ಶಾಮನೂರು ಕುಟುಂಬ ಬಗ್ಗೆ ಹಗುರ ಮಾತು ಬೇಡ

| Published : Aug 14 2025, 01:00 AM IST

ಸಾರಾಂಶ

ದಾವಣಗೆರೆ ನಗರ, ಜಿಲ್ಲೆ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದ ಬಗ್ಗೆ ಬಿಜೆಪಿ ಮುಖಂಡ ಬಂಗಾರು ಹನುಮಂತು ಬಿಜೆಪಿ ಪ್ರತಿಭಟನೆ ವೇಳೆ ಹಗುರ ಮಾತನಾಡಿದ್ದಾರೆ. ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ತಾಕೀತು ಮಾಡಿದ್ದಾರೆ.

- ಬಿಜೆಪಿ ಬಂಗಾರು ಹನುಮಂತುಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್‌ ತಾಕೀತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ, ಜಿಲ್ಲೆ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದ ಬಗ್ಗೆ ಬಿಜೆಪಿ ಮುಖಂಡ ಬಂಗಾರು ಹನುಮಂತು ಬಿಜೆಪಿ ಪ್ರತಿಭಟನೆ ವೇಳೆ ಹಗುರ ಮಾತನಾಡಿದ್ದಾರೆ. ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ತಾಕೀತು ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರ ಬಗ್ಗೆ ಮಾತನಾಡುವ ಮುನ್ನ ನೀವು ಯಾವ ಜಿಲ್ಲೆಯಿಂದ ಬಂದಿದ್ದೀರಿ, ನಿಮ್ಮ ಜಿಲ್ಲೆಗೂ, ನಮ್ಮ ನಗರದಲ್ಲೂ ಆದ ಅಭಿವೃದ್ಧಿ ಗಮನಿಸಿ, ಮಾತನಾಡಿ ಎಂದರು.

ನಮ್ಮ ಊರಿನಲ್ಲಿ ಆಗಿರುವ ರಸ್ತೆ ಅಭಿವೃದ್ಧಿ, ಮೂಲ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ಗಾಡಿನ ಮನೆ, ಪ್ರವಾಸಿ ತಾಣಗಳು, ಪಾರ್ಕ್‌ಗಳು, ಕ್ರೀಡಾಂಗಣಗಳು ಹೀಗೆ ಸರ್ವಾಂಗೀಣ ಅಭಿವೃದ್ಧಿಪಡಿಸಿದ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಒಮ್ಮೆ ಗಮನಿಸಬೇಕು ಎಂದು ಹೇಳಿದರು.

ಸಾವಿರಾರು ಆಶ್ರಯ ಮನೆ ನಿಮ್ಮ ನಾಯಕರೂ ಕಟ್ಟಲಾಗಿಲ್ಲ. ಅಷ್ಟೊಂದು ದಾಖಲೆ ಮನೆ ಕಟ್ಟಿದ್ದು ನಮ್ಮ ನಾಯಕರು. ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ ಬಳಸಿಕೊಳ್ಳುತ್ತಿದ್ದೀರಿ. ನಮ್ಮ ನಾಯಕರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸ್ಥಳೀಯ ಬಿಜೆಪಿಯವರಿಗೂ ಅರಿವಿದೆ. ಹಾಗಾಗಿ ತಾವ್ಯಾರೂ ಮಾತನಾಡಲಾಗದೇ, ನಿಮ್ಮಂತಹ ಮುಗ್ದರಿಂದ ಶಾಮನೂರು ಕುಟುಂಬದ ಬಗ್ಗೆ ಮಾತನಾಡಿಸಿದ್ದಾರೆ ಎಂದು ಟೀಕಿಸಿದರು.

ಹಿಂದಿನ ನಿಮ್ಮ ಮಾಜಿ ಸಂಸದರ ತಂದೆ ಕಾಲಾವಧಿ ನಂತರ ಎಷ್ಟು ಸಲ ಅದೇ ಕುಟುಂಬದವರು ಟಿಕೆಟ್ ಪಡೆದು ಸ್ಪರ್ಧಿಸಿದ್ದರು? ಅಧಿಕಾರಾವಧಿ ಮುಗಿದ ನಂತರ ನಿಮ್ಮ ಪಕ್ಷದಲ್ಲಿ ಅನೇಕ ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ, ನಿಮ್ಮ ಪಕ್ಷದವರೇ ಎಲ್ಲ ಮುಖಂಡರು ಗುಂಪುಗಾರಿಕೆ ಮಾಡಿಕೊಂಡು, ಮಾಜಿ ಸಂಸದರು ಮತ್ತು ಕುಟುಂಬಕ್ಕೆ ಟಿಕೆಟ್ ನೀಡಲು ವಿರೋಧಿಸಿದರು. ಆದರೂ ಮಾಜಿ ಸಂಸದರು ತಮ್ಮ ಪತ್ನಿಗೆ ಟಿಕೆಟ್ ಪಡೆದು, ಸ್ಪರ್ಧಿಸಿದ್ದರು. ಇದು ಕುಟುಂಬ ರಾಜಕಾರಣ ಅಲ್ಲವೇ ಬಂಗಾರು ಹನುಮಂತುರವರೇ ಎಂದು ವರುಣ್ ಬೆಣ್ಣೆಹಳ್ಳಿ ವ್ಯಂಗ್ಯವಾಡಿದರು.

ಪಕ್ಷದ ಯುವ ಮುಖಂಡರಾದ ಅಲಿ ರೆಹಮತ್ ಪೈಲ್ವಾನ್, ಮಂಜುನಾಥ, ಪ್ರೇಮಕುಮಾರ, ಬರ್ಕತ್ ಅಲಿ, ಸಚಿನ್, ಶುಕೃಸಾಬ್‌, ಪ್ರವೀಣ ಯಾದವ್ ಇತರರು ಇದ್ದರು.

- - -

(ಕೋಟ್‌)

ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಹಳೆಯ ಮುಖಂಡರು, ಕಾರ್ಯಕರ್ತರು ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ಯಾರೂ ಇರಲಿಲ್ಲ. ನಮ್ಮ ಪಕ್ಷದ ಹಾಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನಗರದ ಜನತೆ, ಮುಖಂಡರು, ಕಾರ್ಯಕರ್ತರು, ನಮ್ಮ ಹೈಕಮಾಂಡ್ ಎಲ್ಲರೂ ಸೇರಿ, ಒತ್ತಾಯ ಪೂರ್ವಕವಾಗಿ ಟಿಕೆಟ್ ನೀಡಿ, ನಿಲ್ಲಿಸುವ ಮೂಲಕ ಜಯಶೀಲರನ್ನಾಗಿ ಮಾಡಿರುವುದು. ಇದು ನಿಮಗೆ ಅರಿವಿದೆಯಾ?

- ವರುಣ್ ಬೆಣ್ಣೆಹಳ್ಳಿ, ಜಿಲ್ಲಾಧ್ಯಕ್ಷ, ಯುವ ಕಾಂಗ್ರೆಸ್.

- - - -13ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.