ಡಾ.ಅನಿಲ್‌ ಆನಂದ್‌ ಡ್ರೀಮ್‌ವರ್ಕ್ಸ್‌ ತಂಡದಿಂದ ಶ್ರಮಿಕರ ತಾಂಡಾದಲ್ಲಿ ಆರೋಗ್ಯ ಸೇವೆ

| Published : Aug 03 2025, 11:45 PM IST

ಡಾ.ಅನಿಲ್‌ ಆನಂದ್‌ ಡ್ರೀಮ್‌ವರ್ಕ್ಸ್‌ ತಂಡದಿಂದ ಶ್ರಮಿಕರ ತಾಂಡಾದಲ್ಲಿ ಆರೋಗ್ಯ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಕಟಾವಿಗಾಗಿ ದೂರದ ಬಳ್ಳಾರಿ, ಮಹಾರಾಷ್ಟ್ರ, ವಿಜಯಪುರ ಸೇರಿದಂತೆ ವಿವಿಧೆಡೆಯಿಂದ ಬಂದು ಪ್ಲಾಸ್ಟಿಕ್‌ ತಾಟುಗಳ ಕೆಳಗೆ ಆಶ್ರಯ ಪಡೆದಿರುವ ಶ್ರಮಿಕರ ಆರೋಗ್ಯ ತಪಾಸಣೆ ನಡೆಸುವುದರ ಮೂಲಕ ಡಾ.ಅನಿಲ್‌ ಆನಂದ್‌ ಡ್ರೀಮ್‌ ವರ್ಕ್ಸ್‌ ತಂಡ ಮಾನವೀಯತೆ ಮೆರೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬು ಕಟಾವಿಗಾಗಿ ದೂರದ ಬಳ್ಳಾರಿ, ಮಹಾರಾಷ್ಟ್ರ, ವಿಜಯಪುರ ಸೇರಿದಂತೆ ವಿವಿಧೆಡೆಯಿಂದ ಬಂದು ಪ್ಲಾಸ್ಟಿಕ್‌ ತಾಟುಗಳ ಕೆಳಗೆ ಆಶ್ರಯ ಪಡೆದಿರುವ ಶ್ರಮಿಕರ ಆರೋಗ್ಯ ತಪಾಸಣೆ ನಡೆಸುವುದರ ಮೂಲಕ ಡಾ.ಅನಿಲ್‌ ಆನಂದ್‌ ಡ್ರೀಮ್‌ ವರ್ಕ್ಸ್‌ ತಂಡ ಮಾನವೀಯತೆ ಮೆರೆದಿದೆ.

ಕಬ್ಬು ಕಟಾವಿಗೆ ಬಂದಿರುವ ನೂರಾರು ಶ್ರಮಿಕರು ತಾಲೂಕಿನ ಹನಿಯಂಬಾಡಿ ಸುತ್ತಮುತ್ತ ತಾಂಡಾಗಳಲ್ಲಿ ನೆಲೆಯೂರಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಕಬ್ಬು ಕಟಾವಿನಲ್ಲಿ ತೊಡಗಿ ರಾತ್ರಿ ಗೂಡು ಸೇರಿಕೊಳ್ಳುವ ಈ ಜನರು ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದೇ ಇಲ್ಲ. ಅಂತಹ ಜನರ ಆರೋಗ್ಯವನ್ನು ಉತ್ತಮವಾಗಿರುವ ದೃಷ್ಟಿಯಿಂದ ನ್ಯೂರೋ ಸೈಕಿಯಾಟ್ರಿಸ್ಟ್‌ ಡಾ.ಅನಿಲ್‌ ಆನಂದ್‌ ಅವರು ತಾಂಡಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಶ್ರಮಿಕರಿಗೆ ಔಷಧ ಕಿಟ್‌ಗಳನ್ನು ವಿತರಿಸಿದರು.

ಶಿಬಿರದಲ್ಲಿ ಮಾತನಾಡಿದ ಡಾ.ಅನಿಲ್‌ ಆನಂದ್‌, ಶ್ರಮ ಜೀವಿಗಳಲ್ಲಿರುವ ನಿಸ್ವಾರ್ಥ ಭಾವ, ಪ್ರಾಮಾಣಿಕತೆ, ತೃಪ್ತಿ ಮತ್ತು ಸಂತಸದ ಮನಸ್ಥಿತಿಯೇ ಅವರ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಶ್ರಮ ಜೀವನದ ನಡುವೆ ಉತ್ತಮ ಆರೋಗ್ಯದ ಕಡೆಗೂ ಗಮನಹರಿಸುವಂತೆ ಮನವಿ ಮಾಡಿದರು.

ಶ್ರಮದ ದುಡಿಮೆ ಹಲವು ರೋಗಗಳನ್ನು ದೂರ ಮಾಡುತ್ತದೆ. ಆದರೂ ಆರೋಗ್ಯವನ್ನು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಪುಟ್ಟ ಮಕ್ಕಳೂ ತಾಂಡಾದಲ್ಲಿದ್ದು ಅವರೂ ಆರೋಗ್ಯವಂತರಾಗಿರುವಂತೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.

ತುರ್ತು ಸಂದರ್ಭದಲ್ಲಿ ಕೂಲಿಕಾರರಿಗೆ ನೆರವಿಗೆ ಬರಬೇಕೆಂಬ ಉದ್ದೇಶದಿಂದ ನೂರಾರು ಕುಟುಂಬಗಳಿಗೆ ಔಷಧ ಕಿಟ್‌ಗಳನ್ನು ವಿತರಿಸಲಾಯಿತು. ಈ ಔಷಧ ಕಿಟ್‌ ನೋವು ನಿವಾರಕಗಳು, ಆ್ಯಂಟಿಸೆಪ್ಟಿಕ್‌ ಕ್ರೀಮ್‌, ಅಲರ್ಜಿ ಮಾತ್ರೆಗಳನ್ನು ಒಳಗೊಂಡಿದೆ.

ಮಳೆಯ ನಡುವೆಯೇ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ವಾಹನದಲ್ಲೇ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್‌ ಅವರು ಹಲವು ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿದರು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಿದರು.

ಆರೋಗ್ಯ ಶಿಬಿರದಲ್ಲಿ ದರ್ಶನ್‌, ನವೀನ್‌, ಮಂಜು, ರಕ್ಷಿತ್‌, ಅನುಷಾ, ಧನುಷ್‌, ಸಂದೀಪ್‌, ಚೇತನ್‌, ವಿನಯ್‌ ಪಾಲ್ಗೊಂಡಿದ್ದರು. ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿದ್ದಕ್ಕೆ ತಾಂಡಾದ ಜನರು ಖುಷಿಪಟ್ಟರು. ರಾತ್ರಿ ಅವರೊಂದಿಗೆ ಕುಳಿತು ಭೋಜನ ಸವಿಯಲಾಯಿತು. ತಾಂಡಾ ಜನರಿಗೂ ಊಟ ಏರ್ಪಡಿಸಲಾಗಿತ್ತು.