ಮೂಕನಹಳ್ಳಿ ಗೇಟ್ ನಿಂದ ನಾಲ್ಕು ಪಥಗಳ ರಸ್ತೆ ಆರಂಭ

| Published : Aug 06 2025, 01:15 AM IST

ಮೂಕನಹಳ್ಳಿ ಗೇಟ್ ನಿಂದ ನಾಲ್ಕು ಪಥಗಳ ರಸ್ತೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಕೆಎಸ್ಆರ್ ಟಿಸಿ ಬಸ್ ಡಿಪೋದಿಂದ ಆರಂಭಗೊಂಡು ಹಾಲಗೆರೆ ವೃತ್ತದವರೆಗೆ 5.1 ಕಿ.ಮೀ. ಉದ್ದದ ನಾಲ್ಕು ಪಥದ ರಸ್ತೆ ನಿರ್ಮಾಣನ್ನು 56 ಕೋಟಿ ರು. ಗಳ ವೆಚ್ಚದಡಿ ನಿರ್ಮಿಸಲು ಮುಂದಾಗಿದೆ. ಆದರೆ ಕಾಮಗಾರಿಯನ್ನು ಮೂಕನಹಳ್ಳಿ ಗೇಟ್ ನಿಂದಲೇ ಆರಂಭಗೊಳಿಸಲು (ಹೆಚ್ಚುವರಿಯಾಗಿ ಒಂದು ಕಿ.ಮೀ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದು,

ಕನ್ನಡಪ್ರಭ ವಾರ್ತೆ ಹುಣಸೂರು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣಗೊಳ್ಳಲಿರುವ ನಾಲ್ಕು ಪಥಗಳ ರಸ್ತೆಯನ್ನು ಮೂಕನಹಳ್ಳಿ ಗೇಟ್ ನಿಂದ ಆರಂಭಗೊಳಿಸುವಂತೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.

ಪಟ್ಟಣದ ನಗರಸಭೆಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಕೆಎಸ್ಆರ್ ಟಿಸಿ ಬಸ್ ಡಿಪೋದಿಂದ ಆರಂಭಗೊಂಡು ಹಾಲಗೆರೆ ವೃತ್ತದವರೆಗೆ 5.1 ಕಿ.ಮೀ. ಉದ್ದದ ನಾಲ್ಕು ಪಥದ ರಸ್ತೆ ನಿರ್ಮಾಣನ್ನು 56 ಕೋಟಿ ರು. ಗಳ ವೆಚ್ಚದಡಿ ನಿರ್ಮಿಸಲು ಮುಂದಾಗಿದೆ. ಆದರೆ ಕಾಮಗಾರಿಯನ್ನು ಮೂಕನಹಳ್ಳಿ ಗೇಟ್ ನಿಂದಲೇ ಆರಂಭಗೊಳಿಸಲು (ಹೆಚ್ಚುವರಿಯಾಗಿ ಒಂದು ಕಿ.ಮೀ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದು, ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಮನವೊಲಿಸಿ ಕ್ರಮ ವಹಿಸಲು ಕೋರಿದ್ದೇನೆ ಎಂದರು.

22.5 ಮೀಟರ್ ಅಗಲವುಳ್ಳ ನಾಲ್ಕು ಪಥಗಳು ಮತ್ತು ಸರ್ವೀಸ್ ರಸ್ತೆಯನ್ನು ಈ ಹೆದ್ದಾರಿ ಹೊಂದಲಿದೆ. 5 ಜಂಕ್ಷನ್ ಗಳು, ಬೈಪಾಸ್ ರಸ್ತೆಯಲ್ಲಿ ಹಾಲಿ ಇರುವ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣವಾಗಲಿದೆ. ಹೊಸ ಸೇತುವೆ ನಿರ್ಮಾಣದ ನಂತರ ಹಳೆ ಸೇತುವೆಯನ್ನು ಕೆಡವಿ ನೂತನ ರಸ್ತೆ ನಿರ್ಮಾಣ ಮಾಡಲು ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಶರವಣ, ಕೃಷ್ಣರಾಜ ಗುಪ್ತ, ದೇವರಾಜ್, ಮಾಲಿಕ್ ಪಾಷಾ ಮುಂತಾದವರು ಪ್ರಾಧಿಕಾರವು ರಸ್ತೆಯ ಮೇಲೆ ಬೀಳುವ ಮಳೆ ನೀರಿನ ಹರಿವಿಗೆ ಮಾತ್ರ ಚರಂಡಿಗಳನ್ನು ನಿರ್ಮಿಸುತ್ತಿದೆ. ಆದರೆ, ಜಂಕ್ಷನ್ ಗಳಲ್ಲಿ ಬಂದು ಸೇರುವ ನೀರಿನ ನಿರ್ವಹಣೆಗೆ ಯಾವುದೇ ಯೋಜನೆ ರೂಪಿಸಿಲ್ಲವೆಂದು ಆಕ್ಷೇಪಿಸಿದರು. ಅಲ್ಲದೇ ಕೆಲ ಪ್ರಮುಖ ಜಂಕ್ಷನ್ ಗಳಲ್ಲಿ ಸಂಚಾರ ಸುಗಮ ನಿರ್ವಹಣೆಗೆ ಸ್ಕೈ ವಾಕ್ ವ್ಯವಸ್ಥೆ ಅಥವಾ ಅಂಡರ್ ಬ್ರಿಡ್ಜ್ ವ್ಯವಸ್ಥೆ ಕಲ್ಪಿಸಿಕೊಂಡಿಲ್ಲವೆಂದು ಆರೋಪಿಸಿದರು.

