ಗದಗ:
ದೈಹಿಕ ನ್ಯೂನತೆಯನ್ನು ಮೀರಿ ವೈದ್ಯಕೀಯ ಸೇವೆಯಲ್ಲಿ ಕಾಯಕ ನಿಷ್ಠೆ ಮೆರೆದು, ಅನಾರೋಗ್ಯ ಪೀಡಿತರ ಆಶಾಕಿರಣವಾಗಿ ಕಾರ್ಯನಿರ್ವಹಿಸಿದ ಡಾ. ಶಾಂತಾಬಾಯಿ ಭೂಮರಡ್ಡಿ ಅವರು ವೈದ್ಯರಿಗೆ ಪ್ರೇರಣೆ ಮತ್ತು ಆದರ್ಶವಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ ಶೇಕುಬಾಯಿ ಎಲ್.ದೇಸಾಯಿ ದತ್ತಿ ಪ್ರಶಸ್ತಿಯನ್ನು ಡಾ. ಶಾಂತಾಬಾಯಿ ಭೂಮರಡ್ಡಿ ಅವರಿಗೆ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಾವಿರಾರು ಸಾಮಾನ್ಯ ಹೆರಿಗೆಯನ್ನು ಮಾಡಿಸುವದರ ಮೂಲಕ ಮಹಿಳೆಯರ ದೈಹಿಕ ಆರೋಗ್ಯವನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಿ ಮಾದರಿಯಾಗಿದ್ದಾರೆ. ಆರೋಗ್ಯ ಸಂವರ್ಧನೆಗಾಗಿ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಿ ಗದಗ ಪರಿಸರಕ್ಕೆ ಮಾದರಿ ವೈದ್ಯರಾಗಿದ್ದಾರೆ. ಕಳೆದ ದಶಕದಿಂದ ಬರವಣಿಗೆಯಲ್ಲಿ ತೊಡಗಿಕೊಂಡು ಅನೇಕ ಉಪಯುಕ್ತ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯುವದರ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.ದತ್ತಿ ದಾನಿಗಳಾದ ಡಾ. ಧನೇಶ ದೇಸಾಯಿ ಮಾತನಾಡಿ, ಶೇಕುಬಾಯಿ ಅವರು ಶಿಕ್ಷಣ, ಸಂಗೀತದಲ್ಲಿ ಆಸಕ್ತಿ ಹೊಂದಿ ಪರಹಿತವನ್ನು ಬಯಸುವ ಆದರ್ಶ ಗುಣಗಳ ಗಣಿಯಾಗಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಮುಖಿ ಸೇವೆಗೆ ಅಣಿಗೊಳಿಸಿದರು. ಗದಗ ಪರಿಸರದಲ್ಲಿ ವೈದ್ಯರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುವ ಡಾ. ಶಾಂತಾಬಾಯಿ ಭೂಮರಡ್ಡಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಡಾ. ಶಾಂತಾಬಾಯಿ ಭೂಮರಡ್ಡಿ ಅವರ ಕಾಯಕ ನಿಷ್ಠೆ, ಶ್ರದ್ಧೆ ಮತ್ತು ಅರ್ಪಣಾ ಮನೋಭಾವ, ಸಮಯಪ್ರಜ್ಞೆ ಕುರಿತು ರಾಜು ಗುಡಿಮನಿ, ಡಾ. ಜಿ.ಬಿ. ಬೀಡಿನಹಾಳ, ಕೆ.ಎಚ್. ಬೇಲೂರ, ಡಾ. ಪ್ರಭಾ ದೇಸಾಯಿ, ಡಾ. ಜಗದೀಶ ಭೂಮರಡ್ಡಿ, ಚಂದ್ರಶೇಖರ ವಸ್ತ್ರದ, ಅನ್ನದಾನಿ ಹಿರೇಮಠ, ಭಾರತಿ ಕೋಟಿ, ಶ್ವೇತಾ ಕೋಟಿ, ಸುರೇಖಾ ಪಿಳ್ಳಿ, ಶಾರದಾ ಕಾತರಕಿ ಮೊದಲಾದವರು ಮಾತನಾಡಿದರು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ನಿರೂಪಿಸಿದರು. ಸತೀಶಕುಮಾರ ಚನ್ನಪ್ಪಗೌಡರ ವಂದಿಸಿದರು.