ಸಾರಾಂಶ
ಮಂಡ್ಯ ನಗರದ ಗುರುದೇವ ಲಲಿತಕಲಾ ಅಕಾಡೆಮಿಯ ಕಲಾ ನಿರ್ದೇಶಕಿ, ವಿದುಷಿ ಡಾ.ಚೇತನಾ ರಾಧಕೃಷ್ಣ ಅವರು ಪಶ್ಚಿಮ ಬಂಗಾಳದಲ್ಲಿ ನಡೆದ ಉದ್ರೋ ಮಾಘೋದಿ ರಾಷ್ಟ್ರೀಯ ನೃತ್ಯ ಉತ್ಸವ-೨೦೨೪ರಲ್ಲಿ ಭಾಗವಹಿಸಿ ಭರತ ನಾಟ್ಯದ ಪ್ರಾಚೀನ ಪದ್ಧತಿಯನ್ನು ಸರಳ ಹಾಗೂ ಆಳವಾದ ಮನೋಭಾವದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುರುದೇವ ಲಲಿತಕಲಾ ಅಕಾಡೆಮಿಯ ಕಲಾ ನಿರ್ದೇಶಕಿ, ವಿದುಷಿ ಡಾ.ಚೇತನಾ ರಾಧಕೃಷ್ಣ ಅವರು ಪಶ್ಚಿಮ ಬಂಗಾಳದಲ್ಲಿ ನಡೆದ ಉದ್ರೋ ಮಾಘೋದಿ ರಾಷ್ಟ್ರೀಯ ನೃತ್ಯ ಉತ್ಸವ-೨೦೨೪ರಲ್ಲಿ ಭಾಗವಹಿಸಿ ಭರತ ನಾಟ್ಯದ ಪ್ರಾಚೀನ ಪದ್ಧತಿಯನ್ನು ಸರಳ ಹಾಗೂ ಆಳವಾದ ಮನೋಭಾವದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು.ಪಶ್ಚಿಮ ಬಂಗಾಳದ ಅಸನ್ಸೋಲ್ನ ಶ್ರೀಜಗನ್ನಾಥ ದೇವಸ್ಥಾನದ ಆವರಣದಲ್ಲಿ ನ.೨೩ ಮತ್ತು ೨೪ರಂದು ನಡೆದ ಉದ್ರೋ ಮಾಘೋದಿ ನೃತ್ಯ ಉತ್ಸವದಲ್ಲಿ ಡಾ.ಚೇತನಾ ರಾಧಾಕೃಷ್ಣ ಭಾಗವಹಿಸಿ ತಮ್ಮ ವಿಸ್ಮಯಕಾರಿ ನೃತ್ಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.
ನೃತ್ಯೋತ್ಸವದ ಮೊದಲನೇ ದಿನ ಡಾ.ಚೇತನಾ ಅವರು ತನ್ನ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ ಮಾಡಿದರು. ಆ ದಿನದ ಕಾರ್ಯಕ್ರಮವು ಸಾಂಸ್ಕೃತಿಕ ವೈಭವ ಹಾಗೂ ಧಾರ್ಮಿಕ ನೃತ್ಯಗಳ ಸೂಕ್ಷ್ಮತೆಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರೂಪಿಸಿದರು.ಹಬ್ಬದ ಎರಡನೇ ದಿನದಲ್ಲಿ, ಡಾ.ಚೇತನಾ ಅವರು ರವೀಂದ್ರನಾಥ ಟ್ಯಾಗೋರ್ ಅವರ ಕೃತಿ ‘ಭಾನು ಶಿಂಗರ ಪದಭೋಲಿ’ಯಲ್ಲಿ ರಾಧೆಯಾಗಿ ಅಭಿನಯಿಸಿ ನೃತ್ಯ ರೂಪಕದ ರಸ ನಿಷ್ಪತ್ತಿಗೆ ಕಾರಣರಾದರು. ಈ ಉತ್ಸವ ಹಿಂದೂ ಧಾರ್ಮಿಕ ಸಂಪ್ರದಾಯ, ಕಲೆಯ ವೈಶಿಷ್ಟ್ಯ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಂಕೇತಿಸಲು ಒಂದು ಉತ್ತಮ ವೇದಿಕೆಯಾಯಿತು.