ಸಾರಾಂಶ
ಪ್ರತಿಭಟನೆ । ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳ್ಳಿಹಟ್ಟಿ ಗ್ರಾಮಸ್ಥರ ಧರಣಿ । ಎಡಿಸಿಗೆ ಮನವಿ ಸಲ್ಲಿಕೆ । ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಬಸವೇಶ್ವರ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾದ ಕಳ್ಳಿಹಟ್ಟಿ ಗ್ರಾಮದ 22 ವರ್ಷದ ಮಹಿಳೆ ಶಾಂತಮ್ಮ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಭೋವಿ ಕ್ರಿಯಾ ಸಮಿತಿ ನೇತೃತ್ದವಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳ್ಳಿಹಟ್ಟಿ ಗ್ರಾಮದ ಭೋವಿ ಜನಾಂಗಕ್ಕೆ ಸೇರಿದ ಅರುಣ್ಕುಮಾರ್ ಎಂಬುವರ ಪತ್ನಿ ಮಾ.13 ರಂದು ಬಸವೇಶ್ವರ ಆಸ್ಪತ್ರೆಗೆ ದಾಖಲಾದಾಗ ಉಚಿತ ಹೆರಿಗೆ ಕ್ಯಾಂಪ್ ಇದೆ ಎಂದು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರು. 18ರಂದು ಹೆರಿಗೆ ನೋವು ಕಾಣಿಸಿಕೊಂಡಾಗ ಸಹಜ ಹೆರಿಗೆ ಮಾಡಿಸುತ್ತೇವೆಂದು ತಿಳಿಸಿದ ಅಲ್ಲಿನ ವೈದ್ಯರು ಸಿಜೇರಿಯನ್ ಮೂಲಕ ಮಗು ಹೊರಗೆ ತೆಗೆದು ನಂತರ ತಾಯಿಯನ್ನು ಐಸಿಯು ವಾರ್ಡ್ಗೆ ಶಿಫ್ಟ್ ಮಾಡುತ್ತೇವೆ. 24 ಗಂಟೆಯೊಳಗೆ ಪ್ರಜ್ಞೆ ಬರುತ್ತದೆ . ಜನರಲ್ ವಾರ್ಡ್ಗೆ ಶಿಫ್ಟ್ ಮಾಡುತ್ತೇವೆಂದು ಹೇಳಿ ಮೋಸ ಮಾಡಿದ್ದಾರೆಂದು ಪ್ರತಿಭಟನಾಕಾರರು ದೂರಿದರು.ಐಸಿಯುನಲ್ಲಿ ಇದ್ದ ಬಾಣಂತಿಗೆ ಒಂದು ವಾರವಾದರೂ ಪ್ರಜ್ಞೆ ಬಾರದ ಕಾರಣ ಅನುಮಾನಗೊಂಡು ನೋಡಲು ವಾರ್ಡ್ ಕಡೆ ಹೋದಾಗ ನಮ್ಮನ್ನು ತಡೆದು ದೌರ್ಜನ್ಯವೆಸಗಿದರು. ಮಂಗಳೂರಿಗೆ ಕರೆದುಕೊಂಡು ಹೋಗುತ್ತೇವೆಂದಾಗ ಮಂಗಳೂರು ವೈದ್ಯರನ್ನು ಇಲ್ಲಿಗೆ ಕರೆಸಿ ಚಿಕಿತ್ಸೆ ಕೊಡಿಸುತ್ತೇವೆಂದು ನಂಬಿಸಿದರು. ಕೊನೆಗೆ ಮಾ.31ರ ಯುಗಾದಿ ಹಬ್ಬದಂದು ನಮಗೆ ಫೋನ್ ಮಾಡಿದ ವೈದ್ಯರು ಶಾಂತಮ್ಮ ಮೃತಪಟ್ಟಿದ್ದಾಳೆಂದು ಹೇಳಿದರು. ಮಧ್ಯರಾತ್ರಿಯೆ ಹೆಣವನ್ನು ತೆಗೆದುಕೊಂಡು ಹೋಗಿ ಶವಾಗಾರದಲ್ಲಿರಿಸಲು ಆಗುವುದಿಲ್ಲವೆಂದು ಮಾನವೀಯತೆಯಿಲ್ಲದೆ ನಡೆದುಕೊಂಡಿದ್ದಾರೆಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಂತಮ್ಮಳ ಸಾವಿಗೆ ಕಾರಣರಾದ ಬಸವೇಶ್ವರ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿಯವರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಂಡು ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಂಬಂಧಿಕರು ಜಿಲ್ಲಾಡಳಿಕ್ಕೆ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.ಗೀತ ಗೋವಿಂದರಾಜು, ಸಂಜೀವಮೂರ್ತಿ, ರಮೇಶ್, ಹಾಲೇಶಪ್ಪ, ಕವಿತ, ರಾಧಮ್ಮ, ಅನಿತ, ಜಯಣ್ಣ, ಹುಲಿಗೆಪ್ಪ, ರಾಜಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.