ವೇಣೂರಿನ ಭರತೇಶ ಸಮುದಾಯ ಭವನದಲ್ಲಿ‌ ಬುಧವಾರ ಸಂಜೆ ನಡೆದ ಪವಿತ್ರ ಮಂತ್ರಾಕ್ಷತೆಯ ಅಭಿಯಾನದ ಅಂಗವಾಗಿ ವಿವಿಧ ವೇಣೂರು ತಾಲೂಕಿನ ವಿವಿಧ ಉಪವಸತಿಗಳಿಗೆ ಮಂತ್ರಾಕ್ಷತೆಯ ಕಲಶಗಳನ್ನು ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಲಕ್ಷಾಂತರ ರಾಮಭಕ್ತರ ಬಲಿದಾನ, ತ್ಯಾಗದ ಫಲವಾಗಿ ಜ.22 ರಂದು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾಗಲಿದೆ. ಆ ಪ್ರಯಕ್ತ ರಾಮಮಂತ್ರಾಕ್ಷತೆಯನ್ನು‌ ಮನೆಮನೆಗೆ ತಲುಪಿಸುವ ಕಾರ್ಯವನ್ನು ಶ್ರದ್ಧೆ, ಭಕ್ತಿ, ಪೂಜ್ಯತೆಯಿಂದ ಮಾಡೋಣ ಎಂದು ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.ವೇಣೂರಿನ ಭರತೇಶ ಸಮುದಾಯ ಭವನದಲ್ಲಿ‌ ಬುಧವಾರ ಸಂಜೆ ನಡೆದ ಪವಿತ್ರ ಮಂತ್ರಾಕ್ಷತೆಯ ಅಭಿಯಾನದ ಅಂಗವಾಗಿ ವಿವಿಧ ವೇಣೂರು ತಾಲೂಕಿನ ವಿವಿಧ ಉಪವಸತಿಗಳಿಗೆ ಮಂತ್ರಾಕ್ಷತೆಯ ಕಲಶಗಳನ್ನು ಹಸ್ತಾಂತರಿಸಿ ಅ‍ವರು ಆಶೀರ್ವದಿಸಿದರು.

ರಾ.ಸ್ವ‌.ಸಂಘದ ವಿಭಾಗ ಸಾಮರಸ್ಯ ಸಂಯೋಜಕ ರವೀಂದ್ರ ಅವರು, ಕಳೆದ 495 ವರ್ಷಗಳ ಸಂಘರ್ಷ ಅಂತಿಮ‌ ಹಂತಕ್ಕೆ ಬಂದಿದೆ. ರಾಮಜನ್ಮಭೂಮಿಗಾಗಿ 72 ಬಾರಿ ಯುದ್ಧ ನಡೆದಿದೆ, ಸುಮಾರು ಮೂರುಕಾಲು ಲಕ್ಷ ಮಂದಿ ಪ್ರಾಣ ತೆತ್ತಿದ್ದಾರೆ. ರಾಮನನ್ನು ಬಿಟ್ಟು ಭಾರತೀಯರು ಬದುಕಲು ಸಾಧ್ಯವಿಲ್ಲ. ರಾಮಮಂತ್ರಾಕ್ಷತೆಯನ್ನು‌ ಪ್ರತಿಯೊಂದು ಹಿಂದು‌ ಮನೆಗಳಿಗೆ ತಲುಪಿಸುವ ಗುರುತರ ಕಾರ್ಯ ನಮ್ಮ ಮೇಲಿದೆ ಎಂದರು.ರಾ.ಸ್ವ.ಸಂಘದ ಪುತ್ತೂರು ಜಿಲ್ಲಾ ಸಹಕಾರ್ಯವಾಹ ಸಂತೋಷ್ ಕಾಪಿನಡ್ಕ, ವೇಣೂರು ತಾಲೂಕು ಸಂಘಚಾಲಕ್ ರಘುನಂದನ್ ಇದ್ದರು. ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಪುರೋಹಿತ್ ಸ್ವಾಗತಿಸಿದರು. ವಿಜಯಗೌಡ ವಂದಿಸಿದರು.