ಕಾರಟಗಿ: ಆಧುನಿಕ ಭಾರತ ನಿರ್ಮಾಣವಾಗಲು ಡಾ. ಬಾಬು ಜೀವನ ರಾಮ್ ದೂರದೃಷ್ಟಿಯೇ ಕಾರಣ, ಅವರ ಅಂದಿನ ಪ್ರಮುಖ ನಿರ್ಣಯ ಇಂದು ವಿಶ್ವದಲ್ಲಿ ಆಧುನಿಕ ಭಾರತವೆಂದು ಹೆಸರು ಮಾಡಲು ಹಾಗೂ ಸ್ವಾವಲಂಬನೆ ದೇಶ ಎಂದು ಹೆಮ್ಮೆಪಡಲು ಕಾರಣವಾಗಿದೆ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ನವಲಿ ರಸ್ತೆಯ ಡಾ. ಬಾಬು ಜಗಜೀವನರಾಮ್ ವೃತ್ತದಲ್ಲಿ ಭಾನುವಾರ ತಾಲೂಕಾಡಳಿತದಿಂದ ಹಮ್ಮಿಕೊಂಡ ಮಾಜಿ ಉಪಪ್ರಧಾನ ಮಂತ್ರಿ ಡಾ.ಬಾಬು ಜಗಜೀವನರಾಮ ಜಯಂತಿ ಕಾರ್ಯಕ್ರಮದಲ್ಲಿ ವೃತ್ತದ ನಾಮಫಲಕ್ಕೆ ಪೂಜೆ ಸಲ್ಲಿಸಿ ಪಷ್ಪಾರ್ಪಣೆ ಮಾಡಿ ಮಾತನಾಡಿದರು.

ದೇಶದಲ್ಲಿ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್‌ ಎರಡು ಕಣ್ಣುಗಳಿದ್ದಂತೆ ಈ ಮಹನೀಯರು ನೀತಿ ನಿರ್ಣಯಕ ಸ್ಥಾನ ಅಲಂಕರಿಸಿ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ೧೯೪೭ರಲ್ಲಿ ಜನರಿಗೆ ಆಹಾರ ಸಮಸ್ಯೆ ತೀವ್ರವಾಗಿತ್ತು. ಈಗ ೧೩೫ ಕೋಟಿ ಜನಸಂಖ್ಯೆಯಿದ್ದರೂ ಬಾಬು ಜನಜೀವನರಾಮ್‌ ಶ್ರಮದ ಫಲವಾಗಿ ಹಸಿವಿನ ಸಮಸ್ಯೆ ನೀಗಿದೆ. ಕೂಲಿ ಮಾಡಿ ಜೀವನ ಸಾಗಿಸಲು ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಬಾಬು ಜಗಜೀವನರಾಮ ಸೃಷ್ಠಿಸಿದ ಹಸಿರು ಕ್ರಾಂತಿಯಿಂದ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ ಎಂದರು.

ತಾಪಂ ಇಓ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟಿಕಾರ ಮಾತನಾಡಿ, ಜಗಜೀವನರಾಮ್‌ ದೇಶ ಕಂಡ ದಕ್ಷ ಆಡಳಿತಗಾರರಾಗಿದ್ದರು. ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದಿಗೂ ಮರೆಯದ ವ್ಯಕ್ತಿತ್ವ ಹೊಂದಿದ್ದರು. ಬಡವರು, ದೀನ ದಲಿತರ ಕಣ್ಣೀರು ಒರೆಸಿದ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು ಎಂದರು.

ನಂತರ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಯಲ್ಲಪ್ಪ ಕಟ್ಟೆಮನಿ, ಖಾಜಾಹುಸೇನ್ ಮುಲ್ಲಾ ಮಾತನಾಡಿ, ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಸಂಪನ್ನ ರಾಜಕಾರಣಿ ಜಗಜೀವನರಾಂ.ಅವರು ಕೈಗೊಂಡ ಕ್ರಮಗಳು ದೇಶದ ಆಹಾರ ಕೊರತೆ ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಯಿತು ಎಂದರು.


