ಕೊಪ್ಪಳ: ಮಂತ್ರಿ ಮಾಡಿಲ್ಲ ಎಂದು ಬರಗಾಲ ಕುರಿತು ಜರುಗಿದ ಸಭೆಗೆ ಹಾಜರಾಗಿಲ್ಲ. ಹಾಗೇ ಮಂತ್ರಿ ಮಾಡಿಲ್ಲ ಎಂದು ಜರುಗುವ ಅಧೀವೇಶನಕ್ಕೂ ಗೈರಾಗಬೇಡಿ. ಹೋಗಿ ಕ್ಷೇತ್ರದ ಅಭಿವೃದ್ಧಿ ಪರ ಧ್ವನಿ ಎತ್ತಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಸಲವಾದರೂ ಶಾಸಕ ರಾಘವೇಂದ್ರ ಹಿಟ್ನಾಳ್ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ ಚರ್ಚಿಸಿ ಸರ್ಕಾರದಿಂದ ಅವುಗಳಿಗೆ ಪರಿಹಾರ ಕೊಡಿಸಲಿ.ಮೂರನೇ ಸಲ ಶಾಸಕರಾಗಿದ್ದರೂ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ ಚರ್ಚಿಸಿ ಸರ್ಕಾರದ ಗಮನ ಸೆಳೆದಿದ್ದು ಯಾರೂ ಕೇಳಿಲ್ಲ. ಒತ್ತಡ ಹೆಚ್ಚುತ್ತಿದ್ದಂತೆಯೆ ಕಳೆದ ಸಲ ಕಾರ್ಖಾನೆಗಳಿಂದಾಗುತ್ತಿರುವ ಸಮಸ್ಯೆ ನಾಮಕವಾಸ್ತೆ ಎಂಬಂತೆ ಪ್ರಸ್ತಾಪಿಸಿ ಅದನ್ನೆ ದೊಡ್ಡ ಸಾಧನೆ ಎಂದು ಬಿಂಬಿಸಿಕೊಂಡರು. ವಾಸ್ತವದಲ್ಲಿ ಮಾಲಿನ್ಯದ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿಲ್ಲ. ನಾವು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಸಂಪರ್ಕದಲ್ಲಿದ್ದು ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕ್ರಮ ಜಾರಿಗೊಳಿಸುವಂತೆ ಮಾಡದಿದ್ದರೆ ಕೊಪ್ಪಳದಲ್ಲಿ ಯಾವ ಕ್ರಮವೂ ಆಗುತ್ತಿರಲಿಲ್ಲ. ಅಧಿಕಾರದಲ್ಲಿರದವರು ಪ್ರಯತ್ನ ಮಾಡಬಹುದಾದರೆ ಅಧಿಕಾರದಲ್ಲಿರುವವರು ಏಕೆ ಪ್ರಯತ್ನಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.ಯೋಜನೆಗಳಿಗೆ ನೂರಾರು ಕೋಟಿ ಬಿಡುಗಡೆಯಾಗಿದೆ ಎಂದು ನಿಯಮಿತವಾಗಿ ಹೇಳಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಆದರೆ ಅಭಿವೃದ್ಧಿ ಕಾಣುತ್ತಿಲ್ಲ.ಹಣ ಎಲ್ಲಿ ಹೋಯಿತು? ಯೋಜನೆಗಳ ಪ್ರಗತಿ ಏನಾಗಿದೆ? ಏಕೆ ಕೊಪ್ಪಳ ನಗರ ಸೇರಿದಂತೆ ಕ್ಷೇತ್ರಾದ್ಯಂತ ಮೂಲಭೂತ ಸೌಕರ್ಯ ಕನಿಷ್ಟ ಮಟ್ಟದಲ್ಲಿವೆ? ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳೇ ಮಾಯವಾಗಿವೆ. ಬರದಿಂದ ರೈತರು ಗುಳೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿವ ನೀರಿಗೆ ತೀವ್ರ ಅಭಾವವಾಗುವ ಸಾಧ್ಯತೆಯಿದೆ. ಕ್ಷೇತ್ರಾದ್ಯಂತ ಮಾದಕ ವಸ್ತುಗಳ ಮಾರಾಟ ಜೋರಾಗುತ್ತಿದೆ. ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬರಗಾಲದ ಕುರಿತು ಸಭೆಗೆ ಶಾಸಕರು ಗೈರು ಹಾಜರಾದರು. ತಮ್ಮ ಸಿಟ್ಟನ್ನು ತೋರ್ಪಡಿಸಲು ಅಧಿವೇಶನಕ್ಕೆ ಗೈರು ಹಾಜರಾಗುವುದು ಬೇಡ. ಹೈಕಮಾಂಡ್ ಮೇಲಿನ ಸೇಡನ್ನು ತಮ್ಮನ್ನು ಆಯ್ಕೆ ಮಾಡಿದ ಮತದಾರರ ಮೇಲೆ ತೋರಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಕೈಗಾರಿಕೆಗಳ ಸಮಸ್ಯೆಗಳಿಗೆ ಜನರ ಬೇಡಿಕೆಗಳಿಗೆ ತಮ್ಮ ನಿಲುವೇನು? ಕಳೆದ ಅಧಿವೇಶನದಲ್ಲಿ ತಾವು ಮಾತನಾಡಿದಾಗಿನಿಂದ ಇಲ್ಲಿಯ ತನಕ ಬೇಡಿಕೆ ಈಡೇರಿಕೆಗಾಗಿ ತಾವು ಕೈಗೊಂಡ ಕ್ರಮಗಳೇನು ಎಂಬುದನ್ನು ಶಾಸಕರು ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.