ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣದ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ಗ್ರಹಣ ಶಾಂತಿ ಸಂಪನ್ನಗೊಳಿಸಲಾಯಿತು.

ವಿದ್ವಾನ್ ಗಣೇಶ್ ಸರಳಾಯ ಅವರ ನೇತೃತ್ವದಲ್ಲಿ ವಿಜಯ ಭಟ್, ವಿಜಯೇಂದ್ರ ಮೇಲಂಟ ಹಾಗೂ ಅನಿಶ್ ಆಚಾರ್ಯ ಅವರ ಸಹಕಾರದೊಂದಿಗೆ ಗ್ರಹಣ ಮಧ್ಯಕಾಲದಿಂದ ಶಾಂತಿಗೆ ಚಾಲನೆ ನೀಡಲಾಯಿತು.

ಗ್ರಹಣ ಸ್ಪರ್ಶಕಾಲದಿಂದಲೇ ದೇವಿಯ ಸಮ್ಮುಖದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ಲಕ್ಷ್ಮಿ ಶೋಭಾನೆ, ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನೆ ಸಂಕೀರ್ತನೆಗಳು ನಿರಂತರವಾಗಿ ನಡೆಸಲಾಯಿತು. ಸಾಮೂಹಿಕವಾಗಿ ಸಂಪನ್ನಗೊಂಡ ಈ ಗ್ರಹಣ ಶಾಂತಿಯಲ್ಲಿ ಭಕ್ತರುಗಳು ಉತ್ತಮ ಸಹಕಾರ ನೀಡಿದ್ದು ಭಕ್ತಿ ಶ್ರದ್ಧತೆಯಿಂದ ಶಾಂತಿಯಲ್ಲಿ ಪಾಲ್ಗೊಂಡು ಗ್ರಹಣದೋಷದಿಂದ ವಿಮುಕ್ತರಾದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ.