ತುರ್ತು ಪರಿಸ್ಥಿತಿಯ ಕರಾಳತೆ ಮರೆಯಬೇಡಿ: ಬಿಎಸ್‌ವೈ

| Published : Jun 25 2025, 12:33 AM IST

ತುರ್ತು ಪರಿಸ್ಥಿತಿಯ ಕರಾಳತೆ ಮರೆಯಬೇಡಿ: ಬಿಎಸ್‌ವೈ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಹತಾಶೆ, ಅಧಿಕಾರ ಲಾಲಸೆಯಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ತುರ್ತು ಪರಿಸ್ಥಿತಿಯ ಕರಾಳತೆಯನ್ನು ಈ ದೇಶ ಎಂದಿಗೂ ಮರೆಯಬಾರದು. ಕಾಂಗ್ರೆಸ್‌ ಪಕ್ಷದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಹತಾಶೆ, ಅಧಿಕಾರ ಲಾಲಸೆಯಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ತುರ್ತು ಪರಿಸ್ಥಿತಿಯ ಕರಾಳತೆಯನ್ನು ಈ ದೇಶ ಎಂದಿಗೂ ಮರೆಯಬಾರದು. ಕಾಂಗ್ರೆಸ್‌ ಪಕ್ಷದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

‘ಸಿಟಿಜನ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌ ಬೆಂಗಳೂರು’ ಸಂಘಟನೆಯಿಂದ ಪುರಭವನದಲ್ಲಿ ಆಯೋಜಿಸಿದ್ದ ‘1975 ರ ತುರ್ತು ಪರಿಸ್ಥಿತಿ 50 ನೇ ವರ್ಷ- ಕರಾಳ ದಿನಗಳು’ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.

ಇಂದು ಇಂದಿರಾ ಗಾಂಧಿ ಇಲ್ಲದಿರಬಹುದು. ಆದರೆ ಅದೇ ಮನಸ್ಥಿತಿ ಇಂದಿನ ಕಾಂಗ್ರೆಸ್‌ಗೂ ಇದ್ದು, ಜನರು ಕಾಂಗ್ರೆಸ್‌ ಬಗ್ಗೆ ಎಚ್ಚರದಿಂದ ಇರಬೇಕು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಶಿವಮೊಗ್ಗದ ಪುರಸಭೆ ಸದಸ್ಯನಾಗಿದ್ದೆ. ಅಲ್ಲಿನ ಕಾಲೇಜ್‌ವೊಂದರ ಮುಂದೆ ನಿಂತಿದ್ದಾಗ ನನ್ನನ್ನು ಬಂಧಿಸಿದರು. ಶಿವಮೊಗ್ಗ, ಬಳ್ಳಾರಿ ಜೈಲಿನಲ್ಲಿ ಇಟ್ಟರು. ಪವಿತ್ರ ಸಂವಿಧಾನವನ್ನು ಬಲಿ ಕೊಡಲಾಯಿತು. ಜನರ ಸ್ವಾತಂತ್ರ್ಯದ ಹಕ್ಕು ಕಸಿದುಕೊಳ್ಳಲಾಯಿತು ಎಂದು ನೆನಪಿಸಿಕೊಂಡರು.

ಜಯಪ್ರಕಾಶ್‌ ನಾರಾಯಣ್‌, ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಪ್ರತಿಪಕ್ಷಗಳ ನೂರಾರು ನಾಯಕರನ್ನು ಅನ್ಯಾಯವಾಗಿ ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಯಿತು. ತಪ್ಪು ಮಾಡದಿದ್ದರೂ ಸಾವಿರಾರು ಜನರನ್ನು ಜೈಲಿಗೆ ಅಟ್ಟಲಾಯಿತು. ಆ ದಿನಗಳ ಕರಾಳತೆಯನ್ನು ನಾನು ಕಂಡಿದ್ದೇನೆ ಎಂದು ವಿವರಿಸಿದರು.

ಆರ್ಥಿಕ ಚಿಂತಕ ಎಸ್.ಗುರುಮೂರ್ತಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಾವು ಸಂವಿಧಾನವನ್ನು ರಕ್ಷಿಸುವುದಾಗಿ ಹೇಳಿಕೆ ನೀಡುತ್ತಾರೆ. ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೇ ಸಂವಿಧಾನವನ್ನು ಅವರ ಅಜ್ಜಿ ಕಡೆಗಣಿಸಿದ್ದು ಅವರಿಗೆ ಗೊತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮುನ್ನ ತುರ್ತು ಪರಿಸ್ಥಿತಿಯ ಕರಾಳತೆ ವಿವರಿಸುವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.ಪುರಭವನದಲ್ಲಿ ಆಯೋಜಿಸಿದ್ದ ‘1975 ರ ತುರ್ತು ಪರಿಸ್ಥಿತಿ 50 ನೇ ವರ್ಷ- ಕರಾಳ ದಿನಗಳು’ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. ಆರ್ಥಿಕ ಚಿಂತಕ ಎಸ್.ಗುರುಮೂರ್ತಿ, ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣ ಶೆಟ್ಟಿ ಹಾಜರಿದ್ದರು.

