ಸಾರಾಂಶ
ಶಹಾಪುರದಲ್ಲಿ ಹತ್ತಿ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಸಚಿವ ದರ್ಶನಾಪುರ ರೈತರಿಗೆ ಸಲಹೆ
---ಕನ್ನಡಪ್ರಭ ವಾರ್ತೆ ಶಹಾಪುರ
ರೈತರು ಬೆಳೆದ ಮಾಲನ್ನು ಅಧಿಕೃತ ಮಾರಾಟಗಾರರಿಗೆ ಮಾರಾಟ ಮಾಡಿ. ಅಪರಿಚಿತರೊಂದಿಗೆ ವ್ಯವಹರಿಸಿ ತೊಂದರೆಗೆ ಒಳಗಾಗಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ರೈತರಿಗೆ ಸಲಹೆ ನೀಡಿದರು.ನಗರದ ಹೊರವಲಯದಲ್ಲಿರುವ ಮಣಿಕಂಠ ಕಾಟನ್ ಮಿಲ್ನಲ್ಲಿ ಭಾರತೀಯ ಹಟ್ಟಿ ನಿಗಮ ನಿಯಮಿತ ವತಿಯಿಂದ ನಡೆದ ಹತ್ತಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಮಾಡಲು 14 ಖರೀದಿ ಕೇಂದ್ರಗಳನ್ನು ತೆರೆದಿದ್ದು, ಆದಷ್ಟು ರೈತರು ಖರೀದಿ ಕೇಂದ್ರದಲ್ಲಿ ಹತ್ತಿ ಮಾರಾಟ ಮಾಡಿದರೆ ಯಾವುದೇ ರೀತಿ ಮೋಸ ಆಗುವುದಿಲ್ಲ ಎಂದರು.ತಾಲೂಕು ಸಿಸಿಐ ಅಧಿಕಾರಿ ಕಿರಣ್ ಪುರೋಹಿತ್ ಮಾತನಾಡಿ, ಗುಣಮಟ್ಟವನ್ನು ಪರಿಶೀಲಿಸಿದ ನಂತರ, ಯೋಜನೆಯಡಿ ಪ್ರತಿ ಎಕರೆಗೆ 12 ಕ್ವಿಂಟಲ್ ಹತ್ತಿಯನ್ನು ಮಾತ್ರ ಖರೀದಿಸಲಾಗುತ್ತದೆ. 12% ಕ್ಕಿಂತ ಹೆಚ್ಚು ತೇವಾಂಶವನ್ನು ಹೊಂದಿದ್ದರೆ ಹತ್ತಿಯನ್ನು ತಿರಸ್ಕರಿಸಲಾಗುತ್ತದೆ. ಮಧ್ಯಮ ಗುಣಮಟ್ಟದ ಹತ್ತಿಗೆ ಕ್ವಿಂಟಲ್ಗೆ 7,121 ರು.ಗಳ ದರ ನಿಗದಿ ಮಾಡಲಾಗಿದ್ದು, ಉತ್ತಮ ಗುಣಮಟ್ಟದ ಹತ್ತಿಗೆ 7,521 ರು.ಗಳು ಸಿಗಲಿದೆ. ಹತ್ತಿ ಕೃಷಿಯ ಬಗ್ಗೆ ವಿವರಗಳನ್ನು ರೈತರ ಭೂ ದಾಖಲೆಗಳಲ್ಲಿ (ಆರ್ಟಿಸಿ) ನಮೂದಿಸಿರಬೇಕು ಎಂದು ಅವರು ಹೇಳಿದರು.
ಮಣಿಕಂಠ ಕಾಟನ್ ಮಿಲ್ ಮಾಲೀಕ ಗುರುಮಣಿಕಂಠ ಮಾತನಾಡಿ, ಸರ್ಕಾರ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಿರುವುದು ಸ್ವಾಗತಾರ್ಹ. ಆದರೆ, ರೈತರು ಮಾಡಿದ ಖರ್ಚು ವೆಚ್ಚ ನೋಡಿದರೆ ಈ ಬೆಂಬಲ ಬೆಲೆ ಸಾಕಾಗುವುದಿಲ್ಲ. ಕನಿಷ್ಠ 10 ಸಾವಿರ ಬೆಂಬಲ ಬೆಲೆ ನೀಡಿದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಸಚಿವರು ಇದರ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.ಈ ಕಾರ್ಯಕ್ರಮದಲ್ಲಿ ರೈತ ಮಲ್ಲಿಕಾರ್ಜುನ್ ಹಾಗೂ ರೈತ ಮಹಿಳೆ ಬಸಮ್ಮ ಮಾಲಿ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷೆ ಬಸಮ್ಮ ಉರಿಕಾಯಿ, ಕಾರ್ಯದರ್ಶಿ ಸುಮಂಗಲದೇವಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಪಾಟೀಲ್, ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ಮಂದರವಾಡ, ಸಿದ್ದಲಿಂಗಪ್ಪ ಆನೆಗುಂದಿ, ಸೋಮನಗೌಡ, ಚಂದಪ್ಪ, ಭೀಮಶಂಕರ್ ಹುಲ್ಕಲ್, ಸಂಗನಗೌಡ ಗೌಡ, ಗೌಡಪ್ಪಗೌಡ, ಶಿವಮಾಂತು ಚಂದಾಪುರ ಸೇರಿದಂತೆ ಇತರರಿದ್ದರು-----
ಫೋಟೊ: ಶಹಾಪುರ ತಾಲೂಕಿನ ಭೀಮರಾಯನಗುಡಿಯ ಹತ್ತಿರವಿರುವ ಮಣಿಕಂಠ ಕಾಟನ್ ಮಿಲ್ ನಲ್ಲಿ ಸ್ಥಾಪಿಸಿದ ಹತ್ತಿ ಖರೀದಿ ಕೇಂದ್ರವನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.12ವೈಡಿಆರ್15: