ಮನೆ ಮನೆ ಭೇಟಿ: ಹಿರಿಯ ನಾಗರಿಕರು, ದಿವ್ಯಾಂಗ ಮತದಾರರಿಗೆ ಮತದಾನ ಸೌಲಭ್ಯ

| Published : Apr 16 2024, 01:03 AM IST

ಮನೆ ಮನೆ ಭೇಟಿ: ಹಿರಿಯ ನಾಗರಿಕರು, ದಿವ್ಯಾಂಗ ಮತದಾರರಿಗೆ ಮತದಾನ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6,053 ಹಿರಿಯ ನಾಗರಿಕರು ಹಾಗೂ 1,957 ವಿಶೇಷ ಚೇತನರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಚೆ ಮತಪತ್ರಗಳ ವಿತರಣೆಗಾಗಿ ಈಗಾಗಲೇ ಪೋಲಿಂಗ್ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಈ ತಂಡಗಳು ಕಾರ್ಯ ನಿವಹಿಸುವ ಬಗ್ಗೆ ನಿಗದಿಪಡಿಸಲಾದ ದಿನಾಂಕ, ಸಮಯದ ಬಗ್ಗೆ ವಿವರಿಸಿದರು.

ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲತೆ ಇರುವ ದಿವ್ಯಾಂಗ ಮತದಾರರು ಸೇರಿ ಒಟ್ಟು 8,010 ಜನ ಅಂಚೆ ಮತಪತ್ರದ ಮೂಲಕ ಮತದಾನದ ಸೌಲಭ್ಯ ಪಡೆಯಲಿದ್ದಾರೆ.

ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಅಂಚೆ ಮತಪತ್ರ ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜ ಮತ್ತಿತರರು ಇದ್ದರು...............

ಎಲ್ಲೆಲ್ಲಿ ಯಾವಾಗ?ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಏ.15ರಿಂದ 17ರವರೆಗೆ ಒಟ್ಟು 975 ಮತದಾರರಿಗೆ ಮತದಾನದ ಸೌಲಭ್ಯ ನೀಡಲು 25 ತಂಡಗಳನ್ನು ರಚಿಸಲಾಗಿದೆ. ಬೆಳ್ತಂಗಡಿ ಕ್ಷೇತದಲ್ಲಿ ಏ.15, 16ರಂದು 812 ಮತದಾರರಿಗೆ ಮತದಾನ ಸೌಲಭ್ಯ ನೀಡಲು 26 ತಂಡಗಳನ್ನು ರಚಿಸಲಾಗಿದೆ.ಮಂಗಳೂರು (ಉಳ್ಳಾಲ) ಕ್ಷೇತದಲ್ಲಿ ಏ.15ರಿಂದ 16ರವರೆಗೆ 515 ಮತದಾರರಿಗೆ ಮತದಾನ ಸೌಲಭ್ಯ ಒದಗಿಸಲಾಗುವುದು. ಮಂಗಳೂರು ದಕ್ಷಿಣದಲ್ಲಿ ಏ.15ರಿಂದ 17ರವರೆಗೆ 1401 ಮಂದಿಗೆ 28 ತಂಡ, ಮಂಗಳೂರು ಉತ್ತರದಲ್ಲಿ ಏ.15,16ರಂದು 976 ಮತದಾರರಿಗೆ 26 ತಂಡ, ಪುತ್ತೂರು ಕ್ಷೇತ್ರದಲ್ಲಿ ಏ.15ರಿಂದ 17ರವರೆಗೆ ಒಟ್ಟು 1127 ಮತದಾರರಿಗೆ 20 ತಂಡ, ಸುಳ್ಯದಲ್ಲಿ ಏ.15,16ರಂದು 1038 ಮತದಾರರಿಗೆ 23 ತಂಡ, ಮೂಡುಬಿದಿರೆಯಲ್ಲಿ ಏ.15ರಿಂದ 17ರವರೆಗೆ 1166 ಮತದಾರರಿಗೆ 22 ತಂಡಗಳನ್ನು ರಚಿಸಲಾಗಿದೆ.