ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಸ್ಮರಣೆ ಔಚಿತಪೂರ್ಣ: ಎಸ್ಪಿ ಶ್ರೀಹರಿಬಾಬು

| Published : Jun 23 2025, 11:47 PM IST

ಸಾರಾಂಶ

ಡಾ. ಎಸ್.ಪಿ. ಬಾಲಸುಬ್ರಮಣ್ಯಂ ೧೬ ಭಾಷೆಗಳ ೫೦ ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಡಾ. ಎಸ್.ಪಿ. ಬಾಲಸುಬ್ರಮಣ್ಯಂ ೧೬ ಭಾಷೆಗಳ ೫೦ ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇಂತಹ ಮಹನೀಯರ ಸ್ಮರಣೆ ಔಚಿತಪೂರ್ಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎಲ್. ಶ್ರೀಹರಿಬಾಬು ಹೇಳಿದರು.

ಅಂತಾರಾಷ್ಟ್ರೀಯ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಗಾನಗಂಗ ಕಲಾ ಪ್ರತಿಷ್ಠಾನ ಗೌತಮ ಬುದ್ಧ ಪಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ ನೆನಪಿನ ದೋಣಿಯಲ್ಲಿ ಸಂಗೀತ ನಮನ ಕಾರ್ಯಕ್ರಮವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಮಣ್ಯಂ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೋನೇಟಿಪೇಟಂ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿದ್ದಾಗ ಹಾರ್ಮೋನಿಯಂ ಮತ್ತು ಕೊಳಲು ನುಡಿಸುವುದನ್ನು ಅಭ್ಯಾಸ ಮಾಡಿದರು. ಅವರ ತಂದೆ ಹರಿಕಥೆ ವಿದ್ವಾಂಸರಾಗಿದ್ದರಿಂದ ಇವರಿಗೆ ಸಂಗೀತ ಸರಸ್ವತಿ ಒಲಿದಳು ಎಂದರು.

ನಿವೃತ್ತ ಪೋಲಿಸ್ ಅಧಿಕಾರಿಗಳ ವಿಜಯನಗರ ಜಿಲ್ಲಾ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ಸರ್ಕಾರಿ ನೌಕರ ಬಿ.ಮಾರೆಣ್ಣ, ನಿವೃತ್ತ ಪೋಲಿಸ್ ಅಧಿಕಾರಿಗಳಾದ ಗಜಾನಂದ ನಾಯಕ, ಬುಡ್ಗಜಂಗಮ್, ಅಲೆಮಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ, ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ್ ಇತರರು ಭಾಗವಹಿಸಿದ್ದರು.

ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಬಂಡಾರ್‌ದಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಜಲಿ ಭರತನಾಟ್ಯ ತಂಡದ ಕಲಾವಿದರು ಭಾರತನಾಟ್ಯ ಪ್ರದರ್ಶನ ನೀಡಿದರು. ಸ್ಥಳೀಯ ಕಲಾವಿದರು ಗೀತೆಯ ಮೂಲಕ ಸಂಗೀತ ನಮನ ಸಲ್ಲಿಸಿದರು. ವಕೀಲ ಎಚ್.ಬಿ. ಕಲ್ಲಂಭಟ್ ನಿರೂಪಿಸಿ, ವಂದಿಸಿದರು.