ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಬ್ರಹ್ಮಕುಂಭಾಭಿಷೇಕ ಸಂಪನ್ನ

| Published : May 24 2024, 12:52 AM IST / Updated: May 24 2024, 12:53 AM IST

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಬ್ರಹ್ಮಕುಂಭಾಭಿಷೇಕ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದ ಆನಂದ ಬಾಯರಿ ದುರ್ಗಾ ಆದಿಶಕ್ತಿ ದೇವಿಯನ್ನು ಸರ್ವಾಲಂಕೃತಗೊಳಿಸಿದರು. ಮಹಾಪೂಜೆಯನ್ನು ಕ್ಷೇತ್ರದ ಅರ್ಚಕ ಅನಿಶ್ ಆಚಾರ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಪ್ರಯುಕ್ತ ಪಂಚವಂಶತಿ ದ್ರವ್ಯ ಮೀಲಿತ ಅಷ್ಟೋತ್ತರ ಶತ ಬ್ರಹ್ಮಕುಂಬಾಭಿಷೇಕವನ್ನು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹೇರೂರು ಆನಂದ ಭಟ್ ಹಾಗೂ ಯುತ ಗಣೇಶ ಸರಳಾಯ ನೇತೃತ್ವದಲ್ಲಿ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ನೆರವೇರಿಸಿದರು.

ಪ್ರಾತಃಕಾಲ ಪ್ರಧಾನ ಯಾಗ ಹಾಗೂ ಬೆಳಗ್ಗೆ ಒದಗಿದ 9.45ರ ಮಿಥುನ ಲಗ್ನ ಸುಮಹೂರ್ತದಲ್ಲಿ ಕುಂಭಾಭಿಷೇಕ ನೆರವೇರಿತು.

ಕ್ಷೇತ್ರದ ಆನಂದ ಬಾಯರಿ ದುರ್ಗಾ ಆದಿಶಕ್ತಿ ದೇವಿಯನ್ನು ಸರ್ವಾಲಂಕೃತಗೊಳಿಸಿದರು. ಮಹಾಪೂಜೆಯನ್ನು ಕ್ಷೇತ್ರದ ಅರ್ಚಕ ಅನಿಶ್ ಆಚಾರ್ಯ ನೆರವೇರಿಸಿದರು. ಪಲ್ಲಪೂಜೆಯ ಬಳಿಕ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಡಾ. ಮಂಜರಿ ಚಂದ್ರ ಪುಷ್ಪರಾಜ ನೇತೃತ್ವದ ಸೃಷ್ಟಿ ಕಲಾಕುಟೀರದ ನೃತ್ಯಾರ್ಥಿಗಳಿಂದ ಹಾಗೂ ಭ್ರಮರಿ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ್ ಶಿಷ್ಯರಿಂದ ನಿರಂತರ ನೃತ್ಯಸೇವೆ ನೆರವೇರಿತು.

ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ವಿಜಯ ಶೇರಿಗಾರ್ ಮತ್ತು ಬಳಗದವರಿಂದ ನಾದ ಸೇವೆ ನೆರವೇರಿತು. ಮಧ್ಯಾಹ್ನ ಮಹಾಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ದೇವತಾರಾಧನೆ, ಸಮಾರಾಧನೆ ಹಾಗೂ ಕಲಾರಾಧನೆಯಿಂದ ಉತ್ಸವ ಮಹೋತ್ಸವವಾಗಿ ವಿಜೃಂಭಣೆಯಿಂದ ಸಂಪನ್ನಗೊಳ್ಳುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ ತಿಳಿಸಿದ್ದಾರೆ.