ಸಾರಾಂಶ
ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆ ನೀಗಿಸುವಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ.ಕೆ. ಹೇಳಿದರು.
ಕನ್ನಡಪ್ರಭ ವಾರ್ತೆ ಗದಗ
ರಕ್ತದಾನ ಶ್ರೇಷ್ಠದಾನ, ರಕ್ತ ಜೀವದಾನ ಎನ್ನುವಂತೆ ಎಲ್ಲರೂ ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡಬಹುದು. ಇದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹದಲ್ಲಿ ಚೈತನ್ಯ ಬರುತ್ತದೆ. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆ ನೀಗಿಸುವಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ.ಕೆ. ಹೇಳಿದರು.ನಗರದ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಮ್ಸ್ ರಕ್ತನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಕ್ತದಾನದಂತೆ ಅಂಗಾಂಗ ದಾನ ಮಹತ್ವದಾಗಿದ್ದು, ದಾನಿಗಳ ಸ್ಮರಣೆ ಮಾಡುವುದು ಸ್ತುತ್ಯಾರ್ಹವಾಗಿದೆ. ರಕ್ತದಾನ ಮಾಡುವವರು 18 ರಿಂದ 65 ವಯೋಮಾನದವರು ಇರಬೇಕು. ಅವರ ತೂಕ 45 ಕೆಜಿಗಿಂತ ಹೆಚ್ಚಿರಬೇಕು. ಹಿಮೋಗ್ಲೋಬಿನ್ ಪ್ರಮಾಣ 12.5ಕ್ಕಿಂತ ಹೆಚ್ಚಿಗೆ ಇರವವರು ಮಹಿಳೆ ಮತ್ತು ಪುರುಷ ಎಂಬ ಭೇದ-ಭಾವವಿಲ್ಲದೆ ರಕ್ತದಾನ ಮಾಡಬಹುದು ಎಂದರು.
ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಾಜು ಮಾತನಾಡಿ, ರಕ್ತದಾನಕ್ಕೆ ಸಾಟಿ ಯಾವುದೂ ಇಲ್ಲ. ರಕ್ತಕ್ಕೆ ಸಾಟಿ ರಕ್ತವೇ ಆಗಿದೆ. ಎಲ್ಲ ಆರೋಗ್ಯವಂತರು ಹಾಗೂ ಯುವಕರು ರಕ್ತದಾನ ಮಾಡಿ ಜೀವದಾನ ಮಾಡಿ ಎಂದರು.ಈ ವೇಳೆ ಹೆಚ್ಚು ಬಾರಿ ರಕ್ತದಾನ ಮಾಡಿದ ಮಾಲತೇಶ, ಮಂಜುನಾಥ, ಲಕ್ಕಪ್ಪ, ಮಲ್ಲೇಶ ಹಾಗೂ ಪವನ್ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ರಕ್ತದ ಯುನಿಟ್ಗಳನ್ನು ಸಂಗ್ರಹಿಸಲಾಯಿತು. ಜಿಮ್ಸ್ ರಕ್ತನಿಧಿ ಕೇಂದ್ರದ ಡಾ. ಮೋನಿಕಾ, ಡಾ. ಮಹೇಶ ಪಾಟೀಲ ಮಾತನಾಡಿದರು.
ಡಾ. ಈಶ್ವರ ಸಿಂಗ್, ಡಾ. ಶಕುಂತಲಾ ಅರಮನಿ, ಡಾ. ಮಲ್ಲಿಕಾರ್ಜುನ, ಎಸ್.ಬಿ. ಪಾಟೀಲ, ವೆಂಕಟೇಶ, ಫಿರೋಜ, ಕೃಷ್ಣಾ, ವಿರೂಪಾಕ್ಷಿ, ಅನ್ನಪೂರ್ಣಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಮೋದಿನ ಸ್ವಾಗತಿಸಿದರು. ಬಸವರಾಜ ಲಾಲಗಟ್ಟಿ ನಿರೂಪಿಸಿದರು.