ಉಡುಪಿ: ಕನ್ನಡದ ವರನಟ ಡಾ.ರಾಜ್‌ಕುಮಾರ್ ಜಯಂತಿ ಅಪರೂಪದ ಕಾರ್ಯಕ್ರಮ. ಒಬ್ಬ ಚಿತ್ರನಟನ ಜಯಂತಿ ಕಾರ್ಯಕ್ರಮವನ್ನು ಆಚರಿಸುವುದು ದೇಶದಲ್ಲೇ ಅತ್ಯಂತ ಅಪೂರ್ವ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಜಿಲ್ಲಾಡಳಿತ ಆಶ್ರಯದಲ್ಲಿ ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಸಭಾಂಗಣದಲ್ಲಿ ನಡೆದ ವರನಟ ಡಾ.ರಾಜ್‌ಕುಮಾರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾನವೀಯ ಮೌಲ್ಯಗಳ ಚಲನಚಿತ್ರಗಳ ಮೂಲಕ ಅವರು ನಿಜ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ. ಅದ್ಭತ ನಟ ಮತ್ತು ಗಾಯಕರಾಗಿದ್ದ ಡಾ. ರಾಜ್ ಉಡುಪಿಗೆ ಬಂದಾಗ ಸಾಗರೋಪಾದಿಯಲ್ಲಿ ಜನರ ಸೇರುತ್ತಿದ್ದುದನ್ನು ನೆನಪಿಸಿಕೊಂಡರು.

ಭಾರತೀಯ ರೆಡ್‌ಕ್ರಾಸ್ ರಾಜ್ಯ ಸಭಾಪತಿ ಬಸರೂರು ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ಕಲಾವಿದೆ ಪ್ರತಿಮಾ ನಾಯಕ್ ಅವರು ಡಾ.ರಾಜ್‌ಕುಮಾರ್ ಅವರ ಜೀವನ ಮತ್ತು ನಟನೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ದಿಶಾ ಮತ್ತು ದಿಯಾ ಡಾ. ರಾಜ್ ಕುಮಾರ್ ಅವರ ಚಿತ್ರಗೀತೆಗಳನ್ನು ಹಾಡಿದರು. ಲಯನ್ಸ್ ಮಿಡ್‌ಟೌನ್ ಅಧ್ಯಕ್ಷ ಪುರುಷೋತ್ತಮ್ ನಾಯಕ್, ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ವಾರ್ತಾ ಇಲಾಖೆಯ ಸಿಬ್ಬಂದಿ, ರೆಡ್‌ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಮತ್ತಿತರರಿದ್ದರು.ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಘಟಕದ ಕಾರ್ಯದರ್ಶಿ ಗಣನಾಥ್ ಶೆಟ್ಟಿ ಎಕ್ಕಾರ್ ನಿರೂಪಿಸಿ, ಖಜಾಂಚಿ ರಮಾದೇವಿ ವಂದಿಸಿದರು.