ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಅವಿಸ್ಮರಣೀಯವಾಗಿದ್ದು, ಅವರು ಕೇವಲ ಮಿಸಲಾತಿ ಹರಿಕಾರನಲ್ಲ, ಮಹಿಳೆಯರಿಗೆ ಸಮಾನ ಹಕ್ಕು, ಕಾಯ್ದೆ, ಪ್ರತಿಯೊಬ್ಬರಿಗೂ ಶಿಕ್ಷಣ, ಸಮಾನತೆ, ನೀರಾವರಿ ಕೊಡುಗೆ, ರೀಜರ್ವ್ ಬ್ಯಾಂಕ್ ಸ್ಥಾಪನೆಗೆ ಸಲಹೆ ಸೇರಿದಂತೆ ಹಲವು ಕೊಡುಗೆ ನೀಡಿದ್ದು, ಸಮಾಜದಲ್ಲಿ ಪ್ರತಿಯೊಬ್ಬರೂ ಪೂಜಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸಮೀಪದ ಮಳಗಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆ ಆಶ್ರಯದಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಕೇವಲ ದಲಿತರಿಗಷ್ಟೆ ಸಿಮೀತಗೊಳಿಸಲಾಗುತ್ತಿದ್ದು, ಈ ವ್ಯವಸ್ಥೆ ಸರಿಯಲ್ಲ, ಸಂವಿಧಾನ ಪರಿಕಲ್ಪನೆಯಲ್ಲಿ ಎಲ್ಲರೂ ಸರಿಸಮಾನರು. ಹೀಗಾಗಿ ಇಡೀ ಮಾನವ ಜನಾಂಗವೇ ಉದ್ಧಾರವಾಗುವಂತಹ ಸಾಧನೆ ಮಾಡಿದ್ದಾರೆ. ಯುವಕರು ಇಂತಹ ಶ್ರಮಿಕರ ಜೀವನ ಚರಿತ್ರೆ ಅಧ್ಯಯನ ಮಾಡಿ ಬದುಕು ಸಾರ್ಥಕ ಮಾಡಿಕೊಳ್ಳಬೇಕು. ಅವರ ಆದರ್ಶ, ಆಶಯಗಳನ್ನು ಪಾಲಿಸಬೇಕು ಎಂದರು.ಹಂಪಿಯ ಮಾತಂಗ ಪರ್ವತದ ಪೂರ್ಣಾನಂದ ಸ್ವಾಮೀಜಿ, ಗ್ರಾಮದ ಸಿದ್ಧಾರೂಢ ಮಠದ ಕಲ್ಮೇಶ್ವರ ಅವಧೂತ ಮಹಾರಾಜ, ಯಲ್ಲಮ್ಮನ ಗುಡ್ಡದ ಲಗ್ಗೇಶ್ವರ ಸ್ವಾಮೀಜಿ, ರಾಜ್ಯ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ, ಚನ್ನಮಲ್ಲಯ್ಯ ಹಿರೇಮಠ, ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಬೈಲಹೊಂಗಲ ತಾಲೂಕಾಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಬೈಲಹೊಂಗಲ ಎಸ್ಬಿಡಿಐ ಪಿಯು ಕಾಲೇಜಿನ ಉಪನ್ಯಾಸಕ ಜಿ.ಎ.ತಮ್ಮಣ್ಣವರ, ಯುವ ಮುಖಂಡ ಕಾರ್ತಿಕ ಪಾಟೀಲ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸಣ್ಣವರ, ಸಂಪಾದಕ ಡಾ.ಪ್ರಶಾಂತರಾವ್ ಐಹೊಳೆ, ಹಿರೇಬೂದನೂರ ಗ್ರಾಪಂ ಅಧ್ಯಕ್ಷ್ಯೆ ಮಂಜುಳಾ ನಾಯ್ಕರ, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆ ರಾಜ್ಯಾಧ್ಯಕ್ಷ, ಸಂಸ್ಥಾಪಕ ರಮೇಶ ಹರಿಜನ, ರಾಜ್ಯ ಉಪಾಧ್ಯಕ್ಷ ಮಲ್ಲಪ್ಪ ಹರಿಜನ, ಕಾರ್ಯದರ್ಶಿ ಪ್ರಕಾಶ ಹಂಚಿನಮನಿ, ಡಿಎಸ್ಎಸ್ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ, ಅಹಿಂದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ತಮ್ಮಣ್ಣವರ, ಶಿಕ್ಷಕ ಚಂದ್ರಶೇಖರ ಭಜಂತ್ರಿ ಇತರರು ಇದ್ದರು. ವಿವಿಧ ಸಂಘಟನೆಗಳ ಸದಸ್ಯರು, ಗಣ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನಿವೃತ್ತ ಮುಖ್ಯಶಿಕ್ಷಕ ಶಂಕರ ಸಾಗರ ಸ್ವಾಗತಿಸಿದರು. ಶಿಕ್ಷಕ ಚನ್ನಗೌಡ ಪಾಟೀಲ ನಿರೂಪಿಸಿದರು. ಖಜಾಂಚಿ ಬಸಪ್ಪ ಹರಿಜನ ವಂದಿಸಿದರು.
ಇದಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯನ್ನು ಗಣ್ಯರು ಅನಾವರಣಗೊಳಿಸಿದರು.ಇಡೀ ವಿಶ್ವವೇ ಅನುಸರಿಸುವಂತಹ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದು, ಪ್ರತಿಯೊಬ್ಬರೂ ಎತ್ತರಕ್ಕೆ ಬೆಳೆಯಲು ಇದು ಸಹಕಾರಿಯಾಗಿದೆ. ಡಾ.ಅಂಬೇಡ್ಕರ್ ಜೀವನ ಕ್ರಮ ಅವಲೋಕಿಸಿ ಸಾಗುತ್ತೇನೆಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಿದಾಗ ಮಾತ್ರ ನೆಮ್ಮದಿಯ ಜೀವನ ಸಾಧ್ಯವಾಗಲಿದೆ.-ಮಹಾಂತೇಶ ಕೌಜಲಗಿ,
ಶಾಸಕ ಬೈಲಹೊಂಗಲ.