ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಬಿಬಿ ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ದೇಶಕ್ಕೆ ಆರ್ಥಶಾಸ್ತ್ರ ಬರೆದ ಶ್ರೇಷ್ಠ ಆರ್ಥಿಕತಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಭಾರತಕ್ಕೆ ಮಾತ್ರವಲ್ಲ, ಜಗತ್ತಿನ ಆರ್ಥಿಕತೆಗೂ ತುಂಬಲಾರದ ನಷ್ಟವಾಗಿದೆ ಎಂದರು.
ದೇಶಕ್ಕೆ ಆರ್ಥಿಕ ಪುನಶ್ಚೇತನ1991ರ ಆರ್ಥಿಕ ಬಿಕ್ಕಟ್ಟಿನ ತೀವ್ರ ಸಂಕಷ್ಟದಲ್ಲಿ ಭಾರತ ಸ್ಥಗಿತಗೊಂಡಿದ್ದ ಸಮಯದಲ್ಲಿ, ಅಧಿಕಾರ ಚುಕ್ಕಾಣಿ ಹಿಡಿದ ಡಾ. ಮನಮೋಹನ್ ಸಿಂಗ್ ರ ದೂರದರ್ಶಿತ್ವ ದೇಶವನ್ನು ಆರ್ಥಿಕ ಪುನಶ್ಚೇತನದ ಮಾರ್ಗದಲ್ಲಿ ನಡೆಸಿತು. ಅವರು ವಿದೇಶದಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡುಗಡೆ ಮಾಡಿದ್ದು ಮಾತ್ರವಲ್ಲದೆ, ಅವರ ನೇತೃತ್ವದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದ ನೀತಿಗಳು, ಭಾರತದ ಪಾಲಿಗೆ ಆರ್ಥಿಕ ಸ್ವಾವಲಂಬನೆ, ಸಮೃದ್ಧಿಯ ಹೊಸ ಅಧ್ಯಾಯವನ್ನೇ ತೆರೆಯಿತು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಮ್ ಮಾತನಾಡಿ, ಇಡೀ ವಿಶ್ವ ಆರ್ಥಿಕತೆಯಿಂದ ಕಂಗಾಲಾದಾಗ ಭಾರತದ ಆರ್ಥಿಕತೆ ದೃಢವಾಗಿತ್ತು ಮತ್ತು ಭಾರತದ ಪ್ರತಿ ಮನೆ ಬಾಗಿಲಲ್ಲೂ ಇಂದು ಆರ್ಥಿಕ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಕಂಡುಬಂದಿದ್ದರೆ ಅದು ಮನಮೋಹನ್ ಸಿಂಗ್ ಕೊಡುಗೆ ಎಂಬುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರ ಪ್ರಗತಿಪರ ದೃಷ್ಠಿಕೋನ ಮತ್ತು ಅವಿಸ್ಮರಣೀಯ ಕೊಡುಗೆಗಳು ದೇಶದ ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗಲಿವೆ ಎಂದರು.
ಆರ್ಥಿಕ ಸುಧಾರಣೆಯ ಹರಿಕಾರದಲಿತ ನಾಯಕ ಸುಧಾ ವೆಂಕಟೇಶ್ ಮಾತನಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಆಗ ಕೈಗೊಂಡ ನಿರ್ಣಾಯಕ ಉದಾರೀಕರಣ ಕ್ರಮಗಳಿಂದ ದೇಶದ ಹಣಕಾಸು ಪರಿಸ್ಥಿತಿ ಸುಧಾರಣೆ ಕಂಡಿತು.ಈ ವೇಳೆ ಅವರು ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದರು. ದೇಶವನ್ನು ಸರಿಯಾದ ಹಳಿಗೆ ತರಲು, ವಿದೇಶಿ ಹೂಡಿಕೆಯನ್ನು ಆಕರ್ಷಿಸಿದರು. ಈ ಮೂಲಕ ಭಾರತದ ಆರ್ಥಿಕತೆಯನ್ನು ಸ್ಥಿರಗೊಳಿಸಿದರು ಎಂದು ತಿಳಿಸಿದರು.ಈ ವೇಳೆ ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ಮುನೇಗೌಡ, ಮುಖಂಡರಾದ ದಿಬ್ಬೂರು ಶ್ರೀನಿವಾಸ್, ಪೆದ್ದನ್ನ, ಬಾಬಾಜಾನ್, ಹಮೀಮ್, ಮಂಜುನಾಥ್, ಅಣ್ಣಮ್ಮ, ಚಂದ್ರಣ್ಣ, ನಾರಾಯಣ ಸ್ವಾಮಿ, ಮತ್ತಿತರರು ಇದ್ದರು.