ಶಾಸಕ ಹರೀಶ್ ಗೌಡ ಮಾತನಾಡಿ, ಹೆದ್ದಾರಿ ರಸ್ತೆ ವ್ಯಾಪ್ತಿಯ ರಾಘವೇಂದ್ರಸ್ವಾಮಿ ಮಠ, ಕಲ್ಕುಣಿಕೆ ವೃತ್ತ, ಗೋಕುಲ ರಸ್ತೆ ಜಂಕ್ಷನ್, ಕೋರ್ಟ್ ವೃತ್ತ ಮುಂತಾದ ಕಡೆಗಳಲ್ಲಿ ಮಳೆ ಮತ್ತು ಚರಂಡಿ ನೀರಿನ ಸರಾಗ ಹರಿವು ಆಗುವಂತೆ ಕ್ರಮವಹಿಸಬೇಕು. ಈಗಾಗಲೇ ಹಾಲಿ ವಿದ್ಯುತ್ ಕೇಬಲ್ ಗಳು ಇದ್ದಲ್ಲಿ ಅವುಗಳಿಗೆ ಪರ್ಯಾಯವಾಗಿ ಪೈಪ್ ಗಳನ್ನು ಅಳವಡಿಸಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ನಡೆಸಿದ್ದರೆ ನೀವು ಕಾಮಗಾರಿಯನ್ನು ಮಾಡುವಂತೆಯೇ ಇಲ್ಲ ಎಂದು ಖಡಕ್ಕಾಗಿ ಸೂಚಿಸಿದಾಗ, ಎಇಇ ಎಚ್.ಆರ್. ರೂಪ ಎಲ್ಲವನ್ನು ತಯಾರಿಸಿಕೊಂಡು ನಿಮ್ಮಲ್ಲಿ ಚರ್ಚಿಸಿ ಮುಂದುವರೆಯುವುದಾಗಿ ತಿಳಿಸಿದರು.

ನಗರ ವ್ಯಾಪ್ತಿಯಲಿರುವ ಎಲ್ಲ ಪ್ರಮುಖ ರಸ್ತೆಗಳೂ ಸಂಚಾರಕ್ಕೆ ಯೋಗ್ಯವಿಲ್ಲದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಗಳು ಲೋಕೋಪಯೋಗಿ ಇಲಾಖೆಯ ಸುಪರ್ದಿಯೋ ಅಥವಾ ನಗರಸಭೆಯ ಆಸ್ತಿಯೋ ಎಂಬ ಗೊಂದಲವನ್ನು ಮೊದಲು ಪರಿಹರಿಸಿ ನಂತರ ರಸ್ತೆ ದುರಸ್ತಿ ಕಾಮಗಾರಿ ಬಗ್ಗೆ ಕ್ರಮವಹಿಸಿರೆಂದು ಸದಸ್ಯರಾದ ದೊಡ್ಡಹಜ್ಜೂರು ರಮೇಶ್, ವಿವೇಕ್, ಮಂಜು, ಸ್ವಾಮಿಗೌಡ ಮುಂತಾದವರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಎಇಇ ಯತೀಶ್, ನಗರವ್ಯಾಪ್ತಿಯಲ್ಲಿ ಬರುವ ಎಲ್ಲ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯರಸ್ತೆಗಳನ್ನು ಸುಗಮ ನಿರ್ವಹಣೆಗಾಗಿ 2014ರಲ್ಲಿ ಸ್ಥಳೀಯ ಪ್ರಾಧಿಕಾರಗಳಿಗೆ ಹಸ್ತಾಂತರಿಸಲಾಗಿದೆ. ಹುಣಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 8.70 ಕಿ.ಮೀ.ರಸ್ತೆಗಳಿದ್ದು, ಈ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ನಗರಸಭೆಯೇ ಮಾಡಬೇಕಾಗುತ್ತದೆ ಎಂದು ತಿಳಿಸಿದಾಗ, ಮಧ್ಯೆ ಪ್ರವೇಸಿಸಿದ ಶಾಸಕ ಹರೀಶ್ಗೌಡ, ಈ ರಸ್ತೆಗಳ ಮರುಡಾಂಬರೀಕರಣಕ್ಕೆ ನಿಮ್ಮ ಇಲಾಖೆಗೆ ಅವಕಾಶವಿದ್ದು, ಒಟ್ಟು ಎಷ್ಟು ಅನುದಾನದ ಅಗತ್ಯವಿದೆ ಎನ್ನುವ ಕುರಿತು ನನಗೆ ಪ್ರಸ್ತಾವನೆ ಸಲ್ಲಿಸಿರಿ. ನಾನು ಅದನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವರ ಗಮನಕ್ಕೆ ತಂದು ಸರ್ಕಾರ ನೀಡಿದ ಅನುದಾನದಲ್ಲಿ ಕೊರತೆಯಾದಲ್ಲಿ ನಗರಸಭೆ ನಿಧಿಯಿಂದ ಪಡೆದು ಕಾಮಗಾರಿ ಪೂರ್ಣಗೊಳಿಸೋಣ. ತಾತ್ಕಾಲಿಕವಾಗಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸಂಚಾರ ಸುಗಮಗೊಳಿಸಲು ನಗರಸಭೆಯೇ ಕ್ರಮವಹಿಸಲಿ ಎಂದು ಸೂಚಿಸಿದರು.

ಸಭೆಯಲ್ಲಿ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಪೌರಾಯುಕ್ತೆ ಕೆ. ಮಾನಸ, ಎಇಇ ಶರ್ಮಿಳಾ, ಹೆದ್ದಾರಿ ಪ್ರಾಧಿಕಾರದ ಎಇ ತಬಸುಮ್, ಲೋಕೋಪಯೋಗಿ ಇಲಾಖೆ ಜೆಇ ಪ್ರಭಾಕರ್ ಮತ್ತು ಸದಸ್ಯರು ಇದ್ದರು.

---------------