ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಡೋಣಗಾಂವ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಅವ್ಯವಹಾರದ ತನಿಖೆ ಮಾಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಗ್ರಾಪಂ ಸದಸ್ಯೆ ನಾಗರತ್ನ ಮಲ್ಲಿಕಾರ್ಜುನ ತಳವಾರ ಆಗ್ರಹಿಸಿದ್ದಾರೆ.ಕೋಡ್ಲಾದಿಂದ ಡೋಣಗಾಂವ ಗ್ರಾಮಕ್ಕೆ ಕೂಡುವ ಡಾಂಬರೀಕರಣ ರಸ್ತೆ ಕಾಮಗಾರಿ ಅರ್ಧ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ಸದರಿ ಕಾಮಗಾರಿ ಡೋಣಗಾಂವ ಸೀಮೆವರೆಗೆ ಪೂರ್ಣಗೊಳಿಸಿ ಮತ್ತು ಮೂಲತ ಡಾಂಬರೀಕರಣ ರಸ್ತೆಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ೨೯ ಜುಲೈ ೨೦೧೯ರಂದು ಕಲಬುರಗಿಯ ಪಂಚಾಯತ್ ರಾಜ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರು ನೀಡಿಲಾಗಿತ್ತು. ಆದರೆ ಪಿಡಿಓ ಮಾತ್ರ ಕಂಪನಿಯವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನಿಯಮಗಳ ಉಲ್ಲಂಘಸಿ ಪರವಾನಗಿ ನೀಡಿ ಸಾಕಷ್ಟು ಭ್ರಷ್ಟಾಚಾರವೆಸಗಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಡೋಣಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶ್ರೀ ಸಿಮೆಂಟ್ ಕಂಪನಿ ಪಡೆದಿರುವ ಪರವಾನಿಗೆ ಗ್ರಾಪಂ ಅಭಿವೃದ್ಧಿಗೆ ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಗಣಿಗಾರಿಕೆ ಗಡಿಭಾಗದ ಗ್ರಾಮವಾದ ನಮ್ಮ ಗ್ರಾಮ ಪಂಚಾಯ್ತಿಯು ಶ್ರೀ ಸಿಮೆಂಟ್ ಕಂಪನಿ ನಡೆಸುವ ಗಣಿಗಾರಿಕೆ ಮದ್ಯಭಾಗದಲ್ಲಿ ಹಾದು ಹೋಗುತ್ತದೆ. ಆದ್ದರಿಂದ ರಸ್ತೆ ಬದಲಾವಣೆ ಕಂಪನಿಯಿವರಿಗೆ ಅನಿವಾರ್ಯವಾಗಿದ್ದು, ಈ ರಸ್ತೆ ಕಾಮಗಾರಿಯನ್ನು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಸಭೆ ಕರೆಯದೆ ತಮ್ಮ ಮನ ಬಂದಂತೆ ನಡೆದುಕೊಂಡು ಕಂಪನಿಯವರಿಗೆ ಸಹಕರಿಸಿ, ಗ್ರಾಮದ ಜನರ ಅಭಿಪ್ರಾಯ ಕಡೆಗಣಿಸಿದ್ದಾರೆ ಎಂದು ದೂರಿ, ಈ ಕಡೆ ಕ್ಷೇತ್ರದ ಶಾಸಕರು, ಸಚಿವ ಪ್ರಿಯಾಂಕ್ ಖರ್ಗೆ ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.---ಕೋಡ್ಲಾದ ಶ್ರೀ ಸಿಮೆಂಟ್ ಕಂಪನಿಯಿಂದ ಡೋಣಗಾಂವ ಗ್ರಾಮಕ್ಕೆ ಸಂಪರ್ಕ ಇರುವ ಸಾರ್ವಜನಿಕ ರಸ್ತೆಯನ್ನು ಕಲ್ಲುಗಳಿಂದ ಕಂಪನಿಯವರು ಮುಚ್ಚಿರುವುದರಿಂದ ಗ್ರಾಮಸ್ಥರು ಸಂಚಾರಕ್ಕೆ ಪರದಾಡುವಂತಾಗಿದೆ. ಸಾರ್ವಜನಿಕರ ಹಿತವನ್ನು ನಿರ್ಲಕ್ಷ್ಯಿಸಿ ತಮ್ಮ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಿಕೊಂಡಿರುವ ಕಂಪನಿಯವರ ನಡೆ ಖಂಡನೀಯ - ನಾಗರತ್ನ ತಳವಾರ, ಗ್ರಾಪಂ ಸದಸ್ಯೆ ಚಿತ್ತಾಪುರ