ದಾಬಸ್ಪೇಟೆ: ನಾಡಪ್ರಭು ಕೆಂಪೇಗೌಡರು, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿಯಂತಹ ಸಾಮಾಜಿಕ ಸುಧಾಕರನ್ನು ಯಾವುದೋ ಒಂದು ಸಮಾಜಕ್ಕೆ ಮಾತ್ರ ಸೀಮಿತ ಮಾಡುವುದು ಸರಿಯಲ್ಲ ಎಂದು ಬೆಂಗಳೂರಿನ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಶಿವಗಂಗಾ ವೃತ್ತದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಹಾಗೂ ಆದಿಚುಂಚನಗಿರಿ ಮಠದ ಬೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಗಳನ್ನು ಅನಾವರಣಗೊಳಿಸಿ ಮಾತನಾಡಿದ ಶ್ರೀಗಳು, ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಸ್ಥಳೀಯ ಪೌರಾಣಿಕ ಸ್ಥಳವಾದ ಶಿವಗಂಗೆಯಲ್ಲಿಯೂ ಆಡಳಿತ ನಡೆಸಿದ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ. ನೆಲಮಂಗಲ ತಾಲೂಕಿಗೆ ಅಪಾರವಾದ ಕೊಡುಗೆ ನೀಡಿ ಇತಿಹಾಸದಲ್ಲಿ ಚಿರಸ್ಮರಣೀಯರಾಗಿದ್ದಾರೆ. ಸಮಾಜಕ್ಕೆ ಕೊಡುಗೆ ನೀಡಿದ ಕೆಂಪೇಗೌಡರ ಪ್ರತಿಮೆ ನಿರ್ಮಿಸಿರುವುದು ಸಂತೋಷವಾಗಿದೆ ಎಂದರು.ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯವರ ಕೊಡುಗೆ ಅಪಾರವಾಗಿದೆ. ನಮ್ಮ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣಧಾರೆ ಎರೆಯುತ್ತಿದ್ದಾರೆ. ಇತ್ತೀಚೆಗೆ ನಿರ್ಮಲಾನಂದನಾಥ ಸ್ವಾಮೀಜಿಯವರು ಶಿವಗಂಗೆಗೆ ಭೇಟಿ ನೀಡಿ ತಪೋವನಕ್ಕೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಶಿವಗಂಗೆ ಕ್ಷೇತ್ರದಲ್ಲಿಯೂ ಸಾಮಾಜಿಕ ಸೇವೆ ಸಲ್ಲಿಸಲಿದ್ದಾರೆ ಎಂದರು.
ಸೋಂಪುರ ವಿಎಸ್ಎಸ್ಎನ್ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಯಾರೋ ಒಂದಿಬ್ಬರು ಮಾಡಿದ ಗೊಂದಲದಿಂದಾಗಿ ಆತುರದಲ್ಲಿ ಕೆಂಪೇಗೌಡರು ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಸಮಾಜದ ಗೌರವಾನ್ವಿತ ಸ್ಥಾನದಲ್ಲಿರುವವರು ಸಾಮರಸ್ಯ ಕಾಪಾಡಬೇಕೇ ಹೊರತು ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು, ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸುತ್ತೇವೆ ಎಂದರು.ಕರವೇ ಅಧ್ಯಕ್ಷ ವೀರಸಾಗರ ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಪ್ರತಿಮೆ ನಿರ್ಮಾಣದಲ್ಲಿ ಒಕ್ಕಲಿಗರು ವೀರಶೈವ ಲಿಂಗಾಯತ ಸಮಾಜದಲ್ಲಿ ಒಡಕು ತರಲು ಮುಂದಾಗಿದ್ದು ಬೇಸರ ತರಿಸಿದೆ. ಲಿಂಗಾಯತ ಸಮುದಾಯದ ಜೊತೆ ನಾವು ಸಹೋದರತ್ವದಿಂದ ಬದುಕುತ್ತಿದ್ದು ಯಾರೂ ಸಮಾಜ ಒಡೆಯುವ ಕೆಲಸ ಮಾಡಬಾರದು. ಸಮಾಜ ಒಡೆಯಲು ಬರುವವರಿಗೆ ಮುಂದಿನ ದಿನಗಳಲ್ಲಿ ತಕ್ಕಪಾಠ ದೇವರೇ ಕಲಿಸುತ್ತಾನೆ ಎಂದರು.
ಈ ಸಂದರ್ಭದಲ್ಲಿ ಒಕ್ಕಲಿಗ ಜಾಗೃತಿ ಸಂಘದ ಅಧ್ಯಕ್ಷ ಗಂಗರುದ್ರಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ಟಾಭಿರಾಮಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಬೈರೇಶ್, ಮುಖಂಡರಾದ ಬಿ.ಎಂ.ಶ್ರೀನಿವಾಸ್, ಬಿ.ಪಿ.ಶ್ರೀನಿವಾಸ್, ಶಶಿಧರ್, ಮರಿಯಪ್ಪಗೌಡ, ಮನೋಹರ್, ಪುಟ್ಟಗಂಗಯ್ಯ, ಮಂಜುನಾಥ್, ದೇವರಾಜು, ಬಾಳೆಕಾಯಿ ರಾಮಣ್ಣ, ಮೂರ್ತಿ, ಚನ್ನತಿಮ್ಮಯ್ಯ, ಗೌರಾಪುರ ರುದ್ರೇಶ್, ರಾಘವೇಂದ್ರ, ಸುರೇಶ್, ದೇವರಾಜು, ವೆಂಕಟೇಶ್, ಹನುಮಂತರಾಜು, ಚಂದ್ರಶೇಖರ್ ಇತರರಿದ್ದರು.
ಪೋಟೋ 1 * 2 : ದಾಬಸ್ಪೇಟೆಯ ಶಿವಗಂಗಾ ವೃತ್ತದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಹಾಗೂ ಆದಿಚುಂಚನಗಿರಿ ಮಠದ ಬೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಪುತ್ಥಳಿಗಳನ್ನು ಬೆಂಗಳೂರಿನ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅನಾವರಣಗೊಳಿಸಿದರು.