ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ದೇಶ ಮತ್ತು ವಿಶ್ವಕ್ಕೆ ಅನನ್ಯ ಕೊಡುಗೆ ನೀಡಿರುವ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ಪ್ರತಿದಿನ ನೆನೆಯಬೇಕು ಎಂದು ಜಿಪಂ ಮಾಜಿ ಸದಸ್ಯ ಬೋರಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಾಲೂಕು ವತಿಯಿಂದ ಗುರುವಾರ ವಿಶ್ವಜ್ಞಾನಿ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವರ ಜನ್ಮ ದಿನದಂದು ಮಾತ್ರ ನೆನೆಯದೆ ಅವರ ವಿಚಾರ ಧಾರೆಗಳನ್ನು ಪ್ರತಿನಿತ್ಯ ಮೆಲಕು ಹಾಕುವ ಮೂಲಕ ಅವರನ್ನು ಪ್ರತಿಕ್ಷಣ ನೆನೆಯುವ ಕೆಲಸವಾಗಬೇಕಿದೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಾಲು ಸಾಲು ಸಮಸ್ಯೆ ಎದುರಿಸಿ ದಮನಿತರ ಪರವಾಗಿ ಹೋರಾಡಿ ಪ್ರತಿಯೊಬ್ಬರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿಯಲ್ಲಿ ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸಿರುವುದು ಮೆಚ್ಚುಗೆಯ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ ಮಾತನಾಡಿ, ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ತಮ್ಮ ಅಪಾರ ಜ್ಞಾನದ ಮೂಲಕ ಹೋರಾಟ ಮಾಡಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ಮೇರು ಶಿಖರ ಬಿ.ಆರ್.ಅಂಬೇಡ್ಕರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಗತಿಪರ ಚಿಂತಕ ಡಿ.ಹೊಸಹಳ್ಳಿ ಶಿವು ಮುಖ್ಯ ಭಾಷಣ ಮಾಡಿದರು. ಇದೇ ವೇಳೆ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್ ಗೌಡ, ಹಲಗೂರು ವೃತ್ತ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ರೈತ ಹೋರಾಟಗಾರ ಕೀಳಘಟ್ಟ ನಂಜುಂಡಯ್ಯ, ನಿವೃತ್ತ ತಹಸೀಲ್ದಾರ್ ಜಿ.ಕಾಳಯ್ಯ, ಜನಪದ ಕಲಾವಿದ ರಾಮಯ್ಯ, ಎಚ್.ಆರ್.ಸುಶೀಲ್ ಕುಮಾರ್ ಹಾಗೂ ಮುತ್ತಯ್ಯ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಿತಿ ಪ್ರಧಾನ ಕಾರ್ಯದರ್ಶಿ ತಗ್ಗಹಳ್ಳಿ ಸುಂದರೇಶ್, ದಸಂಸ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ತಾಲೂಕು ಗೌರವ ಅಧ್ಯಕ್ಷ ಕಬ್ಬಾಳಯ್ಯ, ಹಿರಿಯ ಉಪಾಧ್ಯಕ್ಷರಾದ ಬಿ.ಎಂ.ಸತ್ಯ, ಚಿಕ್ಕರಸಿನಕರೆ ಮೂರ್ತಿ, ದೊರೆಸ್ವಾಮಿ, ಡಿ.ಕೆ.ಕೃಷ್ಣ, ವಕೀಲ ಬೋರಯ್ಯ, ಮುಖಂಡರಾದ ಪುಟ್ಟಣ್ಣ, ನಾಗಭೂಷಣ್, ಅಣ್ಣೂರು ರಾಜಣ್ಣ, ಎಂ.ಶಿವು, ಅಂಬರೀಷ್, ಕರಡಕೆರೆ ಯೋಗೇಶ್ ಇದ್ದರು.