ಕನ್ನಡಪ್ರಭ ವಾರ್ತೆ ಬೆಳಗಾವಿಬಿಡಿಸಿಸಿ ಬ್ಯಾಂಕ್ ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಗ್ರಾಹಕರು ಕಿವಿಗೊಡಬಾರದು. ಬ್ಯಾಂಕ್ನ್ನು ಸಮರ್ಪಕವಾಗಿ ನಡೆಸಿ ಯಾವುದೇ ರೈತರು ಹಾಗೂ ಗ್ರಾಹಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಸಿಪಿಎಡ್ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ, ಬ್ಯಾಂಕ್ನಿಂದ ಜಾರಿಗೆ ತರಲಾಗುತ್ತಿರುವ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ಯಾಂಕ್ನ ಮೇಲೆ ಗ್ರಾಹಕರು ವಿಶ್ವಾಸ ಇಟ್ಟುಕೊಳ್ಳಬೇಕು. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವದಲ್ಲಿ ಆಡಳಿತ ನಡೆಸುವ ಜವಾಬ್ದಾರಿಯನ್ನು ಜನರು ನೀಡಿದ್ದೀರಿ. ಈ ಐದು ವರ್ಷಗಳಲ್ಲಿ ಲೆಕ್ಕ ತಪ್ಪಿದರೆ ಎಲ್ಲೆ ಬೇಕಾದರೂ ನಿಂತು ಪ್ರಶ್ನಿಸಬಹುದು ಎಂದು ಭರವಸೆ ನೀಡಿದರು.ಅಧಿಕಾರ ಬದಲಾದ ನಂತರ ಕೆಲವರಿಗೆ ತೊಂದರೆ ಆಗಿರುವುದು ಸಹಜ. ರಾಜಕಾರಣದಲ್ಲಿ ಆರೋಪಗಳು ಸಾಮಾನ್ಯ. ಆದರೆ, ಗ್ರಾಹಕರು ಅಪಪ್ರಚಾರಕ್ಕೆ ಕಿವಿಗೊಡಬಾರದು. ಬ್ಯಾಂಕ್ನ ಎಲ್ಲಾ ವ್ಯವಹಾರಗಳು ಲೆಕ್ಕಪತ್ರದಲ್ಲಿ ದಾಖಲಾಗುತ್ತವೆ. ಯಾವುದೇ ಸಂಶಯ ಇದ್ದರೆ ನೇರವಾಗಿ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಕೇಳಬಹುದು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ಗೆ ತನ್ನ ಸಂಬಂಧ ಏನು ಎಂದು ಪ್ರಶ್ನಿಸುವವರಿಗೆ ಉತ್ತರ ನೀಡಿದ ಅವರು, 1996ರಿಂದ ಪ್ರಯತ್ನಿಸಿ 29 ವರ್ಷಗಳ ನಂತರ ಬ್ಯಾಂಕ್ನ ಚುಕ್ಕಾಣಿ ಹಿಡಿದಿದ್ದೇವೆ. ಇದನ್ನು ಸಹಿಸದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಬ್ಯಾಂಕ್ ನಂಬರ ಒನ್ ಗುರಿ: ಜೊಲ್ಲೆ
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ಬ್ಯಾಂಕ್ನ್ನು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಕಳೆದ 30 ವರ್ಷಗಳಲ್ಲಿ ಜಾರಿಗೆ ಬರದ ಹಲವು ಯೋಜನೆಗಳನ್ನು ಈಗ ಜಾರಿಗೆ ತಂದಿದ್ದೇವೆ. ನವೆಂಬರ್ನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಅಪಪ್ರಚಾರದಿಂದ ಠೇವಣಿ ಕಡಿಮೆಯಾಗಿತ್ತು. ಆದರೆ, ಪ್ರಸ್ತುತ ಬ್ಯಾಂಕ್ನಲ್ಲಿ ₹544 ಕೋಟಿ ಠೇವಣಿ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.ಬೆಳೆಸಾಲ ಸೇರಿದಂತೆ ವಿವಿಧ ಸಾಲಗಳು, ನೌಕರರಿಗೆ ಆರೋಗ್ಯ ವಿಮೆ, ಜೀವ ವಿಮೆ, ಪಿಂಚಣಿ ಯೋಜನೆಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹ ಯೋಜನೆಗಳನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ನಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ ಪಾಟೀಲ್, ಅಪ್ಪಾಸಾಹೇಬ್ ಕುಲಗೂಡೆ, ನೀಲಕಂಠ ಕಪ್ಪಲಗುದ್ದಿ, ಗಣೇಶ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ವಿರುಪಾಕ್ಷಿ ಮಾಮನಿ, ಮಲ್ಲಪ್ಪ ಯಾದವಾಡ, ನಾನಾಸಾಹೇಬ್ ಪಾಟೀಲ್, ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ, ಐ.ಸಿ.ಕಲ್ಮಠ, ಸಂಗಯ್ಯ ಹಿರೇಮಠ, ಪ್ರಕಾಶ ಬ್ಯಾಳಿಗೌಡರ ಮೊದಲಾದವರು ಉಪಸ್ಥಿತರಿದ್ದರು.-----
ಕೋಟ್ಅಣ್ಣಾಸಾಹೇಬ್ ಜೊಲ್ಲೆ ಪ್ರತಿಯೊಂದು ಲೆಕ್ಕ ಹಾಕಿ ಬ್ಯಾಂಕ್ ನಡೆಸುತ್ತಿದ್ದಾರೆ. ಮಂಗಳೂರು ಡಿಸಿಸಿ ಬ್ಯಾಂಕ್ ದಾಖಲೆಗಳನ್ನು ಮುರಿಯುವ ಗುರಿ ಹೊಂದಿದ್ದೇವೆ. ಬೆಳಗಾವಿ ಹಾಲು ಒಕ್ಕೂಟವನ್ನು ಶೂನ್ಯದಿಂದ ₹13 ಕೋಟಿ ಲಾಭದ ಮಟ್ಟಕ್ಕೆ ತಂದಿದ್ದರೂ, ಅದನ್ನು ಯಾರೂ ಗಮನಿಸುವುದಿಲ್ಲ .ಶುಗರ್ಸ್ ಕಾರ್ಖಾನೆ ಹಣ ಕಟ್ಟದಿದ್ದರೆ ಕಾರ್ಖಾನೆಯನ್ನೇ ಬ್ಯಾಂಕ್ಗೆ ಒಪ್ಪಿಸಲು ಸಿದ್ಧ.ಬಾಲಚಂದ್ರ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