ಈ ಸಂದರ್ಭದಲ್ಲಿ ಗ್ರೇಡ್೨ ತಹಸೀಲ್ದಾರ ಷಣ್ಮುಖಪ್ಪ,ಎ.ಎಸ್‌ಐ.ಬಸವರಾಜ, ಶಿರಸ್ಥೆದಾರ ಜಗದೀಶ, ಶಿಕ್ಷಣ ಸಂಯೋಜಕ ಶಶಿಧರಸ್ವಾಮಿ, ಪುರಸಭೆ ಸದಸ್ಯ ಎಂ.ಆನಂದ ಸೇರಿದಂತೆ ಯಮನೂರಪ್ಪ ಗೋಮರ್ಸಿ, ಭುವನೇಶ ಭಜರಂಗಿ, ವಿರೇಶ ಬೇವಿನಹಳ್ಳಿ, ಜಡಿಯಪ್ಪ ಬೂದಗುಂಪ, ಕಂದಾಯ ಇಲಾಖೆ, ತಾಪಂ ಕಚೇರಿಯ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ತಹಸೀಲ್ದಾರ ಕಚೇರಿ: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್‌ ಅವರ ೧೧೯ನೇ ಜಯಂತಿ ಕಾರ್ಯಕ್ರಮದಲ್ಲಿ ಗ್ರೇಡ್ ೨ತಹಸೀಲ್ದಾರ ಷಣ್ಮುಖಪ್ಪ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿ ಸೇವೆ, ತ್ಯಾಗದಿಂದ ಸಂಪಾದಿಸಬಹುದು. ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನಮ್‌ ಅವರಿಗೆ ಸಲ್ಲುತ್ತದೆ ಎಂದರು.

ಇದಕ್ಕೂ ಮುಂಚೆ ಕಚೇರಿಯ ಸಿಬ್ಬಂದಿ ಬಾಬೂಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ವೇಳೆ ಗ್ರೇಡ್೨ ತಹಸೀಲ್ದಾರ್‌ ಷಣ್ಮುಖಪ್ಪ, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.

ಪುರಸಭೆ:ಇಲ್ಲಿನ ಪುರಸಭೆಯಲ್ಲಿ ಸಿಬ್ಬಂದಿ ಬಾಬು ಜಗಜೀವನರಾವ್‌ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಕಚೇರಿಯ ನೌಕರರು, ಸಿಬ್ಬಂದಿ ಬಾಬುಜೀ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.ನಂತರ ಪುರಸಭೆ ಮುಖ್ಯಾಧಿಕಾರಿ ಡಾ.ಸಾಬಣ್ಣ ಕಟ್ಟಿಕಾರ ಮಾತನಾಡಿ, ಬಾಬುಜಿ ಎಂದೇ ಹೆಸರಾಗಿದ್ದ ಬಾಬು ಜಗಜೀವನರಾಮ ನಿಸ್ವಾರ್ಥ ಸೇವೆ,ಸ್ವಾತಂತ್ರ್ಯಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ಸದಸ್ಯ ಎಂ.ಆನಂದ, ಮುಖಂಡ ಯಲ್ಲಪ್ಪ ಕಟ್ಟಿಮನಿ, ಚೆನ್ನಬಸವಸ್ವಾಮಿ, ಪವನಕುಮಾರ್ ಸೇರಿದಂತೆ ಇತರರು ಇದ್ದರು.

ತಾಪಂ ಕಾರ್ಯಾಲಯ:ಇಲ್ಲಿನ ತಾಪಂ ಕಾರ್ಯಾಲಯದಲ್ಲಿ ಭಾನುವಾರ ಮಾಜಿ ಉಪ ಪ್ರಧಾನಿ ಶ್ರೀ ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ತಾಪಂ ಇಓ ಲಕ್ಷ್ಮೀದೇವಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಇದಕ್ಕೂ ಮುಂಚೆ ಕಚೇರಿಯ ಯೋಜನಾಧಿಕಾರಿ ರಾಘವೇಂದ್ರ, ಸಹಾಯಕ ನಿರ್ದೇಶಕ ವೈ.ವನಜಾ, ಕಾರ್ಯದರ್ಶಿ ಸಂದೀಪ್, ಸಿಬ್ಬಂದಿ ಸೋಮನಾಥ, ಪಂಪಾಪತಿ, ದುರಗೇಶ್, ರಜಾಕ್ ಬಾಬೂಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬುಜೀ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಸುರೇಶ ದಢೇಸ್ಗೂರು, ಎಸ್‌ಟಿ ಮೋರ್ಚಾ ಅಧ್ಯಕ್ಷ ದೇವರಾಜ ನಾಯಕ, ತಿಪ್ಪಣ್ಣ ಜೋಗಳದಿನ್ನಿ, ಚನ್ನಪ್ಪ ಹಣವಾಳ, ವೆಂಕಟೇಶ್ ಬೂದಿ, ಪುರಸಭೆ ಸದಸ್ಯ ಎಂ.ಆನಂದ, ದೊಡ್ಡ ಯಮನೂರು, ರಮೇಶ್ ಸಾಲೋಣಿ, ಅಮರೇಶ್ ಚಳ್ಳೂರು ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.