ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಜೀವನದಲ್ಲಿ ಬಳಸುವ ಔಷಧಿ ಸಸ್ಯಗಳ ಬಳಕೆಯ ವಿಧಾನ ದಾಖಲಿಸದಿದ್ದರೆ ಅವು ಮುಂದೆ ನಶಿಸಿ ಹೋಗುವ ಸಾಧ್ಯತೆ ಇದೆ.
ಭಟ್ಕಳ: ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಜೀವನದಲ್ಲಿ ಬಳಸುವ ಔಷಧಿ ಸಸ್ಯಗಳ ಬಳಕೆಯ ವಿಧಾನ ದಾಖಲಿಸದಿದ್ದರೆ ಅವು ಮುಂದೆ ನಶಿಸಿ ಹೋಗುವ ಸಾಧ್ಯತೆ ಇದೆ. ಅವುಗಳನ್ನು ಎಳೆಯ ಪೀಳಿಗೆ ಬಳಸುವ ಮೂಲಕ ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಶಾಖೆಯ ಸಂಶೋಧನಾ ಸಹಾಯಕಿ ಗಾಯತ್ರಿ ನಾಯ್ಕ ಹೇಳಿದರು.
ತಾಲೂಕಿನ ಶೇಡಬರಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರಾಜ್ಯ ಔಷಧಿ ಗಿಡಮೂಲಿಕೆ ಪ್ರಾಧಿಕಾರ, ರಾಷ್ಟ್ರೀಯ ಔಷಧಿ ಗಿಡಮೂಲಿಕೆ ಮಂಡಳಿ ಸಹಯೋಗದಲ್ಲಿ ಕುಮಟಾದ ಐಕ್ಯ ಎನ್.ಜಿ.ಒ ಆಯೋಜಿಸಿದ್ದ ಔಷಧಿ ಸಸ್ಯಗಳ ಬಳಕೆ ಹಾಗೂ ಜೀವ ವೈವಿಧ್ಯ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಭಟ್ಕಳ ತಾಲೂಕಿನಲ್ಲಿ ಸಸ್ಯಗಳ ಔಷಧಿ ನೀಡುವ ಅನೇಕ ಪಾರಂಪರಿಕ ವೈದ್ಯರಿದ್ದಾರೆ. ಭಾರತೀ ವಿಜ್ಞಾನ ಸಂಸ್ಥೆ ಅವರ ದಾಖಲೀಕರಣ ಮಾಡಿದೆ. ಅವರ ಕುಟುಂಬದ ವಿದ್ಯಾವಂತ ಮಕ್ಕಳು ಅಂಥ ಔಷಧಿ ಸಸ್ಯಗಳನ್ನು ತಮ್ಮ ಆರೋಗ್ಯಕ್ಕಾಗಿ ಬಳಸುವ ಪರಂಪರೆ ಮುಂದುವರಿಸಿದರೆ ಔಷಧಿ ಸಸ್ಯ ಉಳಿವು ಸಾಧ್ಯ ಎಂದರು.
ಐಕ್ಯ ಎನ್.ಜಿ.ಒ ಅಧ್ಯಕ್ಷ ಎಂ.ಜಿ. ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಔಷಧಿ ಸಸ್ಯಗಳ ಬಳಕೆ ಕುರಿತು ಸಂವಹನ ನಡೆಸಿದರು. ಪ್ರಾಚಾರ್ಯೆ ಮಾಲತಿ ನಾಯ್ಕ, ಶಾಲೆಯ ಶಿಕ್ಷಕರಾದ ವಿಜಯ ಮೊಗೇರ, ಪ್ರದೀಪ ಮಹಾಲೆ ಪಾಲ್ಗೊಂಡಿದ್ದರು.ಪಕ್ಕದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ವೇದಾ ನಾಯ್ಕ, ಶಿಕ್ಷಕರಾದ ಗಜಾನನ ನಾಯ್ಕ, ಅಣ್ಣಪ್ಪ ನಾಯ್ಕ, ಸಂಧ್ಯಾ ಭಟ್ಟ, ನಾಗೇಂದ್ರ ನಾಯ್ಕ, ಸಂತೋಷಕುಮಾರ, ಪ್ರಿಯಾ ನಾಯ್ಕ ಪಾಲ್ಗೊಂಡಿದ್ದರು. ಶಾಲೆಗಳ ಆವರಣದಲ್ಲಿ ವಿವಿಧ ಔಷಧಿ ಹಾಗೂ ಹಣ್ಣಿನ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟರು.