ಕನಸು ಕಾಣುವುದಲ್ಲ, ಅದನ್ನು ನನಸಾಗಿಸಲು ಪ್ರಯತ್ನಿಸಿ: ಆರ್. ಚೇತನ್

| Published : May 18 2025, 01:05 AM IST / Updated: May 18 2025, 01:06 AM IST

ಸಾರಾಂಶ

ಅನುಭವ ಇಲ್ಲದಾಗ ತಪ್ಪುಗಳನ್ನು ಮಾಡುತ್ತೇವೆ. ತಿದ್ದಿಕೊಂಡು ಬದುಕಿದರೆ ಬದುಕು ಅರ್ಥಪೂರ್ಣವಾಗುತ್ತದೆ. ನೀವು ಮಾಡುವ ಶ್ರಮದಾನವೂ ಎಲ್ಲದಕ್ಕಿಂತಲೂ ಶ್ರೇಷ್ಠವಾಗಿದೆ. ಯಾವುದೇ ಕೆಲಸವನ್ನು ಮುಜುಗರ ಬಿಟ್ಟು ಹಳ್ಳಿ ಹಳ್ಳಿಗಳಲ್ಲಿ ಸಮಾಜದ ಒಳಿತಿಗಾಗಿ ಕೆಲಸವನ್ನು ಮಾಡಬೇಕು. ವಿದ್ಯಾರ್ಥಿಗಳು ಸಹಕಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು .

ತಿಪಟೂರು: ವಿದ್ಯಾರ್ಥಿಗಳೇ ನೀವು ಸಾಧಕರಾಗಬೇಕಾದರೆ ರಾತ್ರಿ ಕನಸು ಕಾಣುವುದಲ್ಲ, ಅದನ್ನು ನನಸಾಗಿಸಲು ಬೇಕಾದ ಪ್ರಯತ್ನ, ಗುರಿ, ಶ್ರದ್ಧೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಆರ್. ಚೇತನ್ ತಿಳಿಸಿದರು.

ತಾಲೂಕಿನ ಹೊನ್ನವಳ್ಳಿ- ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಕಠಿಣ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಪಡೆಯಬಹುದು. ನೀವು ವಿದ್ಯಾರ್ಥಿ ದಿಸೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗಬೇಕು. ಪ್ರತಿನಿತ್ಯ ದಿನ ಪತ್ರಿಕೆಗಳು, ಪುಸ್ತಕಗಳು, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಮಾಹಿತಿಯನ್ನು ಪಡೆಯುತ್ತಾ ಅಭ್ಯಾಸ ಮಾಡಬೇಕು. ಕೇವಲ ಭಾಷಣದಿಂದ ಬದಲಾವಣೆ ಸಾಧ್ಯವಿಲ್ಲ. ಅದನ್ನು ಕೃತಿ ರೂಪದಲ್ಲಿ ಅನುಷ್ಠಾನಕ್ಕೆ ತಂದು ಕಾರ್ಯ ಸಾಧಿಸಬೇಕು. ವಿದ್ಯಾರ್ಥಿಗಳಾದ ನೀವು ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರಿತು ಆ ಜನರ ನೆರವಿಗೆ ಧಾವಿಸಬೇಕು. ಇಂತಹ ಶಿಬಿರಗಳು ನಿಮ್ಮನ್ನು ಉತ್ತುಂಗಕ್ಕೇರಿಸುತ್ತವೆ. ಏನನ್ನಾದರೂ ಸಾಧಿಸಬೇಕೆಂದರೆ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ತಂದೆ, ತಾಯಿ, ಗುರು, ಹಿರಿಯರ ಮಾರ್ಗದರ್ಶನವನ್ನು ಪಡೆದು ಉತ್ತಮ ಪ್ರಜೆಗಳಾಗಬೇಕೆಂದರು.

ಐಟಿಐ ಕಾಲೇಜಿನ ಉಪನ್ಯಾಸಕ ವೆಂಕಟೇಶ್ ಮೂರ್ತಿ ಮಾತನಾಡಿ, ಅನುಭವ ಇಲ್ಲದಾಗ ತಪ್ಪುಗಳನ್ನು ಮಾಡುತ್ತೇವೆ. ತಿದ್ದಿಕೊಂಡು ಬದುಕಿದರೆ ಬದುಕು ಅರ್ಥಪೂರ್ಣವಾಗುತ್ತದೆ. ನೀವು ಮಾಡುವ ಶ್ರಮದಾನವೂ ಎಲ್ಲದಕ್ಕಿಂತಲೂ ಶ್ರೇಷ್ಠವಾಗಿದೆ. ಯಾವುದೇ ಕೆಲಸವನ್ನು ಮುಜುಗರ ಬಿಟ್ಟು ಹಳ್ಳಿ ಹಳ್ಳಿಗಳಲ್ಲಿ ಸಮಾಜದ ಒಳಿತಿಗಾಗಿ ಕೆಲಸವನ್ನು ಮಾಡಬೇಕು. ವಿದ್ಯಾರ್ಥಿಗಳು ಸಹಕಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಚ್.ಬಿ. ಕುಮಾರಸ್ವಾಮಿ ಮಾತನಾಡಿ, ಸ್ವಯಂ ಸೇವಕರು ಶಿಸ್ತು, ಸಂಯಮ, ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಭಾಗಿಯಾಗಿ ಎಲ್ಲ ರಂಗಗಳಲ್ಲೂ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದು ತಿಳಿಸಿದರು.

ಪಿಡಿಒ ಶಿವನಂಜೇಗೌಡ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಎಂ.ಆರ್. ಚಿಕ್ಕಹೆಗ್ಗಡೆ, ಡಾ ಶಶಿಕುಮಾರ್. ಪ್ರೊ. ಸ್ಮಿತಾ, ಭಾರತಿ, ಡಾ. ಎಲ್.ಎಂ. ವೆಂಕಟೇಶ್, ಪ್ರೊ. ಜ್ಯೋತಿ. ಪ್ರೊ ಜಾಹಿರಾ, ಶಶಿಕುಮಾರ್, ಉದ್ಯಮಿ ಪ್ರವೀಣ್, ಲಿಖಿತ್‌ಗೌಡ, ನಿಜಗುಣ, ಗುರು ಕರಿಸಿದ್ಧೇಶ್ವರ ಮಠದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.