ಪ್ರತಿ ಇಲಾಖೇಲೂ ಭ್ರಷ್ಚಾಚಾರದ ಕೌಂಟರ್‌: ಬಿವೈವಿ

‘ಸರ್ಕಾರದಲ್ಲಿ ಲಂಚ ಇಲ್ಲದೇ ಏನೂ ನಡೆಯುವುದಿಲ್ಲ. ಸಿದ್ದರಾಮಯ್ಯ ಅವರೇ ಲಂಚ ಸಂಗ್ರಹಿಸಲು ಹೊರಗುತ್ತಿಗೆ ನೀಡಿದ್ದಾರೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್‌ಗಳನ್ನು ತೆರೆಯಲಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರವಾಗಿ ಆಪಾದಿಸಿದ್ದಾರೆ.ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಆಪ್ತ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಕಮಿಷನ್ ಮಾಫಿಯಾ ಏಜೆಂಟರ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಮರ್ಯಾದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಇಲ್ಲದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ ಎಂದೂ ಒತ್ತಾಯಿಸಿದ್ದಾರೆ.ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಚಿವಾಲಯದಿಂದ ಗ್ರಾಪಂ ಕಚೇರಿವರೆಗೂ ಲಂಚ ಇಲ್ಲದೆ ಕೆಲಸ ಕಾರ್ಯಗಳು ನಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಿದ್ದರಾಮಯ್ಯ ಇದೆಲ್ಲವನ್ನೂ ನೋಡಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆ ಮುರಿಯಲು ಖುರ್ಚಿಗೆ ಅಂಟಿಕೊಂಡು ಕೂತಿದ್ದಾರೆ. ರಾಜ್ಯವನ್ನು ಲೂಟಿ ಮಾಡಿ ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದೆ, ಲಂಚ ಇಲ್ಲದೆ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ ಎಂದಾದರೆ ಈ ರಾಜ್ಯದಲ್ಲಿ ಮುಖ್ಯಮಂತ್ರಿಗಳು ತಮ್ಮ ಸಂಪೂರ್ಣ ಹಿಡಿತವನ್ನು ಕಳೆದುಕೊಂಡಿದ್ದಾರೆ ಎಂದರ್ಥ ಎಂದು ಟೀಕಿಸಿದರು.ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪದ ಬಳಿಕವೂ ಮುಖ್ಯಮಂತ್ರಿಗಳು ಜಮೀರ್ ಅಹ್ಮದ್ ಅವರ ರಾಜೀನಾಮೆ ಪಡೆದಿಲ್ಲ. ಆದರೆ, ಅದೇನೂ ದೊಡ್ಡ ವಿಚಾರವಲ್ಲ; ಭ್ರಷ್ಟಾಚಾರ ಬಗ್ಗೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇದು ಜವಾಬ್ದಾರಿಯುತ ಗೃಹ ಸಚಿವರ ಹೇಳಿಕೆ ಎಂದು ವಿಜಯೇಂದ್ರ ವ್ಯಂಗ್ಯವಾಗಿ ಹೇಳಿದರು.

ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಂಗಳೂರಿನಲ್ಲಿ ಹೊಸ ಮನೆ ನಿರ್ಮಾಣ ಮುಗಿದರೂ ಎನ್ಒಸಿ ಸಿಗುತ್ತಿಲ್ಲ. ಜನರೇಟರ್ ಇಟ್ಟುಕೊಂಡು ಗೃಹ ಪ್ರವೇಶ ಮಾಡುತ್ತಿದ್ದಾರೆ. ಇದು ರಾಜ್ಯದ ಪರಿಸ್ಥಿತಿ. ರಾಜ್ಯದ ಆಡಳಿತ ಪಕ್ಷದ ಶಾಸಕರಲ್ಲೇ ಬಹುದೊಡ್ಡ ಹತಾಶೆ ಕಾಣುತ್ತಿದೆ ಎಂದರು.ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಶಾಸಕನಾಗಿದ್ದುಕೊಂಡು ಒಂದು ಚರಂಡಿ, ಒಂದು ಶಾಲೆ ಕೆಲಸ ಆಗುತ್ತಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳ ಆತ್ಮೀಯರಾದ ಆಡಳಿತ ಪಕ್ಷದ ಶಾಸಕರೇ ಈ ಹೇಳಿಕೆ ನೀಡುತ್ತಿದ್ದಾರೆ. ಈ ರಾಜ್ಯದಲ್ಲಿ ಆಡಳಿತ ನಡೆಯುತ್ತಿದೆಯೇ ಅಥವಾ ಸರ್ಕಾರ ಬದುಕಿದೆಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ರಾಜ್ಯವನ್ನು ಲೂಟಿ ಮಾಡಲು ಸರ್ಕಾರಿ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ವಾಲ್ಮೀಕಿ ‌ನಿಗಮದ ಹಗರಣದಲ್ಲಿ ಲೂಟಿ ಮಾಡಿದ್ದನ್ನು ಜನರು ಮರೆತಿಲ್ಲ. ಇವರ ಲೂಟಿಗೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾಗಿದ್ದರು. ಬಿಜೆಪಿ ಹೋರಾಟ, ಜನಾಕ್ರೋಶ ಯಾತ್ರೆ ಮಾಡಿದಾಗ ಸಿದ್ದರಾಮಯ್ಯ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ಬಹಳ ಹಗುರವಾಗಿ ಮಾತನಾಡಿದ್ದರು. ಬಿಜೆಪಿಯವರಿಗೆ ಕೆಲಸ ಇಲ್ಲ; ಗ್ಯಾರಂಟಿಗಳ ಜನಪ್ರಿಯತೆ ಸಹಿಸಲಾಗದೆ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದಿದ್ದರು. ಈಗ ನಮಗೆ ಉತ್ತರ ನೀಡುವುದು ಬೇಡ. ನಿಮ್ಮ ಪಕ್ಷದ ಶಾಸಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಆಗ್ರಹಿಸಿದರು.