ಕೊಟ್ಟ ಮಾತಿಗೆ ತಪ್ಪುವುದಿಲ್ಲ: ವೇಣುಗೋಪಾಲ ನಾಯಕ

| Published : Apr 04 2024, 01:00 AM IST

ಕೊಟ್ಟ ಮಾತಿಗೆ ತಪ್ಪುವುದಿಲ್ಲ: ವೇಣುಗೋಪಾಲ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ತಾಲೂಕಿನ ತಳವಾರಗೇರಾ, ಬೋನಾಲ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಶಾಸಕ ರಾಜಾ ವೆಂಕಟಪ್ಪ ನಾಯಕ ರಾಜಕೀಯ ಜೀವಿತಾವಧಿಯಲ್ಲಿ ಕೊಟ್ಟ ಮಾತಿಗೆ ತಪ್ಪಿಲ್ಲ. ಅವರ ಮಗನಾದ ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ತಂದೆ ಹಾದಿಯಲ್ಲಿ ಸಾಗುತ್ತೇನೆ. ತಪ್ಪಿದಾಗ ತಿದ್ದಿ ಹೇಳುವ ಹಕ್ಕು ನಿಮಗೆ ಮಾತ್ರ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ತಾಲೂಕಿನ ತಳವಾರಗೇರಾ, ಬೋನಾಲ, ಜಾಲಿಬೆಂಚಿ, ಮಾವಿನಮಟ್ಟಿ, ಚಿಗರಿಹಾಳ, ಮಾಚಗುಂಡಾಳ ಗ್ರಾಮಗಳಿಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ರಾಯಚೂರು ಲೋಕಸಭೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಒಟ್ಟಿಗೆ ನಡೆಯುತ್ತಿದೆ. ಮತದಾರರು ಆಮಿಷಕ್ಕೆ ಒಳಗಾಗಬಾರದು. ಕೆಲಸ ಮಾಡುವವರಿಗೆ ಮತ ನೀಡಬೇಕು ಎಂದರು.

ನುಡಿದಂತೆ ನಡೆದಿದ್ದೇವೆ. ನಾವು ಚುನಾವಣೆಗೂ ಮುನ್ನ ಕೊಟ್ಟ ಭರವಸೆ ಈಡೇರಿಸಿದ್ದೇವೆ. ರಾಜಾ ವೆಂಕಟಪ್ಪ ನಾಯಕರ ಮಕ್ಕಳಾದ ಐವರು ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ಅಲ್ಲದೆ ಈ ಚುನಾವಣೆ ನಾವು ನಿರೀಕ್ಷಿಸಿರಲಿಲ್ಲ. ನಾವು ನೀವು ನಮ್ಮ ನಾಯಕರನ್ನು ಕಳೆದುಕೊಂಡು ದುಖಃದಲ್ಲಿದ್ದೇವೆ. ಇಂತಹ ಕಷ್ಟದ ಸಮಯದಲ್ಲಿ ನೀವೆ ನಮಗೆ ದಾರಿ ತೋರಿಸುವವರು, ನಮ್ಮನ್ನು ಕೈ ಹಿಡಿದು ನಡೆಸಬೇಕು. ಕಾಂಗ್ರೆಸ್ ಗೆಲುವಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ, ಮುಖಂಡರಾದ ವೆಂಕೋಬ ಯಾದವ, ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಕುಮಾರಸ್ವಾಮಿ ಗುಡ್ಡೊಡಗಿ, ದೊಡ್ಡ ದೇಸಾಯಿ ದೇವರಗೊನಾಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಕಾಳಪ್ಪ ಕವಾತಿ, ಮಲ್ಲಣ್ಣ ಐಕೂರ, ರಂಗನಗೌಡ ದೇವಿಕೇರಾ ಮುಂತಾದವರಿದ್ದರು.