ಸಾರಾಂಶ
ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಡಾ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಎಂಜಿಎಂ ಕಾಲೇಜಿನ ನಿವೃತ್ತ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ ಮಾಲತಿ ಕೆ. ಮೂರ್ತಿ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಡಾ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ ಎಪ್ರಿಲ್ 18ರಂದು ನಡೆಯಿತು.ಡಾ.ಬಿ ವಸಂತ ಶೆಟ್ಟಿಯವರ ಸಹಪಾಠಿ ಹಾಗೂ ಎಂಜಿಎಂ ಕಾಲೇಜಿನ ನಿವೃತ್ತ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ ಮಾಲತಿ ಕೆ. ಮೂರ್ತಿಯವರು ತುಳುನಾಡಿನ ಶಿಕ್ಷಣ, ಭಾಷೆಯ ಮೇಲೆ ಪಾಶ್ಚಿಮಾತ್ಯರ ಪ್ರಭಾವದ ಕುರಿತಾಗಿ ಉಪನ್ಯಾಸ ನೀಡಿದರು.
ಡಾ.ಬಿ ವಸಂತ ಶೆಟ್ಟಿ ಅವರ ಇತಿಹಾಸದ ಆಸಕ್ತಿ, ಹಾಗೂ ಇತಿಹಾಸದ ಅಧ್ಯಯನದ ಕುರಿತು ಇಂದಿನ ಯುವ ಸಮುದಾಯ ಯಾವ ರೀತಿ ಜಾಗೃತರಾಗಬೇಕು ಎನ್ನುವ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗೂ ಪಾಡ್ದನಗಳ ಕುರಿತಾಗಿ ಪಾಶ್ಚಿಮಾತ್ಯರ ಅಧ್ಯಯನದ ಬಗ್ಗೆ ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ ಪ್ರಭು ಇವರು ತುಳುನಾಡಿನ ರಾಜಕೀಯದಲ್ಲಿ ಪಾಶ್ಚಿಮಾತ್ಯರ ಪ್ರಭಾವದ ಕುರಿತಾಗಿ ಒಂದೆರಡು ಮಾತುಗಳನ್ನಾಡಿದರು.
ಇನೋರ್ವ ಮುಖ್ಯ ಅತಿಥಿಗಳಾದ ಮಾಹೆ ಸಾಂಸ್ಕೃತಿಕ ಕೇಂದ್ರದ ಆಡಳಿತಾಧಿಕಾರಿಯಾದ ಡಾ.ಬಿ ಜಗದೀಶ್ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಡಾ.ಬಿ. ವಸಂತ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕ್ಷೇಮ ಪಾಲನಾ ಅಧಿಕಾರಿಗಳು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ರಮೇಶ್ ಟಿ. ಎಸ್. ವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ಇತಿಹಾಸ ಅಧ್ಯಯನದ ಮಹತ್ವದ ಕುರಿತಾಗಿ ವಿವರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನಿತ್ಯಾನಂದ ಮತ್ತು ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಹೇಶ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕಿ ಶಿಲ್ಪಲತಾ ವಂದಿಸಿದರು. ವಿದ್ಯಾರ್ಥಿ ಶ್ರೀರಕ್ಷಾ ಪ್ರಾರ್ಥಿಸಿ, ಚೇತನಾ ಪೈ ಕಾರ್ಯಕ್ರಮ ನಿರೂಪಿಸಿದರು.