ಭಟ್ಕಳದಲ್ಲಿ ರಾಬಿತಾ ಸೊಸೈಟಿಯಿಂದ 2026ನೇ ಸಾಲಿನ ರಾಬಿತಾ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ರಾಬಿತಾ ಸೊಸೈಟಿಯಿಂದ 2026ನೇ ಸಾಲಿನ ರಾಬಿತಾ ಪ್ರಶಸ್ತಿ ಪ್ರದಾನ ಸಮಾರಂಭವು ಪಟ್ಟಣದ ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್ನ ಅಂಜುಮನ್ ಮೈದಾನದಲ್ಲಿ ನಡೆಯಿತು.ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಸೇರಿ ವಿವಿಧ ವಿಭಾಗಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಸ್ಮಾನ್ ಹಸನ್ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ನವಯತ್ ಕಾಲನಿಯ ಅಂಜುಮನ್ ಗರ್ಲ್ಸ್ ಹೈಸ್ಕೂಲ್ ಪಡೆದುಕೊಂಡರೆ, ಎಸ್.ಎಂ. ಸೈಯದ್ ಖಲೀಲುರ್ರಹ್ಮಾನ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಅಂಜುಮನ್ನಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಆಯಿಷಾ ಮರ್ಫುವಾ ಸಿದ್ದಿಬಾಪಾ ಅವರಿಗೆ ನೀಡಲಾಯಿತು. ಮುಖ್ಯ ಅತಿಥಿ ಹಾಗೂ ಶಿಕ್ಷಣ ತಜ್ಞ, ನಾಗರಿಕ ಸೇವಾ ಪರೀಕ್ಷಾ ಅಭ್ಯರ್ಥಿಗಳ ಮಾರ್ಗದರ್ಶಕ ಸಮೀರ್ ಅಹ್ಮದ್ ಸಿದ್ದೀಕಿ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಇಂದಿನ ವಿದ್ಯಾರ್ಥಿಗಳು ಉದ್ಯೋಗ ಹುಡುಕುವುದಕ್ಕಿಂತ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸೃಜನಶೀಲತೆ, ಸಂಶೋಧನಾ ಮನೋಭಾವ, ಪ್ರಾಯೋಗಿಕ ಜ್ಞಾನ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಎಐ ಮೇಲೆ ಅತಿಯಾದ ಅವಲಂಬನೆ ಬೆಳೆಸಿಕೊಳ್ಳದೆ, ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತಿಸುವುದು, ಪ್ರಶ್ನಿಸುವುದು ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಭಟ್ಕಳದಲ್ಲಿ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣದ ಅಭಿವೃದ್ಧಿಗೆ ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಇಂತಹ ಚಟುವಟಿಕೆಗಳು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕು ಎಂದರು.ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅತೀಕುರ್ರಹ್ಮಾನ್ ಮುನೀರಿ, ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಕಾಜಿ ಮೌಲಾನಾ ಅಬ್ದುಲ್ ರಬ್ ನದ್ವಿ, ಶ ಖಲೀಫಾ ಜಮಾಅತ್ ಕಾಜಿ ಮೌಲಾನಾ ಖ್ವಾಜಾ ಮೊಯಿನುದ್ದೀನ್ ಮದನಿ ಮಾತನಾಡಿದರು. ರಾಬಿತಾ ಸೊಸೈಟಿ ಅಧ್ಯಕ್ಷ ಮುಹಮ್ಮದ್ ಫಾರೂಕ್ ಮುಸ್ಬ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ ಅಬ್ದುಲ್ ಸಲಾಂ ದಾಮ್ದಾ ಅಬು, ಅತ್ಯುತ್ತಮ ಶಾಲೆ ಹಾಗೂ ಶಿಕ್ಷಕ ಪ್ರಶಸ್ತಿ ಘೋಷಿಸಿದರು.
ಅಂಜುಮನ್ ಹಾಮಿಯೆ ಮುಸ್ಲಿಮೀನ್ ಅಧ್ಯಕ್ಷ ಯೂನಸ್ ಕಾಜಿಯಾ, ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ರಾಬಿತಾ ಸೊಸೈಟಿ ಖಜಾಂಚಿ ಮೌಲಾನಾ ಸಾಬಿರ್ ಅಲಿ ಅಕ್ಬರಾ ನದ್ವಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.