ಗದಗ: ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ 10ನೇ ತರಗತಿಯು ಅತ್ಯಂತ ಪ್ರಮುಖ ಘಟ್ಟವಾಗಿದೆ. ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಎದುರಿಸುವ ಈ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಐಎಂಎ ಜಿಲ್ಲಾ ಸಂಘ, ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶತಮಾನೋತ್ಸವ ಸಂಭ್ರಮ ನಿಮಿತ್ತ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ 2025- 26ನೇ ಸಾಲಿನ ಪ್ರತಿಭಾವಂತ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗದುಗಿನ ಐಎಂಎ ಸಂಸ್ಥೆಗೆ 100 ವರ್ಷಗಳಿಗಿಂತಲೂ ಹೆಚ್ಚಿನ ಸುದೀರ್ಘ ಇತಿಹಾಸವಿದೆ. ಅಖಿಲ ಭಾರತ ಐಎಂಎ ಸಂಸ್ಥೆ ಅಸ್ತಿತ್ವಕ್ಕೆ ಬರುವುದಕ್ಕಿಂತ ಎರಡು ವರ್ಷಗಳ ಮುಂಚಿತವಾಗಿಯೇ ಗದುಗಿನಲ್ಲಿ ವೈದ್ಯರು ಒಟ್ಟಾಗಿ ಸೇರಿ ಈ ಸಂಸ್ಥೆಯನ್ನು ಕಟ್ಟಿದ್ದರು ಎಂಬುದು ಹೆಮ್ಮೆಯ ಸಂಗತಿ. ಅಂದಿನ ಕಾಲದ ವೈದ್ಯರು ಕೇವಲ ವೃತ್ತಿಗಷ್ಟೇ ಸೀಮಿತವಾಗದೆ, ಸಮಾಜಕ್ಕೆ ಮರಳಿ ಏನನ್ನಾದರೂ ನೀಡಬೇಕು ಎಂಬ ದೊಡ್ಡ ದೂರದೃಷ್ಟಿ ಹೊಂದಿದ್ದರು. ಅಂತಹ ಐತಿಹಾಸಿಕ ನೆಲದಲ್ಲಿ ಅಂದಿನಿಂದ ಇಂದಿನವರೆಗೂ ವೈದ್ಯರು ತಮ್ಮ ಸಾಮಾಜಿಕ ಸೇವೆಯ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಹಾಗೂ ಕುಲಸಚಿವ ಪ್ರೊ ಡಾ. ಸುರೇಶ ನಾಡಗೌಡರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳನ್ನು ಗಳಿಸುವುದು ಮಾತ್ರ ಮುಖ್ಯವಲ್ಲ. ಅದರೊಂದಿಗೆ ಉತ್ತಮ ನಡತೆ ಮತ್ತು ಕೃತಜ್ಞತಾ ಭಾವ ಇರಬೇಕು. ನಮ್ಮನ್ನು ಬೆಳೆಸಿದ ಪೋಷಕರಿಗೆ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಸದಾ ಕೃತಜ್ಞರಾಗಿದ್ದಾಗ ಮಾತ್ರ ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಜಿಲ್ಲೆ ಹಾಗೂ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.


ವೆಂಕಟೇಶ ಆಲ್ಕೋಡ ಹಾಗೂ ತಂಡದಿಂದ ನಾಡಗೀತೆ ಜರುಗಿತು. ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಸ್ವಾಗತಿಸಿದರು. ಅಕ್ಷತಾ ಕಟ್ನಳ್ಳಿಮತ್ತು ಶಿವಕುಮಾರ ಹೊಸಳ್ಳಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಐಎಂಎ ಶತಮಾನೋತ್ಸವದ ಅಧ್ಯಕ್ಷ ಎಸ್.ಆರ್. ನಾಗನೂರು, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಡಾ. ಪವನ್ ಪಾಟೀಲ ಹಾಗೂ ಐಎಂಎ ಕಾರ್ಯದರ್ಶಿ ಡಾ. ರಾಹುಲ್ ಶಿರೋಳ, ಡಾ. ಪ್ರಭಾ ದೇಸಾಯಿ, ಡಾ. ರೇಷ್ಮಾ ಪದ್ಮಶ್ರೀ ಪುರಸ್ಕೃತ ವಿ.ಆರ್. ಗೌರಿಶಂಕರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.