ಇಂದಿನ ಸುಖಕ್ಕಾಗಿ ನಾಳೆಗಳ ಕೊಲ್ಲಬಾರದು: ಜಗದೀಶ ಮಹರಾಜಪೇಟ

| Published : Jun 10 2025, 09:45 AM IST / Updated: Jun 10 2025, 09:46 AM IST

ಸಾರಾಂಶ

ಸತತ ಮೂರು ದಶಕಕ್ಕೂ ಹೆಚ್ಚು ಕಾಲ ಅರಣ್ಯ ಪರಿಚಾರಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜುಬೇದಾ ನಾಯಕ ಅವರ ಜನ್ಮದಿನವೂ ಇದೇ ದಿನವಾಗಿದ್ದರಿಂದ, ವಿಭಿನ್ನ ರೀತಿಯ ಪರಿಸರ ದಿನಾಚರಣೆ ನಡೆಸಲಾಯಿತು.

ಹಾವೇರಿ: ಪರಿಸರವೆಂದರೆ ಜೀವವೈವಿಧ್ಯ, ಪಶ್ಚಿಮಘಟ್ಟ ಹಾಗೂ ಅರಣ್ಯ ರಕ್ಷಣೆಯ ಜತೆಗೆ ಪ್ರಾಣಿ ಸಂಕುಲದ ರಕ್ಷಣೆಯೂ ಆಗಿದೆ. ನಮ್ಮ ಇಂದಿನ ಸುಖಕ್ಕಾಗಿ ನಾಳೆಗಳನ್ನು ಕೊಲ್ಲಬಾರದು ಎಂದು ಹಾವೇರಿ ವಲಯ ಅರಣ್ಯಾಧಿಕಾರಿ ಜಗದೀಶ ಮಹರಾಜಪೇಟ ಹೇಳಿದರು.

ನಗರದ ಹೊರವಲಯದಲ್ಲಿರುವ ಸಾಹಿತ್ಯ ಭವನದ ಆವರಣದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಸತತ ಮೂರು ದಶಕಕ್ಕೂ ಹೆಚ್ಚು ಕಾಲ ಅರಣ್ಯ ಪರಿಚಾರಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜುಬೇದಾ ನಾಯಕ ಅವರ ಜನ್ಮದಿನವೂ ಇದೇ ದಿನವಾಗಿದ್ದರಿಂದ, ವಿಭಿನ್ನ ರೀತಿಯ ಪರಿಸರ ದಿನಾಚರಣೆ ನಡೆಸಲಾಯಿತು.

ಜುಬೇದಾ ನಾಯಕ ಮಾತನಾಡಿ, ಪರಿಸರ ಪ್ರೀತಿ ನನ್ನನ್ನು ಬಾಲ್ಯದಿಂದಲೂ ಆವರಿಸಿದೆ. ಪುಣ್ಯವಶಾತ್‌ ನನಗೆ ಅರಣ್ಯ ಪ್ರೇರಕಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ನನ್ನ ಪ್ರತಿ ಹುಟ್ಟುಹಬ್ಬವನ್ನು ಸಸಿಗಳನ್ನು ಹಂಚುವ ಮೂಲಕ ಆಚರಿಸುತ್ತ ಬಂದಿದ್ದೇನೆ ಎಂದರು.

ಇತ್ತೀಚೆಗೆ ಸಾರಿಗೆ ಇಲಾಖೆಯಿಂದ ನಿವೃತ್ತರಾದ ಶಂಕರ ಮಡಿವಾಳರ ಮತ್ತು ಮಲ್ಲಿಕಾರ್ಜುನ ಹಿಂಚಿಗೇರಿ ದಂಪತಿಯನ್ನು ಸನ್ಮಾನಿಸಲಾಯಿತು. ಬಿ. ಬಸವರಾಜ, ಹನುಮಂತಗೌಡ ಗೊಲ್ಲರ, ರೇಣುಕಾ ಗುಡಿಮನಿ ಮುಂತಾದವರು ಮಾತನಾಡಿದರು.

ಕೊನೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಸಿ.ಎಸ್. ಮರಳಿಹಳ್ಳಿ, ಕಮಲಾ ಬುಕ್ಕಶೆಟ್ಟಿ, ವಿನಾಯಕ ಪೂಜಾರ, ರಾಜೇಂದ್ರ ಹೆಗಡೆ, ಜ್ಯೋತಿ ಬಸೆಟ್ಟಿಯವರ, ಶೈಲಜಾ ಕೋರಿಶೆಟ್ಟರ, ಲತಾ ಹಳಕೊಪ್ಪ, ಜಿ.ಎಸ್. ಹೊಸಳ್ಳಿ, ರವಿಕುಮಾರಸ್ವಾಮಿ, ಅಕ್ಕಮಹಾದೇವಿ ಹಾನಗಲ್ಲ, ಜುಬೇದಾ ನಾಯಕ, ರೇಣುಕಾ ಗುಡಿಮನಿ, ಮಾಲತೇಶ ಕರ್ಜಗಿ, ಚಂಪಾ ಹುಣಸಿಕಟ್ಟಿ, ಸಿದ್ದುಮತಿ ನೆಲುವಗಿ ಕಾವ್ಯ ವಾಚನ ಮಾಡಿದರು.

ಲತಾ ಹಳಕೊಪ್ಪ ಪ್ರಾರ್ಥಿಸಿದರು. ಮಾಲತೇಶ ಕರ್ಜಗಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಮದಲಿ ಸಂಕ್ಲಿಪುರ ವಂದಿಸಿದರು.ಪರಿಸರ ವಿನಾಶದಿಂದ ಪ್ರಕೃತಿ ವಿಕೋಪ

ಹಿರೇಕೆರೂರು: ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಜತೆಗೆ ಅವುಗಳನ್ನು ಜೋಪಾನ ಮಾಡುವ ಮೂಲಕ ಪರಿಸರ ಉಳಿಸಲು ಶ್ರಮಿಸಬೇಕು ಎಂದು ಮುಖ್ಯ ಶಿಕ್ಷಕ ಎನ್. ಸುರೇಶಕುಮಾರ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರಿಸರ ವಿನಾಶದಿಂದ ಭೂಮಿಯ ಮೇಲೆ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಅರಣ್ಯ ನಾಶ ಮಾಡುತ್ತಿರುವುದರಿಂದ ಭೂಮಿಗೆ ಗಂಡಾಂತರ ಎದುರಾಗಿದೆ. ಗಿಡ- ಮರ ಬೆಳೆಸುವುದರೊಂದಿಗೆ ಕಾಡುಗಳನ್ನು ಉಳಿಸಬೇಕು ಎಂದರು.ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.