ಸಭೆಯಲ್ಲಿ ಸುಳ್ಳು ದಾಖಲೆ ತೋರಿಸದಿರಿ: ಅಧಿಕಾರಿಗಳಿಗೆ ಶಾಸಕ ಶಿವಣ್ಣನವರ ತರಾಟೆ

| Published : Jun 14 2025, 12:24 AM IST

ಸಭೆಯಲ್ಲಿ ಸುಳ್ಳು ದಾಖಲೆ ತೋರಿಸದಿರಿ: ಅಧಿಕಾರಿಗಳಿಗೆ ಶಾಸಕ ಶಿವಣ್ಣನವರ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 3 ವರ್ಷದಿಂದ ಸಾವಿರಾರು ಸಂಖ್ಯೆ ಸಸಿಗಳನ್ನು ನೆಟ್ಟಿರುವುದಾಗಿ ಸುಳ್ಳು ದಾಖಲೆ ತೋರಿಸುತ್ತಿದ್ದಿರಿ. ಪ್ರಾಯೋಗಿಕವಾಗಿ ಗಿಡಗಳು ಅಷ್ಟೊಂದು ಗಿಡಗಳಿಲ್ಲ, ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದು ಶಾಸಕ ಶಿವಣ್ಣನವರ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬ್ಯಾಡಗಿ: ಅರಣ್ಯ ಇಲಾಖೆಯಿಂದ ರಸ್ತೆ ಪಕ್ಕದಲ್ಲಿ ನೆಡುವ ಗಿಡಮರಗಳ ಯಾಕೆ ಸುಳ್ಳು ಅಂಕಿ ಸಂಖ್ಯೆಗಳನ್ನು ನೀಡುತ್ತಿದ್ದಿರಿ. ಇದರಿಂದ ಇಲಾಖೆ ಸೇರಿದಂತೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ನನ್ನ ಗೌರವಕ್ಕೆ ಧಕ್ಕೆ ಬರುತ್ತಿದೆ. ಇಂತಹ ಪ್ರಕರಣಗಳು ಕೇವಲ ಒಂದು ಕಡೆಯಲ್ಲ, ಬಹಳಷ್ಟು ಕಡೆ ನಡೆಯುತ್ತಿದ್ದು, ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅರಣ್ಯ ಇಲಾಖೆ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಸ್ತೆ ಎರಡೂ ಬದಿಗಳಲ್ಲಿ ನೆರಳು ನೀಡುವಂತಹ ಗಿಡಮರಗಳನ್ನು ನೆಟ್ಟು ಸುಮಾರು 3 ವರ್ಷಗಳ ಕಾಲ ಅವುಗಳು ಹಾಳಾಗದಂತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಆದರೆ ಕಳೆದ 3 ವರ್ಷದಿಂದ ಸಾವಿರಾರು ಸಂಖ್ಯೆ ಸಸಿಗಳನ್ನು ನೆಟ್ಟಿರುವುದಾಗಿ ಸುಳ್ಳು ದಾಖಲೆ ತೋರಿಸುತ್ತಿದ್ದಿರಿ. ಪ್ರಾಯೋಗಿಕವಾಗಿ ಗಿಡಗಳು ಅಷ್ಟೊಂದು ಗಿಡಗಳಿಲ್ಲ, ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದು ಪ್ರಶ್ನಿಸಿದರು.

ಗುಂಡೇನಹಳ್ಳಿಯಿಂದ ಕದಮನಹಳ್ಳಿ ಸಾಗುವ ರಸ್ತೆಯಲ್ಲಿ ನೆಟ್ಟಿರುವ ಸಸಿಗಳ ಲೆಕ್ಕ ಸಾವಿರದಲ್ಲಿದೆ. ಆದರೆ ವಾಸ್ತವದಲ್ಲಿ ಹೆಚ್ಚೆಂದೆರೆ 40ರಿಂದ 50 ಸಸಿಗಳು ಮಾತ್ರ ಕಾಣಸಿಗುತ್ತವೆ. ಖುದ್ದಾಗಿ ನೋಡಿದ್ದೇನೆ. ಇದಕ್ಕೆ ನಾನೇ ಸಾಕ್ಷಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿ ತಮ್ಮವರನ್ನು ಈಗಲೇ ಕಳಿಸಿ ಸರ್. 500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವ ಬಗ್ಗೆ ತೋರಿಸುತ್ತೇನೆ ಎಂದು ಮರು ಸವಾಲೆಸೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಮ್ಮ ಆಪ್ತ ಸಹಾಯಕರಿಗೆ ಇವರನ್ನು ಕರೆದುಕೊಂಡು ಹೋಗಿ ನೋಡಿ ಬರುವಂತೆ ಸೂಚಿಸಿದರು.ಕಾಮಗಾರಿ ಬಗ್ಗೆ ತಕರಾರು: ಬ್ಯಾಡಗಿ ಮತಕ್ಷೇತ್ರದಾದ್ಯಂತ ಜೆಜೆಎಂ ಕಾಮಗಾರಿ ನಡೆಯುತ್ತಿದೆ. 7 ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಳಿಸದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಜನರ ಬಗ್ಗೆ ನಿಷ್ಕಾಳಜಿ ಬೇಡ. ಕೆಲವೆಡೆ ಅಧಿಕಾರಿಗಳು ಗುತ್ತಿಗೆದಾರನ ಕೈಯಲ್ಲಿ ಸಿಲುಕಿದ್ದು, ಮನಸ್ಸಿಗೆ ಬಂದಾಗ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಕಾಮಗಾರಿ ಸಂಪೂರ್ಣ ಬಿಲ್ ಪಡೆದು ಗುತ್ತಿಗೆದಾರರೇ ಕೈಗೆ ಸಿಗುತ್ತಿಲ್ಲ. ಇದೇನು ಅವವ್ಯಸ್ಥೆ ಎಂದ ಅವರು, ಅಪೂರ್ಣಗೊಂಡ ಕಾಮಗಾರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ರಾಜ್ ಗ್ರಾಮೀಣ ಕುಡಿಯವ ನೀರು ಅಧಿಕಾರಿ ಸುರೇಶ ಬೇಡರ, ತಾಲೂಕಿನ 50 ಗ್ರಾಮಗಳಲ್ಲಿ ಕೆಲಸ ಪೂರ್ಣಗೊಂಡಿದ್ದು, ಇನ್ನುಳಿದ 16 ಗ್ರಾಮಗಳಲ್ಲಿ ಶೀಘ್ರದಲ್ಲೇ ಪುರ್ಣಗೊಳಿಸುವ ಭರವಸೆ ನೀಡಿದರು.

