋದರ ವಾಗೀಶ್ ಕುಮಾರ್, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಮನೆ ಬಾಗಿಲು ಒಡೆದು ಗೃಹಬಂಧನದಲ್ಲಿದ್ದ ವಿನುತಾರನ್ನು ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಮೊಬೈಲ್ ಕೂಡ ಬಳಸದಂತೆ, ಸಾರ್ವಜನಿಕರು, ಸಂಬಂಧಿಕರ ಸಂಪರ್ಕವೂ ಸಿಗದಂತೆ ಮನೆಯಲ್ಲಿಯೇ ಕೂಡಿಹಾಕಿ, ನೆರೆಹೊರೆಯವರು ಜೊತೆ ಬೆರೆಯದಂತೆ ಮಾಡಿದ್ದನೆಂಬ ಆರೋಪ ಕೇಳಿಬಂದಿದೆ.
ಗೃಹ ಬಂಧನದಲಿದ್ದ ಮಹಿಳೆ ಹೊರ ಬರುತ್ತಿದ್ದಂತೆ ಅಕ್ಕ ಪಕ್ಕದ ಮನೆ ನಿವಾಸಿಗಳು ಹಲವು ದಿನಗಳ ಬಳಿಕ ಆಕೆಯ ಪರಿಸ್ಥಿತಿ ಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತೀವ್ರ ಬಳಲಿರುವ ದೇಹ ಹಾಗೂ ಊಟವಿಲ್ಲದೆ ಆರೋಗ್ಯ ಸಮಸ್ಯೆ ಉಂಟಾಗಿರುವ ಮಹಿಳೆ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಪರಿಸ್ಥಿತಿಯನ್ನು ಗಮನಿಸಿ ಚಿಕ್ಕಮಗಳೂರು ಮೂಲದ ಉತ್ತರಖಾಂಡ್ ನಲ್ಲಿ ಐಎಎಸ್ ತರಬೇತಿ ಪಡೆಯುತ್ತಿರುವ ಮಿಥುನ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಿಎಚ್ಒ ಹಾಗೂ ಮಹಿಳಾ ಠಾಣೆಗೆ ಸೂಚನೆ ನೀಡಿ ವಿನುತಾ ರಾಣಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದ್ದಾರೆ.