ಸಾರಾಂಶ
ಖಾಜಿ ಬೀದಿಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ತರೀಕೆರೆಬಡವರು ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ.ಅಂಶುಮಂತ್ ಹೇಳಿದ್ದಾರೆ.
ಸೂಫಿ ಸಂತ ಹಜ್ರತ್ ಖ್ವಾಜಾ ಮೊಹಿನುದ್ದೀನ್ ಹಸನ್ ಚಿಸ್ತಿ ( ಗರೀಬ್ ನವಾಜ್) ರ ಅಜ್ಮೀರ್ ರವರ 813 ನೇ ಉರುಸ್ ಅಂಗವಾಗಿ ಪಟ್ಟಣದ ವಾರ್ಡ್ ಸಂಖ್ಯೆ 17 ರ ಖಾಜಿ ಬೀದಿಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘಟನೆಗಳಿಂದ ನಡೆದ ನಾರಾಯಣ ಹೃದಯಾಲಯದ ಪ್ರಖ್ಯಾತ ವೈದ್ಯರಿಂದ ಹೃದಯರೋಗ, ನರ ರೋಗ ಕೀಲು ಹಾಗೂ ಮೂಳೆ ರೋಗಗಳ ಉಚಿತ ತಪಾಸಣೆ, ಆರೋಗ್ಯ ಶಿಬಿರ ಮತ್ತು 14 ನೇ ಬಾರಿಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಂದು ಎಲ್ಲರಿಗೂ ಅವಶ್ಯಕ. ಬಡವರ ಕಲ್ಯಾಣಕ್ಕಾಗಿ ಖ್ವಾಜಾ ಗರೀಬ್ ನವಾಜ್ ಶ್ರಮಿಸಿದ್ದರು. ಸೂಫಿಗಳ ಜನಸೇವೆ ಭಾರತವನ್ನು ಪ್ರಭಾವಿಸಿದೆ ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಎಚ್.ಉಮ್ಮರ್ ಫಾರೂಕ್ ಮಾತನಾಡಿ ಅಜ್ಮೇರ್ ಸೂಫಿ ಸಂತರ ಹೆಸರಲ್ಲಿ ನಡೆಯುತ್ತಿರುವ ಜನೋಪಯೋಗಿ ಕಾರ್ಯಕ್ರಮಗಳು ಉತ್ತಮ ಬೆಳವಣಿಗೆ. ಕೇಂದ್ರ ಸರ್ಕಾರದ ಈವರೆಗಿನ ಎಲ್ಲಾ ಪ್ರಧಾನಿಗಳು ದರ್ಗಾಕ್ಕೆ ಚಾದರ ಅರ್ಪಿಸಿ ಭಕ್ತಿ ಮೆರೆದಿದ್ದಾರೆ ಎಂದು ಹೇಳಿದರು.ಶಿಬಿರದ ಆಯೋಜಕ ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಭಾರತದಲ್ಲಿ ಸಮಾಜಸೇವೆ ಮತ್ತು ಬಡವರ ಕಲ್ಯಾಣಕ್ಕಾಗಿ ಸಂತರಾದ ಖ್ವಾಜಾ ಗರೀಬ್ ನವಾಜ್ ಸೇರಿದಂತೆ ಅನೇಕರು ದುಡಿಯುವ ಮೂಲಕ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲ ನಡೆಯುವ ಮೂಲಕ ಸೌಹಾರ್ದತೆಗೆ ಕಾರಣವಾಗಬೇಕಿದೆ ಎಂದು ಹೇಳಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಿಎಸ್ಆರ್ ಅನುದಾನದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಉಪಕರಣಗಳ ಬಳಕೆಗೆ ಕ್ರಮವಹಿಸಲಾಗಿದೆ. 100 ಬೆಡ್ ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಕ್ಕೆ ಕ್ರಮವಹಿಸಲಾಗಿದೆ. ಶಿಬಿರದಲ್ಲಿ ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದದರು .ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಶ್ರೀಕಾಂತ್,ಪುರಸಭೆ ಸದಸ್ಯ ಆದಿಲ್ ಪಾಷ, ಮಾಜಿ ಸದಸ್ಯ ಸಮೀವುಲ್ಲಾ, ಬಜಾರ್ ಮಸೀದಿ ಅಧ್ಯಕ್ಷ ಮೊಹಮ್ಮದ್ ಫಾರೂಕ್, ಮಾಜಿ ಅಧ್ಯಕ್ಷ ಶಬ್ಬೀರ್ ಅಹ್ಮದ್, ಕಾರ್ಯದರ್ಶಿ ಅಮೀರ್ ಜಾನ್ , ಶಫೀಉಲ್ಲಾ ಸೇರಿದಂತೆ ಮಸೀದಿಯ ಧರ್ಮಗುರುಗಳು ಹಾಗೂ ಮುಖಂಡರು ಭಾಗವಹಿಸಿದ್ದರು
4ಕೆಟಿಆರ್.ಕೆ.4ಃತರೀಕೆರೆಯಲ್ಲಿ ನಡೆದ ಉಚಿತ ತಪಾಸಣಾ ಆರೋಗ್ಯ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ.ಆಂಶುಮಂತ್ ಉದ್ಘಾಟಿಸಿದರು. ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಸದಸ್ಯ ಟಿ.ದಾದಾಪೀರ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಯು.ಫಾರೂಕ್,ಮತ್ತಿತರರು ಇದ್ದರು.