ಟೆಂಡರ್ ಕರೆದಿಲ್ಲವೇಕೆ?: ಸಣ್ಣ ನೀರಾವರಿ ಇಲಾಖೆ ಕುರಿತು ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವಣ್ಣನವರ ಅವರು, ತಾಲೂಕಿನ ಹಿರೇಹಳ್ಳಿ ಮಲ್ಲೂರ ಸೂಡಂಬಿ ಮತ್ತೂರು ಹಾಗೂ ಹಿರೇಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಒದಗಿಸಿದ್ದೇನೆ. ಆದರೆ ಈವರೆಗೂ ಟೆಂಡರ್ ಕರೆಯದೇ ತಪ್ಪು ಮಾಡುತ್ತಿದ್ದಿರಿ. ಇಷ್ಟೊತ್ತಿಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಕಾಮಗಾರಿ ಆರಂಭವಾಗಬೇಕಿತ್ತು ಎಂದರು.

ಜಾನುವಾರು ಸಂತೆ ಅರಂಭಿಸಿ: ತಾಲೂಕಿನ ಚಿಕ್ಕಣಜಿ ಗ್ರಾಮದ ಎಪಿಎಂಸಿ ಉಪ ಪ್ರಾಂಗಣದಲ್ಲಿ ಪ್ರತಿ ಸೋಮವಾರ ಜಾನುವಾರು ಸಂತೆ ಆರಂಭಿಸಬೇಕು ಹಾಗೂ ಚಿಕ್ಕಬಾಸೂರ ಉಪಪ್ರಾಂಗಣದಲ್ಲಿನ ನಿವೇಶನ ಹಂಚಿಕೆ ಸೇರಿದಂತೆ ಗೋದಾಮುಗಳನ್ನು ಟೆಂಡರ್ ಕರೆದು ಸ್ಪರ್ಧಾತ್ಮಕ ದರದಲ್ಲಿ ಬಾಡಿಗೆ ರೂಪದಲ್ಲಿ ನೀಡಬೇಕು ಮತ್ತು ಇದರಲ್ಲಿ ಯಾವುದೇ ನಿಯಮ ಲೋಪವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ವೇದಿಕೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ತಾಪಂ ಟಿಇಒ ಕೆ.ಎಂ. ಮಲ್ಲಿಕಾರ್ಜುನ, ತಹಸೀಲ್ದಾರ್ ಸೋಮನಕಟ್ಟಿ, ಸದಸ್ಯರಾದ ಖಾದರಸಾಬ್ ದೊಡ್ಮನಿ, ನೀಲಗಿರಿಯಪ್ಪ ಕಾಕೋಳ, ಮಾಲತೇಶ ಶಿಡ್ಲಣ್ಣನವರ, ವೀರನಗೌಡ ಮಲ್ಲಾಡದ, ಪ್ರಮೀಳಾ ಜೂಗುಳ, ಗುಡ್ಡಪ್ಪ ಬನ್ನಿಹಳ್ಳಿ, ಪರಮೇಶಗೌಡ ತೆವರಿ ಹಾಗೂ ರಾಣಿಬೆನ್ನೂರು, ಹಾವೇರಿ ಬ್ಯಾಡಗಿ ತಾಲೂಕುಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕದರಮಂಡಲಗಿ ಪಿಡಿಒ ಉದ್ದಟತನ

ಬ್ಯಾಡಗಿ ಪಟ್ಟಣಕ್ಕೆ ಸರಬರಾಜಾಗುತ್ತಿರುವ ಕುಡಿಯುವ ನೀರಿನಲ್ಲಿಯೇ ಕದರಮಂಡಲಗಿ ಗ್ರಾಮಕ್ಕೆ ಸುಮಾರು 4ರಿಂದ 6 ಲಕ್ಷ ಲೀ. ನೀರು ಬಳಸುವಂತೆ ಸೂಚಿಸಲಾಗಿತ್ತು. ಆದರೆ ಉದ್ದಟತನ ತೋರುತ್ತಿರುವ ಪಿಡಿಒ ಮತ್ತೆ 12 ಲಕ್ಷ ಲೀ. ನೀರು ಬಳಸುತ್ತಿರುವುದಾಗಿ ತಿಳಿದುಬಂದಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಸಭೆಯಲ್ಲಿ ನಿರ್ಧರಿಸಲಾಯಿತು.