ಕನ್ನಡಪ್ರಭ ವಾರ್ತೆ ಕಿಕ್ಕೇರಿ

ದುಬೈನಲ್ಲಿ ಜುಲೈ 26ರಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ತೆರಳುತ್ತಿರುವ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಗ್ರಾಮದೇವತೆ ಕಿಕ್ಕೇರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲದ ಅರ್ಚಕರು ವಿಶೇಷ ಅರ್ಚನೆ, ಪೂಜೆ ಸಲ್ಲಿಸಿ ಕನ್ನಡದ ಕಂಪು ಹೊರನಾಡಿನಲ್ಲಿ ಮತ್ತಷ್ಟು ಪಸರಿಸಲಿ. ತವರಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಹೆಸರು, ಗೀತೆಗಳು ವಿಶ್ವಮಾನ್ಯವಾಗಿ ಮೊಳಗಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ತನ್ನಗಾಯನ ಶಕ್ತಿಗೆ ದೇವರ, ಹಿರಿಯರ ಆಶೀರ್ವಾದ ರಕ್ಷೆಯಾಗಿದೆ. ತನ್ನ ಯಶಸ್ಸಿನ ಮುನ್ನುಡಿ ಗ್ರಾಮದೇವಿ. ಸರ್ಕಾರಿ ಸ್ವಾಮ್ಯದ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷನಾಗಿರುವುದು ದೇವರ, ಜನರ ಪ್ರೀತಿಯ ಕಾಣಿಕೆಯಾಗಿದೆ ಎಂದರು.

ಬಡತನದ ಅರ್ಚಕ ಕುಟುಂಬದಲ್ಲಿ ಜನಿಸಿರುವ ತನ್ನ ಗಾಯನ ಕ್ಷೇತ್ರದ ಕೀರ್ತಿಯ ಹಿಂದೆ ಸಾಕಷ್ಟು ಪರಿಶ್ರಮ, ಶ್ರದ್ಧೆ ಇದೆ. ಸುಮಾರು 53ಕ್ಕೂ ಹೆಚ್ಚು ವಿದೇಶಗಳಲ್ಲಿ ತಾನು ಕನ್ನಡದ ಕಂಪು ಗೀತ ಗಾಯನಗಳ ಮೂಲಕ ಮೂಡಿಸಿರುವೆ ಎಂದು ಹೇಳಿದರು.


ದುಬೈನಲ್ಲಿ ಜರುಗುತ್ತಿರುವ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಗಾಯಕನಾಗಿ ಪ್ರಯಾಣ ಬೆಳೆಸುತ್ತಿದ್ದೇನೆ. ಹುಟ್ಟೂರಿನ ಪ್ರೀತಿ, ಆಶೀರ್ವಾದ ಎಂದೂ ಮರೆಯಲಾರೆ. ಇಲ್ಲಿನ ಕೆ.ಎಸ್.ನ ಕಾವ್ಯ ಸ್ಫೂರ್ತಿಯ ತಾಣವಾದ ಕೆ.ಎಸ್.ನ. ಸರೋವರ, ಸ್ವಾಗತ ಕಮಾನು ಅತೀ ಶೀಘ್ರದಲ್ಲಿ ಲೋಕಾರ್ಪಣೆಯಾಗಲು ದೇವಿಯಲ್ಲಿ ಪ್ರಾರ್ಥಿಸಿರುವೆ ಎಂದು ನುಡಿದರು.

ಈ ವೇಳೆ ವೆಂಕಟೇಶ್, ಅಮೀಬಾ ಸುರೇಶ್, ಪ್ರಶಾಂತ್‌ ಮತ್ತಿತರರು ಇದ್ದರು.

ಇಂದು ಚಿಂಪಲ್ ಟಿವಿ - ಟ್ಯಾಬ್ ಹೈಬ್ರಿಡ್ ಕಲಿಕಾ ಕಾರ್ಯಕ್ರಮ ಸಮಾರಂಭ

ಪಾಂಡವಪುರ: ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ತಾಲೂಕಿನ ಸಣಬದಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ಚಿಂಪಲ್ ಟಿವಿ- ಟ್ಯಾಬ್ ಹೈಬ್ರಿಡ್ ಕಲಿಕಾ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಲಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಲ್ಲಿ ಡಿಜಿಟಲ್ ಕೌಶಲ್ಯ ಹಾಗೂ ಮೂಲ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು (FLN) ಉತ್ತಮ ಪಡಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ, ಸುತಾರ್‌ ಲರ್ನಿಂಗ್ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್ ಜಂಟಿ ಸಹಯೋಗದೊಂದಿಗೆ ತಾಲೂಕಿನ ಆಯ್ದ 10 ಸರ್ಕಾರಿ ಶಾಲೆಗಳಲ್ಲಿ ವಿನೂತನ ಟ್ಯಾಬ್ ಬೇಸ್ಡ್ ಲರ್ನಿಂಗ್ (Tab-based Learning) ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ತಾಲೂಕಿನ ಸಣಬದಕೊಪ್ಪಲು, ಚೆಲುವರಸನಕೊಪ್ಪಲು, ಶಂಭೂನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಚಗಶೆಟ್ಟಹಳ್ಳಿ, ಹರಳಹಳ್ಳಿ, ಕೆನ್ನಾಳು, ಎಲಕೆರೆ, ಟಿ.ಎಸ್.ಛತ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರೈಮರಿ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ ಈ ಕಾರ್ಯಕ್ರಮ, ಮುಂದಿನ ದಿನಗಳಲ್ಲಿ ಇಡೀ ಮೇಲುಕೋಟೆ ತಾಲೂಕು ಹಾಗೂ ಮಂಡ್ಯ ಜಿಲ್ಲೆಯಾದ್ಯಂತ ವಿಸ್ತರಣೆಯಾಗುವ ಗುರಿ ಹೊಂದಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.